
ಮೆಲ್ಬೋರ್ನ್(ನ.26): ಪ್ರಬಲ ಪೈಪೋಟಿಯಿಂದ ಕೂಡಿದ್ದ ಮತ್ತೊಂದು ಪಂದ್ಯದಲ್ಲಿ ಅಷ್ಟೇ ದಿಟ್ಟ ಹೋರಾಟ ನೀಡಿದ ಹೊರತಾಗಿಯೂ ಪ್ರವಾಸಿ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 2-3 ಗೋಲುಗಳ ಸೋಲಿನೊಂದಿಗೆ ನಾಲ್ಕು ರಾಷ್ಟ್ರಗಳ ಆಹ್ವಾನಿತ ಟೂರ್ನಿಯ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿತು.
ಇಂದು ನಡೆದ ಪಂದ್ಯದಲ್ಲಿ ಕಿವೀಸ್ ಒಡ್ಡಿದ ಸವಾಲನ್ನು ಮೆಟ್ಟಿನಿಲ್ಲಲು ವಿ.ಆರ್. ರಘುನಾಥ್ ಸಾರಥ್ಯದ ಭಾರತ ತಂಡ ಫಲಕಾರಿಯಾಗಲಿಲ್ಲ. ವಿಜೇತ ತಂಡದ ಪರವಾಗಿ ನಿಕ್ ರಾಸ್ (47ನೇ ನಿ.), ಜೇಕಬ್ ಸ್ಮಿತ್ (48ನೇ ನಿ.) ಹಾಗೂ ಹ್ಯೂಗೊ ಇಂಗ್ಲಿಸ್ 57ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ಬಾರಿಸಿದರೆ, ಭಾರತದ ಪರ ರೂಪೀಂದರ್ ಪಾಲ್ ಸಿಂಗ್ 18 ಮತ್ತು 57ನೇ ನಿಮಿಷದಲ್ಲಿ ಎರಡು ಗೋಲು ಹೊಡೆದರು. ಮಲೇಷಿಯಾದಲ್ಲಿ ನಡೆದ ಏಷ್ಯಾ ಚಾಂಪಿಯನ್'ಶಿಪ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ರೂಪೀಂದರ್ ಪಾಲ್ ಸಿಂಗ್ ತಮ್ಮ ಪ್ರಚಂಡ ಫಾರ್ಮ್ ಮುಂದುವರೆಸಿದರಾದರೂ, ಭಾರತದ ಗೆಲುವಿಗೆ ಅವರ ಏಕಾಂಗಿ ಹೋರಾಟ ಸಾಕಾಗಲಿಲ್ಲ.
ಭಾನುವಾರ ನಡೆಯಲಿರುವ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿನ ಸೆಣಸಾಟದಲ್ಲಿ ಭಾರತ ಮತ್ತು ಮಲೇಷಿಯಾ ಸೆಣಸಲಿದ್ದರೆ, ಫೈನಲ್ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.