ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕ್ರೀಡಾಳುಗಳಿವರು!

By Web DeskFirst Published Nov 30, 2018, 3:32 PM IST
Highlights

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಮಹನೀಯರಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಆ ಮೂರೂ ಸಾಧಕರ ಕಿರುಪರಿಚಯ ನಿಮ್ಮ ಮುಂದೆ...

ಬೆಂಗಳೂರು[ನ.30]: ನಾಡಿನ ಹಿರಿಮೆ ಎತ್ತಿ ಹಿಡಿದ ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗುರುವಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಈ ಬಾರಿ ಒಟ್ಟು 60 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಮಹನೀಯರಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಆ ಮೂರೂ ಸಾಧಕರ ಕಿರುಪರಿಚಯ ನಿಮ್ಮ ಮುಂದೆ... 
 
ಕೆನ್ನೆತ್‌ ಪೊವೆಲ್‌, ಅಥ್ಲೀಟ್‌

ರಾಜ್ಯ ಕಂಡ ಅತ್ಯಂತ ಶ್ರೇಷ್ಠ ಓಟಗಾರರಲ್ಲಿ ಕೆನ್ನೆತ್‌ ಪೊವೆಲ್‌ ಕೂಡ ಒಬ್ಬರು. ಮೂಲತಃ ಕೋಲಾರದವರು. ಕರ್ನಾಟಕದ ಮೊದಲ ಒಲಿಂಪಿಯನ್‌ ಸ್ಪರ್ಧಿ ಎನ್ನುವ ಕೀರ್ತಿ ಇವರದ್ದು. 
1964ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 100 ಮೀ., 200 ಮೀ. ಓಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸಿ ಪದಕ ಸಾಧನೆ ಮಾಡಿದ್ದಾರೆ. 19 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದರು. ಭಾರತ ಸರ್ಕಾರ 1965ರಲ್ಲಿ ಪೊವೆಲ್‌ಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತ್ತು.

ವಿ.ಎಸ್‌. ವಿನಯ, ಹಾಕಿ ಪಟು

ಕೊಡಗಿನ ಕಲಿ ವಿ.ಎಸ್‌.ವಿನಯ, ಭಾರತ ಹಾಕಿ ತಂಡದಲ್ಲಿ ಮಿಡ್‌ಫೀಲ್ಡರ್‌ ಆಗಿದ್ದವರು. 2002ರಿಂದ 2012ರವರೆಗೆ ರಾಷ್ಟ್ರೀಯ ತಂಡದಲ್ಲಿ ಕಾಯಂ ಆಟಗಾರರಾಗಿದ್ದರು. 2005ರ ಕಿರಿಯರ ವಿಶ್ವಕಪ್‌, 2006ರ ವಿಶ್ವಕಪ್‌, ಅದೇ ವರ್ಷ ಏಷ್ಯನ್‌ ಗೇಮ್ಸ್‌, 2008, 2009ರ ಏಷ್ಯಾಕಪ್‌, 2003ರಿಂದ 2009ರವರೆಗೆ ಅಜ್ಲಾನ್‌ ಷಾ ಕಪ್‌, 2004ರಿಂದ 2006 ರವರೆಗೆ ಸತತ 3 ವರ್ಷಗಳ ಕಾಲ ಚಾಂಪಿಯನ್ಸ್‌ ಟ್ರೋಫಿ ಸೇರಿದಂತೆ ಹಲವು ಟೂರ್ನಿಗಳಲ್ಲಿ ವಿನಯ್‌ ಭಾರತವನ್ನು ಪ್ರತಿನಿಧಿಸಿದ್ದರು.

ಆರ್‌.ಚೇತನ್‌, ಪ್ಯಾರಾ ಬ್ಯಾಡ್ಮಿಂಟನ್‌ ಪಟು

ಹಾಸನದ ಆರ್‌.ಚೇತನ್‌ 2009ರಲ್ಲಿ ಐರ್ಲೆಂಡ್‌ನಲ್ಲಿ ನಡೆದ ವಿಶ್ವ ಕುಬ್ಜರ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು. 2010ರಲ್ಲಿ ಚೀನಾದಲ್ಲಿ ನಡೆದ ಕುಬ್ಜರ ಕ್ರೀಡಾಕೂಟಕ್ಕೂ ಆಯ್ಕೆಯಾಗಿದ್ದರು. 2008ರಲ್ಲಿ ಚೆನ್ನೈನಲ್ಲಿ ನಡೆದ ಅಂ.ರಾ. ಬ್ಯಾಡ್ಮಿಂಟನ್‌ ಟೂರ್ನಿಯ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಅವರು, 2008ರಲ್ಲಿ ಬೆಂಗಳೂರಲ್ಲಿ ನಡೆದಿದ್ದ ಏಷ್ಯನ್‌ ಪ್ಯಾರಾ ಒಲಿಂಪಿಕ್ಸ್‌ ಕಪ್‌ನಲ್ಲಿ 2ನೇ ಸ್ಥಾನ, 10ನೇ ಹಿರಿಯರ ಪ್ಯಾರಾ ಅಥ್ಲೆಟಿಕ್ಸ್‌ನ ಜಾವೆಲಿನ್‌ ಥ್ರೋನಲ್ಲಿ ಬೆಳ್ಳಿ ಗೆದ್ದಿದ್ದರು.

click me!