DRDO ಮಾಜಿ ವಿಜ್ಞಾನಿ, ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ!

By Suvarna NewsFirst Published Jul 2, 2021, 2:12 PM IST
Highlights

* ಅನಾರೋಗ್ಯದಿಂದ ಬಳಲುತ್ತಿದ್ದ DRDO ಮಾಜಿ ವಿಜ್ಞಾನಿ ನಿಧನ

* ಸುಪ್ರಸಿದ್ಧ ವಿಜ್ಞಾನ ಬರಹಗಾರ​ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ

 * ತೀವ್ರ ಹೃದಯಾಘಾತಕ್ಕೀಡಾಗಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಸುಧೀಂದ್ರ

ಬೆಂಗಳೂರು(ಜು.02) ಅನಾರೋಗ್ಯದಿಂದ ಬಳಲುತ್ತಿದ್ದ DRDO ಮಾಜಿ ವಿಜ್ಞಾನಿ, HAL ಹಿರಿಯ ನಿವೃತ್ತ ಇಂಜಿನಿಯರ್ ಹಾಗೂ ಸುಪ್ರಸಿದ್ಧ ವಿಜ್ಞಾನ ಬರಹಗಾರ​ ಸುಧೀಂದ್ರ ಹಾಲ್ದೊಡ್ಡೇರಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು.ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಕನ್ನಡಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಿಗೆ ವಿಜ್ಞಾನ ಬರಹಗಾರರಾಗಿದ್ದರು. 

ಒತ್ತಡಗಳನ್ನು ನಿಭಾಯಿಸಲು ಸಹಾಯವಾಯಿತು ಅಬ್ದುಲ್ ಕಲಾಂ ಮಾರ್ಗದರ್ಶನ: ವಿಜ್ಞಾನಿ ಸುಧೀಂದ್ರ

ಇನ್ನು ಮೆದುಳು ನಿಷ್ಕ್ರಿಯಗೊಂಡು ಹಾಲ್ದೊಡ್ಡೇರಿ ಮೃತಪಟ್ಟಿರುವುದರಿಂದ ಅವರ ದೇಹದಾನಕ್ಕೆ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಇದರಂತೆ ಬೆಂಗಳೂರು ಮೆಡಿಕಲ್ ಕಾಲೇಜಿಗೆ ಅಂಗಾಂಗ ದಾನ ಮಾಡಲಿದ್ದಾರೆ. ಇನ್ನು ಹಾಲ್ದೊಡ್ಡೇರಿಯವರಿಗೆ ಅನುಪಮಾ ನಿರಂಜನ ವೈದ್ಯಕೀಯ ವಿಜ್ಞಾನ ಪ್ರಶಸ್ತಿ ಬಂದಿದ್ದು, ಪ್ರಶಸ್ತಿ ಬಂದ ದಿನವೇ ಸುಧೀಂದ್ರ ನಿಧನ ಹೊಂದಿದ್ದಾರೆ.

ಒಬ್ಬ ಖ್ಯಾತ ವಿಜ್ಞಾನಿ ತಮ್ಮ ಮಕ್ಕಳಿಗೆ ಹೇಗೆ ಮಾದರಿ ಆದರು? ಅವರ ಬಗ್ಗೆ ಅವರ ಮಕ್ಕಳು ಹೇಳೊದೇನು?

ಚೇತರಿಸಿಕೊಳ್ಳುವುದು ಕಷ್ಟ ಸಾಧ್ಯ

ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಚಿಕಿತ್ಸೆಯಲ್ಲಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಮೆದುಳಿಗೆ ಆಕ್ಸಿಜನ್​ ಸರಬರಾಜು ಆಗುವುದು ನಿಂತಿತ್ತು. ಅವರ ಮೆದುಳು ಬಹುತೇಕ ನಿಷ್ಕ್ರಿಯಗೊಂಡಿದೆ. ಹಾಲ್ದೊಡ್ಡೇರಿ ಸುಧೀಂದ್ರ ಅವರನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಅವರು ಚೇತರಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಈ ಮಧ್ಯೆ, ಅವರಿಗೆ ಕೋವಿಡ್​ ಸೋಂಕು ತಗುಲಿಲ್ಲ. ಚಿಕಿತ್ಸೆ ಭರದಿಂದ ನಡೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಆದರೀಗ ಎಲ್ಲಾ ಚಿಕಿತ್ಸೆ ವಿಫಲಗೊಂಡಿದೆ. 

ಈಶ್ವರಪ್ಪ ಕಂಬನಿ
ಕನ್ನಡದ ಖ್ಯಾತ ಬರಹಗಾರ, ಅಂಕಣಕಾರ, ವಿಜ್ಞಾನಿ ಡಾ.ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪರವರು  ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಅವರಿಗೆ ಇಂದು ಕನ್ನಡ ಪುಸ್ತಕ ಪ್ರಾಧಿಕಾರದ  ಡಾ . ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಪ್ರಶಸ್ತಿ ಘೋಷಿಸಿದ ದಿನವೇ ಅವರು ನಿಧನರಾದದ್ದು ತುಂಬಾ ದುರಾದೃಷ್ಟಕರ ಸಂಗತಿ, ಅಭಿನಂದನೆ ತಿಳಿಸಬೇಕಾದ ಸಂದರ್ಭದಲ್ಲಿ ಸಂತಾಪ ಹೇಳಬೇಕಾದ ಸಂಕಟ ಎಂದಿರುವ ಸಚಿವರು.

ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯವಾದದ್ದು , ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಅವರು ಜನಪ್ರಿಯರಾಗಿದ್ದರು. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

"ವಿಜ್ಞಾನವನ್ನು ಸರಳವಾಗಿ ಬರೆದರು, ಮಕ್ಕಳಲ್ಲಿ ವಿಜ್ಞಾನ ಪ್ರೇಮ ಬೆಳೆಸಿದರು"
ಡಾ.ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಉಪ ಮುಖ್ಯಮಂತ್ರಿ ಕಂಬನಿ


ಬೆಂಗಳೂರು: ಖ್ಯಾತ ವಿಜ್ಞಾನಿ, ಅಂಕಣಕಾರ ಡಾ.ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಕಂಬನಿ ಮಿಡಿದ್ದಾರೆ. ವಿಜ್ಞಾನವನ್ನು ಕನ್ನಡಿಗರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬರೆದ ಸುಧೀಂದ್ರ ಅವರು, ಮಕ್ಕಳಲ್ಲಿ ವಿಜ್ಞಾನದ ಮೇಲಿನ ಪ್ರೇಮ ಹೆಚ್ಚಿಸಿದವರು. ಜತೆಗೆ, ಕರ್ನಾಟಕದಲ್ಲಿ ವಿಜ್ಞಾನದ ಬೆಳವಣಿಗೆಗೆ ಅವರ ಕಾಣಿಕೆ ಬಹಳ ದೊಡ್ಡದು ಎಂದು ಡಿಸಿಎಂ ಶೋಕ ವ್ಯಕ್ತಪಡಿಸಿದ್ದಾರೆ. 

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ವಿಜ್ಞಾನಿಯಾಗಿ ಅನುಪಮ ಸೇವೆ ಸಲ್ಲಿಸಿದ್ದ ಅವರು, ಅನೇಕ ಪ್ರಮುಖ ಸಂಶೋಧನೆಗಳಲ್ಲಿ ಭಾಗಿಯಾಗಿದ್ದರು. ತಮ್ಮ ಅನುಭವವನ್ನು ಹೊಸ ತಲೆಮಾರಿನ ಸಂಶೋಧಕರಿಗೆ ಧಾರೆ ಎರೆಯುತ್ತಾ ವಿಜ್ಞಾನಕ್ಕೆ ಬದುಕನ್ನೇ ಅರ್ಪಿಸಿಕೊಂಡಿದ್ದರು ಎಂದು ಡಾ.ಅಶ್ವತ್ಥನಾರಾಯಣ ಗುಣಗಾನ ಮಾಡಿದ್ದಾರೆ. 

ಡಾ.ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನ ಬಹಳ ದುಃಖ ಉಂಟು ಮಾಡಿದೆ. ಅವರಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ ಹಾಗೂ ಅವರ ಬಂಧುಬಳಗಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಡಿಸಿಎಂ ಅವರು ಪ್ರಾರ್ಥನೆ ಮಾಡಿದ್ದಾರೆ.

click me!