ಶ್ರೀಲಂಕಾ ವಿರುದ್ಧ ದ್ವಿಪಕ್ಷೀಯ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಟಿ20 ಸರಣಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ರೋಚಕ ಪಂದ್ಯದ ವಿವರ ಇಲ್ಲಿದೆ.
ಕೊಲಂಬೊ(ಜು.25): ಇಲ್ಲಿ ಮಂಗಳವಾರ ಮುಕ್ತಾಯವಾದ ಅಂಧರ ಟಿ20 ಕ್ರಿಕೆಟ್ ಟೂರ್ನಿಯ 5ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿದ ಭಾರತ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಇದರೊಂದಿಗೆ ಭಾರತ 4-1 ಅಂತರದಿಂದ ಸರಣಿ ಜಯಿಸಿದೆ. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 5 ವಿಕೆಟ್ಗೆ 189 ರನ್ಗಳಿಸಿತು. ಇದಕ್ಕುತ್ತರವಾಗಿ ಭಾರತ ಸುನಿಲ್ ರಮೇಶ್ (103) ಶತಕದ ನೆರವಿನಿಂದ 16 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 190 ರನ್ಗಳಿಸಿ ಜಯಗಳಿಸಿತು. ಕಾರಣಾಂತರಗಳಿಂದ ಮಂಗಳವಾರವೇ ನಡೆದ 4ನೇ ಪಂದ್ಯದಲ್ಲಿ ಲಂಕಾ ವಿರುದ್ಧ ಭಾರತ 8 ವಿಕೆಟ್ಗಳ ಜಯ ಪಡೆಯಿತು.
ಟಿ20 ಸರಣಿಗೂ ಮೊದಲು ಶ್ರೀಲಂಕಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಸೋಲು ಅನುಭವಿಸಿತ್ತು. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 2-1 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತ್ತು. ಇದೀಗ ಏಕದಿನ ಸರಣಿ ಸೋಲಿಗೆ ಭಾರತ ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡಿದೆ.