
ಬೆಂಗಳೂರು[ಆ.24]: ಅಂಕಿತ್ ಕಲ್ಸಿ[106] ಆಕರ್ಷಕ ಶತಕ ಹಾಗೂ ಕರುಣ್ ನಾಯರ್[99] ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಇಂಡಿಯನ್ ರೆಡ್ ತಂಡವು ಮೊದಲ ಇನಿಂಗ್ಸ್’ನಲ್ಲಿ 285 ರನ್ ಗಳಿಸಿ ಆಲೌಟ್ ಆಗಿದೆ. ಇನ್ನು ಗುರಿ ಬೆನ್ನತ್ತಿರುವ ಶುಭ್’ಮನ್ ಗಿಲ್ ನೇತೃತ್ವದ ಇಂಡಿಯಾ ಬ್ಲೂ ತಂಡ ಎರಡನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 74 ರನ್ ಬಾರಿಸಿದೆ. ಹೀಗಾಗಿ ಪಂದ್ಯ ಇನ್ನೂ ಎರಡು ದಿನ ಬಾಕಿ ಇರುವುದರಿಂದ ಎರಡೂ ತಂಡಗಳಿಗೂ ಮೇಲುಗೈ ಸಾಧಿಸಲು ಸಮಾನ ಅವಕಾಶವಿದ್ದು, ಮೂರನೇ ದಿನದಾಟ ಸಾಕಷ್ಟು ರೋಚಕತೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ದುಲೀಪ್ ಟ್ರೋಫಿ: ಟಾಸ್ ಗೆದ್ದ ಭಾರತ ಬ್ಲೂ ಫೀಲ್ಡಿಂಗ್ ಆಯ್ಕೆ
ಮೊದಲ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿದ್ದ ಭಾರತ ರೆಡ್ ತಂಡ ಎರಡನೇ ದಿನ ಆರಂಭದಲ್ಲೇ ಸೆಟ್ ಬ್ಯಾಟ್ಸ್’ಮನ್ ಕರುಣ್ ನಾಯರ್ ವಿಕೆಟ್ ಕಳೆದುಕೊಂಡಿತು. ಮೊದಲ ದಿನ 92 ರನ್ ಬಾರಿಸಿದ್ದ ಕರುಣ್, ತನ್ನ ವಯುಕ್ತಿಕ ಖಾತೆಗೆ ಇನ್ನು ಕೇವಲ 7 ರನ್ ಸೇರಿಸಿ ಶತಕದ ಹೊಸ್ತಿಲಲ್ಲಿದ್ದಾಗ ಸೌರಭ್ ಕುಮಾರ್ ಬೌಲಿಂಗ್’ನಲ್ಲಿ ಸ್ಟಂಪ್’ಔಟ್ ಆಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಅಂಕಿತ್ ಕಲ್ಸಿ ಅವರೊಂದಿಗಿನ 137 ರನ್’ಗಳ ಜತೆಯಾಟಕ್ಕೆ ತೆರೆಬಿತ್ತು. ಇದರ ಬೆನ್ನಲ್ಲೇ ಕ್ರೀಸ್’ಗಿಳಿದ ಹರ್ಪ್ರೀತ್ ಸಿಂಗ್ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶನ್ ಕಿಶನ್ ಜತೆ ಮತ್ತೊಂದು ಉಪಯುಕ್ತ ಇನಿಂಗ್ಸ್ ಕಟ್ಟಿದ ಕಲ್ಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಅರ್ಧಶತಕ ಸಿಡಿಸಿ ಕಿಶನ್ ಪೆವಿಲಿಯನ್ ಸೇರಿದರು. ಆ ಬಳಿಕ ಇಂಡಿಯಾ ರೆಡ್ ಪರ ಯಾವೊಬ್ಬ ಬ್ಯಾಟ್ಸ್’ಮನ್ ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಕೆಚ್ಚೆದೆಯ ಹೋರಾಟ ನೀಡಿದ ಹಿಮಾಚಲ ಪ್ರದೇಶದ ಅಂಕಿತ್ ಕಲ್ಸಿ 345 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 106 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಶಾಕ್ ಕೊಟ್ಟ ಉನಾದ್ಕತ್: ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಡಿಯಾ ಬ್ಲೂ ತಂಡಕ್ಕೆ ವೇಗಿ ಜಯದೇವ್ ಉನಾದ್ಕತ್ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಆರಂಭಿಕ ಬ್ಯಾಟ್ಸ್’ಮನ್ ಸ್ನೆಲ್ ಪಟೇಲ್[0] ಹಾಗೂ ನಾಯಕ ಶುಭ್’ಮನ್ ಗಿಲ್[9] ಅವರನ್ನು ಪೆವಿಲಿಯನ್’ಗಟ್ಟುವಲ್ಲಿ ಯಶಸ್ವಿಯಾದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಋತುರಾಜ್ ಗಾಯಕ್ವಾಡ್’ಗೆ ಆವೇಶ್ ಖಾನ್ ಪೆವಿಲಿಯನ್ ಹಾದಿ ತೋರಿಸಿದರು. ಇದೀಗ ಅಂಕಿತ್ ಭಾವ್ನೆ[15], ಅನ್’ಮೋಲ್’ಪ್ರೀತ್ ಸಿಂಗ್[6] ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಇಂಡಿಯಾ ರೆಡ್: 285/10
ಅಂಕಿತ್ ಕಲ್ಸಿ: 106
ದಿವೀಸ್: 55/4
ಇಂಡಿಯಾ ಬ್ಲೂ: 74/3
ಋತುರಾಜ್ ಗಾಯಕ್ವಾಡ್: 37
ಜಯದೇವ್ ಉನಾದ್ಕತ್: 18/2
[* ಎರಡನೇ ದಿನದಾಟದಂತ್ಯಕ್ಕೆ]
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.