
ಚೆನ್ನೈ: ಐಪಿಎಲ್ 11ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ರೈಡರ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ.
ಇಲ್ಲಿನ ಚೇಪಾಕ್ ಕ್ರೀಡಾಂಗಣದಲ್ಲಿ 2 ವರ್ಷಗಳ ಬಳಿಕ ಕಣಕ್ಕಿಳಿಯಲಿರುವ ಚೆನ್ನೈ, ಜಯದ ಓಟ ಮುಂದುವರಿಸಲು ಕಾತರಿಸುತ್ತಿದೆ. ಸಿಎಸ್'ಕೆ ಅಭ್ಯಾಸ ಪಂದ್ಯಕ್ಕೇ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಧೋನಿ ಹಾಗೂ ತಂಡವನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಪಂದ್ಯದ ಟಿಕೆಟ್'ಗಳು ಸೋಲ್ಡ್'ಔಟ್ ಆಗಿದ್ದು, ತಂಡದ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.
ಹಿರಿಯ ಆಟಗಾರರನ್ನೇ ಹೆಚ್ಚಾಗಿ ಹೊಂದಿರುವ ಚೆನ್ನೈ ತಂಡದಲ್ಲಿ ಅನುಭವಕ್ಕೆ ಕೊರತೆಯಿಲ್ಲ. ಅನುಭವ ಎಷ್ಟು ಮುಖ್ಯ ಎನ್ನುವುದನ್ನು ಚೆನ್ನೈ ಮೊದಲ ಪಂದ್ಯದಲ್ಲೇ ತೋರಿಸಿದೆ. ಮತ್ತೊಂದೆಡೆ ಕೆಕೆಆರ್ ತಂಡವನ್ನು ಮುನ್ನಡೆಸಲಿರುವ ದಿನೇಶ್ ಕಾರ್ತಿಕ್'ಗೂ ಸಹ ಇದು ತವರು ಕ್ರೀಡಾಂಗಣವಾಗಿದೆ. ದೇಸಿ ಕ್ರಿಕೆಟ್ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುವ ಕಾರ್ತಿಕ್, ತವರಿನಲ್ಲಿ ಮಿಂಚಿ ಸಿಎಸ್'ಕೆಗೆ ಆಘಾತ ನೀಡಲು ಕಾಯುತ್ತಿದ್ದಾರೆ
IPL ಗೂ ತಟ್ಟಿದ 'ಕಾವೇರಿ' ಬಿಸಿ:
ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಆಗ್ರಹಿಸಿ ತಮಿಳುನಾಡಿನಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆ ಬಿಸಿ, ರಾಜ್ಯದಲ್ಲಿ ಆಯೋಜನೆಯಾಗಿರುವ ಐಪಿಎಲ್ ಪಂದ್ಯಗಳಿಗೂ ತಾಗಿದೆ.
ಐಪಿಎಲ್ನ ಯಾವುದೇ ಪಂದ್ಯಗಳನ್ನು ಹಮ್ಮಿಕೊಂಡಲ್ಲಿ, ಚೇಪಾಕ್ ಕ್ರೀಡಾಂಗಣದ ಎದುರು ಪ್ರತಿಭಟನೆ ನಡೆಸುವುದಾಗಿ ಕಾವೇರಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಆದರೆ ಯಾವುದೇ ಆತಂಕವಿಲ್ಲದಂತೆ ಪಂದ್ಯ ನಡೆಸಲು ಪೊಲೀಸರು ಭರವಸೆ ನೀಡಿದ್ದಾರೆ ಎಂದು ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.