
ನವದೆಹಲಿ[ಡಿ.07]: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರಾದ ಡೆಲ್ಲಿ ಬ್ಯಾಟ್ಸ್’ಮನ್ ಗೌತಮ್ ಗಂಭೀರ್ ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ವಿದಾಯದ ಬೆನ್ನಲ್ಲೇ ಗಂಭೀರ್ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಸ್ವತಃ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.
ಗಂಭೀರ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಗಾಳಿಮಾತಿಗೆ ಸ್ಪಷ್ಟನೆ ನೀಡಿರುವ ಗಂಭೀರ್, ಇವೆಲ್ಲ ಕೇವಲ ಗಾಳಿಮಾತುಗಳಷ್ಟೇ. ಈ ಸುದ್ದಿ ಹೇಗೆ ಹರಡಿತೋ ಎಂದು ಗೊತ್ತಿಲ್ಲ ಎಂದು ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.
ಇನ್ನು ತಾವೆದುರಿಸಿದ ಅತಿ ಕಠಿಣ ಬೌಲರ್ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಗೌತಿ, ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಎಂದು ಉತ್ತರಿಸಿದ್ದಾರೆ. ಮುರುಳಿಯ ಅತಿ ದೊಡ್ಡ ಶಕ್ತಿ ಎಂದರೆ ಚೆಂಡಿನ ಮೇಲಿನ ಹಿಡಿತ ಹಾಗೂ ಸ್ಥಿರತೆ ಎಂದು ಗುಣಗಾನ ಮಾಡಿದ್ದಾರೆ. ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಒಟ್ಟು 26 ಬಾರಿ ಮುರುಳಿ-ಗೌತಿ ಮುಖಾಮುಖಿಯಾಗಿದ್ದು, ಕೇವಲ 7 ಬಾರಿಯಷ್ಟೇ ಲಂಕಾ ಸ್ಪಿನ್ನರ್’ಗೆ ವಿಕೆಟ್ ಒಪ್ಪಿಸಿದ್ದಾರೆ.
ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಗೆಲ್ಲೋರು ಯಾರು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಡಗೈ ಬ್ಯಾಟ್ಸ್’ಮನ್ ಗಂಭೀರ್, ವಿರಾಟ್ ಪಡೆ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಕಷ್ಟ ಎಂದಿದ್ದಾರೆ. ಒಟ್ಟಾರೆ ನನ್ನ ಹೃದಯ ಭಾರತ ಗೆಲ್ಲುತ್ತದೆ ಎನ್ನುತ್ತಿದ್ದರೆ, ಮನಸು ಆಸ್ಟ್ರೇಲಿಯಾ ಎನ್ನುತ್ತಿದೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.