
ಶ್ರೀಹರಿಕೋಟಾ (ಅಕ್ಟೋಬರ್ 21, 2023): ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಉಡಾವಣೆಯಾಗಬೇಕಿದ್ದ, ಬಳಿಕ ಕೆಲ ಕಾಲ ಮುಂದೂಡಿಕೆಯಾಗಿದ್ದ ಇಸ್ರೋದ ಗಗನಯಾನ ಮಿಷನ್ ಲಾಂಛ್ ಬೆಳಗ್ಗೆ 10 ಗಂಟೆಗೆ ಯಶಸ್ವಿಯಾಗಿದೆ.
ಬೆಳಗ್ಗೆ ರಾಕೆಟ್ ಉಡಾವಣೆಯಾಗಲು ಆರಂಭಿಕ ತೊಂದರೆಯಾದಾಗ ಕೆಲ ಕಾಲ ಆತಂಕಗೊಂಡಿತ್ತಾದರೂ, ಮಿಷನ್ ಯಶಸ್ವಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಸೊಮನಾಥ್, ಇಸ್ರೋದ ಉಡಾವಣೆ ಯಶಸ್ವಿಯಾಗಿದೆ ಎಂದಿದ್ದಾರೆ. ಹಾಗೂ, ಗಗನಯಾನ ಮಿಷನ್ನಲ್ಲಿ ಕೆಲಸ ಮಾಡಿದ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನ ಮಿಷನ್ ಪರೀಕ್ಷಾರ್ಥ ಉಡಾವಣೆ ಮುಂದೂಡಿಕೆ: ಕಾರಣ ಹೀಗಿದೆ..
ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಿದ ರಾಕೆಟ್ 17 ಕಿ.ಮೀ. ಎತ್ತರದಲ್ಲಿ ಗಗನಯಾನ ನೌಕೆಯನ್ನು ಬೇರ್ಪಟ್ಟಿದೆ. ಬಳಿಕ ನೌಕೆ ಪ್ಯಾರಾಚೂಟ್ ಸಹಾಯದಿಂದ ಬಂಗಾಳಕೊಲ್ಲಿಯಲ್ಲಿ ಇಳಿದಿದ್ದು, ಅಲ್ಲಿಂದ ಅದನ್ನು ಹಡಗಿನ ಮೂಲಕ ವಶಕ್ಕೆ ಪಡೆಯಲಾಗಿದೆ.
ನೌಕೆ ಉಡಾವಣೆ ಪರೀಕ್ಷೆ ನಡೆದಿದ್ದೇಗೆ?
ಶನಿವಾರ ಬೆಳಗ್ಗೆ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿರುವ ಒಂದನೇ ಲಾಂಚ್ ಪ್ಯಾಡ್ನಿಂದ ಈ ಪರೀಕ್ಷೆಗಾಗಿಯೇ ತಯಾರಿಸಲಾಗಿರುವ ರಾಕೆಟ್, ಗಗನಯಾನ ನೌಕೆಯ ಮಾಡೆಲನ್ನು ಹೊತ್ತು ಉಡಾವಣೆಯಾಗಿದೆ. 1 ನಿಮಿಷದ ಬಳಿಕ 11.7 ಕಿ.ಮೀ. ಎತ್ತರಕ್ಕೆ ಸಾಗುವ ರಾಕೆಟ್ ನೌಕೆಯಿಂದ ಬೇರ್ಪಟ್ಟಿದೆ. ಒಂದೂವರೆ ನಿಮಿಷಕ್ಕೆ 16 ಕಿ.ಮೀ. ಎತ್ತರಕ್ಕೆ ತಲುಪುವ ಗಗನಯಾನ ಕ್ರ್ಯೂ ಮಾಡ್ಯೂಲ್ ಇದಾದ ಬಳಿಕ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಬೂಸ್ಟರ್ನಿಂದಲೂ ಬೇರ್ಪಟ್ಟು ಭೂಮಿಯತ್ತ ಬೀಳಲು ಆರಂಭಿಸುತ್ತದೆ.
ಇದನ್ನು ಓದಿ: ಚಂದ್ರಯಾನ ಆಯ್ತು, ಈಗ ಬಾಹ್ಯಾಕಾಶಕ್ಕೆ ಮಹಿಳಾ ರೋಬೋಟ್ ಕಳಿಸಲಿದೆ ಭಾರತ!
ಈ ಹಂತದಲ್ಲಿ ಗಗನಯಾನ ನೌಕೆ ಮತ್ತು ಸಿಬ್ಬಂದಿಗಳನ್ನು ರಕ್ಷಿಸಲು ಇರುವ ಉಪಕರಣ ಎರಡೂ ಪ್ರತ್ಯೇಕಗೊಂಡು ಸಮುದ್ರದತ್ತ ಧಾವಿಸಿದೆ. ಹೀಗೆ ರಾಕೆಟ್ನಿಂದ ಬೇರ್ಪಟ್ಟ 5 ಸೆಕೆಂಡ್ ಬಳಿಕ ನೌಕೆಯಲ್ಲಿರುವ ಪ್ಯಾರಾಚೂಟ್ ಬಿಚ್ಚಿಕೊಂಡಿದ್ದು, ನೌಕೆಯ ವೇಗವನ್ನು ನಿಯಂತ್ರಿಸಿ ಭೂಮಿಯತ್ತ ತರಲಿದೆ. 3 ನಿಮಿಷಗಳ ಕಾಲ ಈ ಪ್ಯಾರಾಚೂಟ್ನ ಸಹಾಯದಿಂದ ನೌಕೆ ಇಳಿದಿದೆ. ಬಳಿಕ ಮತ್ತೊಂದು ಶಕ್ತಿಶಾಲಿ ಪ್ಯಾರಾಚೂಟ್ ತೆರೆದುಕೊಂಡಿದ್ದು, ನೌಕೆಯನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಇಳಿದಿದೆ.
ಈ ಪರೀಕ್ಷೆ ಕೇವಲ 9 ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು, ಉಡ್ಡಯನ ಸ್ಥಳದಿಂದ 10 ಕಿ.ಮೀ ದೂರದ ಬಂಗಾಳಕೊಲ್ಲಿಯಿಂದ ನೌಕೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪರೀಕ್ಷೆಯನ್ನು ನಡೆಸುವುಕ್ಕೆ ಮೊದಲೇ ಇಸ್ರೋ, ನೌಕೆಯನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸಿದೆ. ಜೊತೆಗೆ ಎಂಜಿನ್, ಪ್ಯಾರಾಚೂಟ್ ಮತ್ತು ನೌಕೆಯ ವಶ ಎಲ್ಲದರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕೊನೆಯದಾಗಿ ಈ ಮಾನವ ರಹಿತ ಗಗನಯಾನದ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ: Chandrayaan 3 ಯಶಸ್ಸಿನಲ್ಲಿ ಈ ಎಂಜಿನಿಯರಿಂಗ್ ಕಾಲೇಜಿನ ಪಾತ್ರವೇನು ನೋಡಿ..!
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.