ಡೆಲ್ಲಿ ಡೇರ್’ಡೆವಿಲ್ಸ್’ಗಿಂದು ಅಗ್ನಿ ಪರೀಕ್ಷೆ

First Published Apr 27, 2018, 6:10 PM IST
Highlights

ನೂತನವಾಗಿ ನಾಯಕತ್ವ ವಹಿಸಿಕೊಂಡಿರುವ ಯುವ ಆಟಗಾರ ಶ್ರೇಯಸ್ ಅಯ್ಯರ್, ತಮ್ಮ ಮೊದಲ ಪಂದ್ಯದಲ್ಲೇ ಒತ್ತಡಕ್ಕೆ ಸಿಲುಕಿದ್ದಾರೆ. ಗೌತಮ್ ಗಂಭೀರ್ ಸತತ ವೈಫಲ್ಯದಿಂದ ರಿಶಬ್ ಪಂತ್ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ. ಇದೀಗ ಗಂಭೀರ್ ನಾಯಕತ್ವ ತ್ಯಜಿಸಿದ್ದು, ಆಡುವ ಹನ್ನೊಂದರಲ್ಲಿ ಸ್ಥಾನ ಉಳಿಸಿ ಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ನವದೆಹಲಿ[ಏ.27]: ಡೆಲ್ಲಿ ಡೇರ್‌ಡೆವಿಲ್ಸ್ ನಾಯಕ ಬದಲಾಗಿದ್ದಾರೆ, ತಂಡದ ಅದೃಷ್ಟ ಬದಲಾಗುತ್ತಾ?.. ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹುಟ್ಟಿರುವ ಪ್ರಶ್ನೆ ಇದು. ಐಪಿಎಲ್ 11ನೇ ಆವೃತ್ತಿಯ 26ನೇ ಪಂದ್ಯದಲ್ಲಿ ಇಂದು ಡೆಲ್ಲಿ ತಂಡ, ಕೋಲ್ಕತಾ ನೈಟ್‌’ರೈಡರ್ಸ್‌ ವಿರುದ್ಧ ಸೆಣಸಲಿದ್ದು ಶತಾಯಗತಾಯ ಗೆಲ್ಲಲ್ಲೇಬೇಕೆಂದು ಪಣತೊಟ್ಟಿದೆ.

6 ಪಂದ್ಯಗಳಲ್ಲಿ ತಂಡ ಈಗಾಗಲೇ 5ರಲ್ಲಿ ಸೋಲುಂಡಿದ್ದು, ದಿನೇ ದಿನೇ ಪ್ಲೇ-ಆಫ್ ಹಾದಿ ಕಠಿಣಗೊಳ್ಳುತ್ತಿದೆ. ನೂತನವಾಗಿ ನಾಯಕತ್ವ ವಹಿಸಿಕೊಂಡಿರುವ ಯುವ ಆಟಗಾರ ಶ್ರೇಯಸ್ ಅಯ್ಯರ್, ತಮ್ಮ ಮೊದಲ ಪಂದ್ಯದಲ್ಲೇ ಒತ್ತಡಕ್ಕೆ ಸಿಲುಕಿದ್ದಾರೆ. ಗೌತಮ್ ಗಂಭೀರ್ ಸತತ ವೈಫಲ್ಯದಿಂದ ರಿಶಬ್ ಪಂತ್ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ. ಇದೀಗ ಗಂಭೀರ್ ನಾಯಕತ್ವ ತ್ಯಜಿಸಿದ್ದು, ಆಡುವ ಹನ್ನೊಂದರಲ್ಲಿ ಸ್ಥಾನ ಉಳಿಸಿ ಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಜೇಸನ್ ರಾಯ್ ಹಾಗೂ ಕ್ರಿಸ್ ಮೋರಿಸ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಈ ಪಂದ್ಯಕ್ಕೆ ಅವರಿಬ್ಬರ ಲಭ್ಯತೆ ಬಗ್ಗೆ ಖಚಿತತೆ ಇಲ್ಲ. ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ರನ್ ಗಳಿಸಲು ಪರದಾಡುತ್ತಿದ್ದರೆ, ಬೌಲರ್‌ಗಳ ಪ್ರದರ್ಶನ ತೀರಾ ಕಳಪೆಯಾಗಿದೆ. ಹೀಗಾಗಿ ಸಮಸ್ಯೆಗಳ ಸಾಗರದಲ್ಲಿ ಡೆಲ್ಲಿ ಈಜಬೇಕಿದೆ.
ಕೆಕೆಆರ್‌ಗೆ ಬೌಲಿಂಗ್‌ನದ್ದೇ ಚಿಂತೆ: ಕೋಲ್ಕತಾ ಸಹ ತನ್ನ ಬೌಲಿಂಗ್ ವಿಭಾಗವನ್ನು ಸರಿಪಡಿಸಿಕೊಳ್ಳಲು ತಿಣುಕಾಡುತ್ತಿದೆ. ಆದರೆ ತಂಡದ ಬ್ಯಾಟಿಂಗ್ ವಿಭಾಗ ಮಿಂಚುತ್ತಿದ್ದು 2 ಬಾರಿ 200ಕ್ಕೂ ಹೆಚ್ಚು ಮೊತ್ತ ದಾಖಲಾಗಲು ಕಾರಣರಾಗಿದ್ದಾರೆ. ಆದರೆ ದೊಡ್ಡ ಮೊತ್ತವನ್ನು ರಕ್ಷಿಸಿಕೊಳ್ಳಲು ಬೌಲರ್‌ಗಳು ವಿಫಲರಾಗುತ್ತಿದ್ದಾರೆ. ಕೆಕೆಆರ್ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, ಇನ್ನುಳಿದ 3ರಲ್ಲಿ ಸೋತಿದೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಕೆಕೆಆರ್ 71 ರನ್ ಗೆಲುವು ಸಾಧಿಸಿತ್ತು.

ತಂಡದ ತ್ರಿವಳಿ ಸ್ಪಿನ್ನರ್‌ಗಳಾದ ಸುನಿಲ್ ನರೈನ್, ಕುಲ್ದೀಪ್ ಯಾದವ್ ಹಾಗೂ ಪೀಯೂಷ್ ಚಾವ್ಲಾ ಮಿಂಚಿನ ಪ್ರದರ್ಶನ ತೋರಿದ್ದರು. ಕೋಟ್ಲಾ ಮೈದಾನ ಸ್ಪಿನ್ನರ್‌ಗಳಿಗೆ ನೆರವು ನೀಡಲಿದ್ದು, ಕೆಕೆಆರ್ ಮತ್ತೊಮ್ಮೆ ಸ್ಪಿನ್ನರ್ ಗಳೇ ನೆಚ್ಚಿಕೊಂಡಿದೆ. 

click me!