
ಭುವನೇಶ್ವರ: ಕೆಐಐಟಿ ಮತ್ತು ಕೆಐಎಸ್ಎಸ್ನ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು, ಭಾರತೀಯ ವಾಲಿಬಾಲ್ ಫೆಡರೇಶನ್ನ (ವಿಎಫ್ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ವಾರಣಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಅಚ್ಯುತ ಸಮಂತ ಅವರ ಆಯ್ಕೆ ನಡೆದಿದೆ. ವಾರಣಸಿಯಲ್ಲಿ ನಡೆದ ವಿಎಫ್ಐನ ವಾರ್ಷಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದ ಎಲ್ಲಾ ರಾಜ್ಯ ವಾಲಿಬಾಲ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಡಾ. ಸಮಂತ ಅವರು ಸದ್ಯ ಒಡಿಶಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ವಾರಾಣಸಿಯಲ್ಲಿ ನಡೆದ ಸಭೆಗೆ ಸಮಂತ ಅವರು ಹಾಜರಾಗಿರಲಿಲ್ಲ. ಸಮಂತ ಅವರನ್ನು ವಿಎಫ್ಐ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ದೂರವಾಣಿ ಮೂಲಕ ಸಂಪರ್ಕಿಸಿ ಒಪ್ಪಿಗೆ ಪಡೆದರು.
ಕ್ರೀಡಾ ಕ್ಷೇತ್ರಕ್ಕೆ ವಿಶೇಷವಾಗಿ ವಾಲಿಬಾಲ್ಗೆ ಸಮಂತ ಅವರು ಬಹಳ ಕಾಲದಿಂದ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇದನ್ನು ಪರಿಗಣಿಸಿ ಫೆಡರೇಶನ್ ಅವರ ಹೆಸರನ್ನು ಆಯ್ಕೆ ಮಾಡಿತು. 4 ವರ್ಷಗಳ ಅವಧಿಗೆ ಮುಖ್ಯ ಪೋಷಕ ಹುದ್ದೆಯನ್ನು ಅಲಂಕರಿಸಲಿದ್ದಾರೆ. ತಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಕ್ಕೆ ಡಾ.ಸಮಂತ ಅವರು ವಿಎಫ್ಐಗೆ ಧನ್ಯವಾದ ಹೇಳಿದ್ದಾರೆ.
ಕೆಐಐಟಿಯಲ್ಲಿ ಯುವ ಕೂಟ: ಕೆಐಐಟಿಯಲ್ಲಿ ರಾಷ್ಟ್ರೀಯ ಯುವ ವಾಲಿಬಾಲ್ ಚಾಂಪಿಯನ್ಶಿಪ್ ಅನ್ನು ಆಯೋಜಿಸಲು ಜನರಲ್ ಕೌನ್ಸಿಲ್ ಇದೇ ವೇಳೆ ಅನುಮೋದನೆ ನೀಡಿತು.
ಡಾ. ಸಮಂತಾ ಅವರಿಗೆ ಪ್ರತಿಷ್ಠಿತ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಮತ್ತು ಅವರನ್ನು ಎಫ್ಐವಿಬಿ ವಾಲಿಬಾಲ್ ಫೌಂಡೇಶನ್ ಕೌನ್ಸಿಲ್ನ ಸದಸ್ಯರನ್ನಾಗಿ ನೇಮಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ (ಎಫ್ಐವಿಬಿ) ಗೆ ವಿಎಫ್ಐ ಇದೇ ವೇಳೆ ಕೃತಜ್ಞತೆ ತಿಳಿಸಿತು.
ವಾಲಿಬಾಲ್ ನನ್ನ ಹೃದಯಕ್ಕೆ ಹತ್ತಿರವಾಗಿದೆ. ನೀವೆಲ್ಲ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಚಿರಋಣಿ. ತಳಮಟ್ಟದಿಂದ ವಾಲಿಬಾಲ್ ಅನ್ನು ಹೆಚ್ಚು ಪ್ರಚುರಪಡಿಸಲು ನಾನು ಸದಾ ಪ್ರಯತ್ನಿಸಿದ್ದೇನೆ. ವಿಎಫ್ಐ ನೀಡುತ್ತಾ ಬಂದಿರುವ ಪ್ರೋತ್ಸಾಹವನ್ನು ಮರೆಯಲಾಗದು. ಒಡಿಶಾ ಮತ್ತು ಭಾರತದಾದ್ಯಂತ ವಾಲಿಬಾಲ್ನ ಪ್ರಚಾರ ಮತ್ತು ಬೆಳವಣಿಗೆಗಾಗಿ ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡುತ್ತೇನೆ.
ಡಾ. ಅಚ್ಯುತ ಸಮಂತ, ವಿಎಫ್ಐ ಮುಖ್ಯ ಪೋಷಕ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.