ಮಧ್ಯಮ ವರ್ಗದ ಮಹೀ, ದೇಶದ ಐಕಾನ್ ಆಗಿದ್ದು ಹೀಗೆ!

By Kannadaprabha NewsFirst Published Aug 17, 2020, 5:58 PM IST
Highlights

ವಿಶ್ವ ಕ್ರಿಕೆಟ್‌ನ ಅದೆಷ್ಟೋ ದಾಖಲೆಗಳನ್ನು ಪುಡಿಗುಟ್ಟಿ, ಹೊಸ ದಾಖಲೆಗಳನ್ನೂ ಸೃಷ್ಟಿಸಿದ ಸಾಧಕ|  ಕ್ರಿಕೆಟ್ ಹಿನ್ನೆಲೆಯುಳ್ಳ ಕುಟುಂಬವೂ ಅವರದ್ದಾಗಿರಲಿಲ್ಲ| ಸಾಧಾರಣ ಕಂಪನಿ ಸಹಾಯಕನ ಪ್ರತಿಭಾವಂತ ಮಗ ಅಸಾಧಾರಣ ಕ್ರಿಕೆಟ್ ತಾರೆಯಾಗಿ ಮಿನುಗಿದ ಸ್ಫೂರ್ತಿಯ ಕತೆ

ರಾಂಚಿ(ಆ.17): ಮ ಹೇಂದ್ರ ಸಿಂಗ್ ಧೋನಿ ಅಲಿಯಾಸ್ ‘ಮಹೀ’ ಭಾರತ ಕ್ರಿಕೆಟ್ ತಂಡದ ನಾಯಕನಾಗುತ್ತಾನೆ ಎಂದು ಮನೆ ಮಂದಿ ಎಂದೂ ಅಂದುಕೊಂಡಿರಲಿಲ್ಲ. ವಿಶ್ವ ಕ್ರಿಕೆಟ್‌ನ ಅದೆಷ್ಟೋ ದಾಖಲೆಗಳನ್ನು ಪುಡಿಗುಟ್ಟಿ, ಹೊಸ ದಾಖಲೆಗಳನ್ನೂ ಸೃಷ್ಟಿಸಿ ಶ್ರೇಷ್ಠ ಕ್ರಿಕೆಟ್ ಸಾಧಕನಾಗುತ್ತಾನೆ ಎಂದು ರಾಂಚಿಯ ಜನರೂ ಊಹಿಸಿರಲಿಲ್ಲ!

ಆದರೆ ವಿಧಿಲಿಖಿತವೇ ಹಾಗಿತ್ತು. ಭಾರತೀಯ ಕ್ರಿಕೆಟ್‌ನಲ್ಲಿ ಹೊಸದೊಂದು ಅಧ್ಯಾಯ ಬರೆಯಬೇಕೆಂದಿತ್ತು. ಕ್ರಿಕೆಟ್ ಹಿನ್ನೆಲೆಯುಳ್ಳ ಕುಟುಂಬವೂ ಅವರದ್ದಾಗಿರಲಿಲ್ಲ. ಮಧ್ಯಮ ವರ್ಗದ ಕುಟುಂಬದಲ್ಲಿ 1982, ಜುಲೈ 7ರಂದು ಜನಿಸಿದ ಧೋನಿ, ಸಾಮಾನ್ಯ ಮಕ್ಕಳಂತೆ ಆಟ-ಪಾಠ ಎನ್ನುತ್ತಲೇ ಬೆಳೆದರು. ಎಸ್‌ಎಸ್‌ಎಲ್‌ಸಿ ಮುಗಿಸುತ್ತಿದ್ದಂತೆ ಪೋಷಕರು ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಮಗ ದುಡಿದು ಮನೆಗೆ ಆಧಾರವಾಗುತ್ತಾನೆಂಬ ನಿರೀಕ್ಷೆ ಅವರಲ್ಲಿತ್ತು. ಈ ಎಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆಯೇ ಧೋನಿ ಪಿಯು ಶಿಕ್ಷಣ ಮುಗಿಸಿಕೊಂಡರು. ಅಷ್ಟರಲ್ಲಾಗಲೇ ಕೋಚ್ ಸಲಹೆ ಮೇರೆಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು

2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಧೋನಿಗೆ ಸುಬ್ರಮಣಿಯನ್ ಸ್ವಾಮಿ ಸಲಹೆ!

ಧೋನಿ ಅವರ ತಂದೆ ಪಾನ್‌ಸಿಂಗ್. ಸಾಮಾನ್ಯ ಕಂಪನಿಯೊಂದರ ಆಡಳಿತ ವಿಭಾಗದಲ್ಲಿ ಸಹಾಯಕ ಹುದ್ದೆಯಲ್ಲಿದ್ದವರು. ತಾಯಿ ದೇವಕಿ ದೇವಿ ಮನೆ ಗೃಹಿಣಿ. ಮನೆ ನಿರ್ವಹಣೆ ಮಾಡಿಕೊಂಡರೆ ಸಾಕಾಗಿತ್ತು. ಸಹೋದರಿ ಜಯಂತಿ ಮತ್ತು ಸಹೋದರ ನರೇಂದ್ರನ ಶಿಕ್ಷಣದ ಜವಾಬ್ದಾರಿಯೂ ತಂದೆಯ ಮೇಲಿದ್ದುದನ್ನು ಅರಿತ ಧೋನಿಗೆ ಪಿಯು ಶಿಕ್ಷಣ ಮುಗಿಸಿದ ಬೆನ್ನಲ್ಲೇ ಉದ್ಯೋಗ ಅನಿವಾರ್ಯ ಎಂಬ ಸ್ಥಿತಿ ಎದುರಾಯಿತು. ದೂಸರಾ ಮಾತನಾಡದೆ ೨೦೦೧ರಲ್ಲಿ ಆಗ್ನೇಯ ರೈಲ್ವೆ ವ್ಯಾಪ್ತಿಗೆ ಬರುವ ಪಶ್ವಿಮ ಬಂಗಾಳದ ಖರಗ್‌ಪುರ ರೈಲ್ವೆ ಸ್ಟೇಷನ್‌ನಲ್ಲಿ ಟ್ರಾವೆಲ್ ಟಿಕೆಟ್ ಎಕ್ಸಾಮಿನರ್(ಟಿಟಿಇ) ಆಗಿ ಧೋನಿ ಕೆಲಸಕ್ಕೆ ಸೇರಿಕೊಂಡರು. ನಿರೀಕ್ಷೆಯಂತೆ ಸಾಧ್ಯವಾದಷ್ಟು ದುಡಿದು ತಂದು ಜವಾಬ್ದಾರಿಗೆ ತಂದೆಗೆ ಹೆಗಲಾದರು. ಆಗಷ್ಟೇ ಕ್ಲಬ್ ಕ್ರಿಕೆಟ್‌ನಲ್ಲಿ ಮಿಂಚಲಾರಂಬಿಸಿದ್ದ ಧೋನಿಗೆ ಒಂದಿಷ್ಟು ದಿನ ಕ್ರಿಕೆಟನ್ನೂ ಬಿಟ್ಟಿರಬೇಕಾದ ಸಂದಿಗ್ಧತೆಯೂ ಎದುರಿಸಿದರು. 2001ರಿಂದ 2003ರ ತನಕ ರೈಲ್ವೆಯಲ್ಲಿ ಸೇವೆ ಸಲ್ಲಿಸಿದರು.

ಎಂ ಎಸ್ ಧೋನಿ ಸರಿಯಾಗಿ ಸಂಜೆ 7.29ಕ್ಕೆ ನಿವೃತ್ತಿ ಘೋಷಿಸಿದ್ದೇಕೆ..? ಇಲ್ಲಿದೆ ನಿಜವಾದ ಕಾರಣ

ಇವೆಲ್ಲದರ ನಡುವೆಯೂ ಜಾರ್ಖಂಡ್ ಪರ ರಣಜಿ, ದೇವಧರ್ ಪಂದ್ಯಗಳಲ್ಲಿ ಆಡಿ ಶಹಬ್ಬಾಸ್ ಎನಿಸಿಕೊಂಡರು. 2003ರಲ್ಲಿ ಪ್ರಥಮದರ್ಜೆ ಕ್ರಿಕೆಟಿಗ ಪ್ರಕಾಶ್ ಚಂದ್ರ ಪೊದ್ದಾರ್ ಅವರು ಧೋನಿ ಆಟದ ವೈಖರಿ ಗಮನಿಸಿ ಭಾರತೀಯ ಕ್ರಿಕೆಟ್ ಆಕಾಡೆಮಿ(ಎನ್‌ಸಿಎ)ಗೆ ಮಾಹಿತಿ ನೀಡಿದರು. 2004ರಲ್ಲಿ ಭಾರತ ಎ ತಂಡಕ್ಕೆ ಆಯ್ಕೆಯಾಗಿ ಬಾಂಗ್ಲಾದೇಶ ಪ್ರವಾಸವನ್ನೂ ಕೈಗೊಂಡರು. ಮತ್ತೆ ಅಲ್ಲಿಂದ ಧೋನಿ ಹಿಂದಿರುಗಿ ನೋಡಲಿಲ್ಲ. ಅದೇ ವರ್ಷವೇ ಅಂತಾರಾಷ್ಟೀಯ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿ, 16 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ವಿಶ್ವವೇ ತಮ್ಮತ್ತ ನೋಡುವ ಶ್ರೇಷ್ಠ ಕ್ರಿಕೆಟ್ ಸಾಧಕನಾಗಿ ಬೆಳೆದು ನಿವೃತ್ತಿಯಾಗಿದ್ದಾರೆ.

click me!