ಸೋಲಿನ ಸೇಡು ವಜಾ-ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

By Web DeskFirst Published Sep 19, 2018, 11:10 PM IST
Highlights

ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಂತ್ಯಗೊಂಡಿದೆ. ಮಹತ್ವದ ಹೋರಾಟದಲ್ಲಿ ಟೀಂ ಇಂಡಿಯಾ ಅಲ್ರೌಂಡರ್ ಪ್ರದರ್ಶನ ನೀಡಿದೆ. ಈ ಮೂಲಕ ಬದ್ಧವೈರಿ ಪಾಕಿಸ್ತಾನಕ್ಕೆ ಸೋಲಿನ ಕಹಿ ನೀಡಿದೆ.
 

ದುಬೈ(ಸೆ.19): ಏಷ್ಯಾಕಪ್ ಟೂರ್ನಿ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ  2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ. 

ಗೆಲುವಿಗೆ 163 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 86 ರನ್ ಜೊತೆಯಾಟ ನೀಡಿದರು. ಈ ಮೂಲಕ ಭಾರತ ಗೆಲುವಿನತ್ತ ದಾಪುಗಾಲಿಟ್ಟಿತು. 

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ 39 ಎಸೆತದಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 52 ರನ್ ಸಿಡಿಸಿ ಔಟಾದರು. ಈ ಮೂಲಕ ರೋಹಿತ್ ತಮ್ಮ ಅತೀ ವೇಗದ ಏಕದಿನ ಅರ್ಧಶತಕ ಸಿಡಿಸಿದರು.  

ರೋಹಿತ್ ಶರ್ಮಾ ಬೆನ್ನಲ್ಲೇ ಶಿಖರ್ ಧವನ್ ಪೆವಿಲಿಯನ್ ಸೇರಿದರು. ಧವನ್ ವಿಕೆಟ್ ಪತನಗೊಂಡಿತು. ಧವನ್ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 46 ರನ್ ಕಾಣಿಕೆ ನೀಡಿದರು. 

ಅಂಬಾಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್ ಉಪಯುಕ್ತ ಜೊತೆಯಾಟ ನೀಡಿದರು. ಕಾರ್ತಿಕ್ ಅಜೇಯ 31 ರನ್ ಹಾಗೂ ರಾಯುಡು 31 ಅಜೇಯ ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 29 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.  

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಟೀಂ ಇಂಡಿಯಾ ಅದ್ಬುತ ಬೌಲಿಂಗ್ ದಾಳಿಗೆ ತತ್ತರಿಸಿತು. ಹೀಗಾಗಿ ಪಾಕ್ 162 ರನ್‌ಗೆ ಆಲೌಟ್ ಆಯಿತು. ಭಾರತದಪರ ಭುವನೇಶ್ವರ್ ಕುಮಾರ್ ಹಾಗೂ ಕೇದಾರ್ ಜಾಧವ್ ತಲಾ 3 ವಿಕೆಟ್ ಪಡೆದದರು. ಇನ್ನು ಜಸ್‌ಪ್ರೀತ್ ಬುಮ್ರಾ 2 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಕಬಳಿಸಿದರು.

click me!