ಸುದೀಪ್‌ - ರಕ್ಷಿತ್‌ ಶೆಟ್ಟಿ ನಡುವೆ ಕೋಲ್ಡ್‌ ಫೈಟ್, ಇದಕ್ಕೇನು ಕಾರಣ ಬೇರೆ ಬಿಡಿ

By Suvarna NewsFirst Published Jul 30, 2022, 5:12 PM IST
Highlights

ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಜೊತೆಯಾಗಿ ಒಂದು ಸಿನಿಮಾ ಮಾಡ್ತಾರೆ ಅಂದಾಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅದೊಂದು ಮಾಸ್ಟರ್ ಪೀಸ್ ಆಗುತ್ತೆ ಅಂತಲೇ ಬಹಳ ಮಂದಿ ಅಂದುಕೊಂಡರು. ಆದರೆ ಎರಡು ಟ್ಯಾಲೆಂಟ್‌ಗಳು ಒಂದೇ ಕಡೆ ಇರೋದು ಕಷ್ಟ ಸಾಧ್ಯ ಅನ್ನೋ ಮಾತನ್ನು ಈ ಕಲಾವಿದರೀಗ ನಿಜ ಮಾಡ್ತಿದ್ದಾರಾ ಅನ್ನೋ ಅನುಮಾನ ಬರುತ್ತಿದೆ. ಇವರಿಬ್ಬರ ಹೊಸ ಸಿನಿಮಾಕ್ಕೆ ಭಿನ್ನಾಭಿಪ್ರಾಯವೇ ಶತ್ರುವಾದ ಹಾಗಿದೆ. ನಮ್ಮಿಬ್ಬರ ನಡುವೆ ಕೋಲ್ಡ್ ಫೈಟ್ ಇದೆ ಅಂತ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್‌ ಅವರ ವಿಕ್ರಾಂತ್ ರೋಣದ ಬಗ್ಗೆ ಎಲ್ಲೆಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೂ ಸಿನಿಮಾ ಮೊದಲ ದಿನವೇ ೩೫ ಕೋಟಿ ರು. ಗಳಿಕೆ ಮಾಡಿದ ದೇಶದ ಟಾಪ್ 5 ಸಿನಿಮಾಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುದೀಪ್ ವೃತ್ತಿ ಜೀವನದಲ್ಲಿಯೇ ಇದು ಅತಿದೊಡ್ಡ ಮೊದಲ ದಿನದ ಕಲೆಕ್ಷನ್ ಎನ್ನಲಾಗಿದೆ. ಒಂದು ಕಡೆ 'ವಿಕ್ರಾಂತ್ ರೋಣ' ಸಿನಿಮಾ ಯಶಸ್ಸಿನೆಡೆಗೆ ಸಾಗುತ್ತಿದ್ದರೆ ಇನ್ನೊಂದೆಡೆ ಸುದೀಪ್ ಹಾಗೂ ರಕ್ಷಿತ್ ಹೊಸ ಸಿನಿಮಾದ ಬಗ್ಗೆಯೂ ಚರ್ಚೆ ಕೇಳಿ ಬರುತ್ತಿದೆ. ಈ ನಡುವೆ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆಯೂ ಈಗಿನಿಂದಲೇ ಚರ್ಚೆಗಳು ಶುರುವಾಗಿವೆ. ಸುದೀಪ್ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡುವಾಗೆಲ್ಲ ರಕ್ಷಿತ್ ಶೆಟ್ಟಿಯ ಚರ್ಚೆ ಖಂಡಿತ ಆಗುತ್ತದೆ. ರಕ್ಷಿತ್ ಶೆಟ್ಟಿ, ಸುದೀಪ್‌ಗಾಗಿ ತಾವೊಂದು ಸಿನಿಮಾ ಮಾಡುವುದಾಗಿ ಬಹಳ ಹಿಂದೆ ಘೋಷಿಸಿದ್ದರು. ಆದರೆ ಯಾಕೋ ಏನೋ ಆ ಸಿನಿಮಾ ಶುರುವಾಗಲೇ ಇಲ್ಲ. ಆ ಬಗ್ಗೆ ಇದೀಗ ಮಾತನಾಡಿರುವ ಸುದೀಪ್, ಸಿನಿಮಾ ವಿಷಯವಾಗಿ ರಕ್ಷಿತ್ ಶೆಟ್ಟಿ ತಮ್ಮೊಂದಿಗೆ ಜಗಳವಾಡಿದ್ದಾಗಿಯೂ ಹೇಳಿದ್ದಾರೆ. ಇದನ್ನವರು ಕೋಲ್ಡ್ ಫೈಟ್ ಅಂತ ಕರೆದಿದ್ದಾರೆ. ಈ ಶೀತಲ ಸಮರಕ್ಕೆ ಕಾರಣ ಕಥೆಯಲ್ಲಿ ಇಬ್ಬರಿಗೂ ಬಂದಿರುವ ಭಿನ್ನಾಭಿಪ್ರಾಯಗಳು.

ಸಿನಿಮಾ ದಿ ಬೆಸ್ಟ್ ಬರಬೇಕು ಅನ್ನೋದರ ಬಗ್ಗೆಯೇ ಇಬ್ಬರೂ ಸ್ಟಾರ್ ನಟರ ಪ್ರಯತ್ನವಿದೆ. ಅದೇ ಸಿನಿಮಾ ಬರದ ಹಾಗೆ ಮಾಡಿದೆ ಅನ್ನೋದು ಸದ್ಯದ ವ್ಯಂಗ್ಯ. ಆದರೆ ಈ ಇಬ್ಬರೂ ನಟರೂ ಈ ವಿಚಾರವನ್ನು ವೈಯುಕ್ತಿಕವಾಗಿ ತೆಗೆದುಕೊಂಡ ಹಾಗಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ 'ವಿಕ್ರಾಂತ್ ರೋಣ' ಸಿನಿಮಾ ಈವೆಂಟ್‌ನಲ್ಲಿ ರಕ್ಷಿತ್ ಶೆಟ್ಟಿ ಅದ್ಭುತವಾಗಿ ಮಾತಾಡಿದ್ದು, ಆ ಮಾತುಕೇಳಿ ಸುದೀಪ್ ವೇದಿಕೆಯ ಮೇಲೆ ಬಂದು ರಕ್ಷಿತ್ ಅವರನ್ನು ತಬ್ಬಿಕೊಂಡಿದ್ದು.

ಇಲ್ಲೀವರೆಗೆ ಸುದೀಪ್ ಮತ್ತು ರಕ್ಷಿತ್ ಸಿನಿಮಾಕ್ಕೆ ಡೇಟ್ ಸಮಸ್ಯೆ ಅಂತಲೇ ನಂಬಲಾಗಿತ್ತು. ಆದರೆ 'ವಿಕ್ರಾಂತ್ ರೋಣ' ಪ್ರಚಾರದ ವೇಳೆ ರಾಷ್ಟ್ರೀಯ ಮಾಧ್ಯಮಕ್ಕೆ ಸಂದರ್ಶನ(Interview) ನೀಡಿದರ ಸುದೀಪ್ ಮಾತಿನ ನಡುವೆ ಈ ಕೋಲ್ಡ್ ಫೈಟ್ ಬಗ್ಗೆ ಪ್ರಸ್ತಾಪಿಸಿದರು. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸುದೀಪ್, 'ರಕ್ಷಿತ್ ಶೆಟ್ಟಿ ಬಹಳ ಒಳ್ಳೆಯ ಹುಡುಗ. ಆದರೆ ಸಿನಿಮಾ ಕುರಿತಂತೆ ನನ್ನ ಜೊತೆ ಕೋಲ್ಡ್ ಫೈಟ್(Clod fight) ಅವರಿಗಿದೆ. ಆದರೆ ಆತ ಅದನ್ನು ತೋರಿಸಿಕೊಳ್ಳುವುದಿಲ್ಲ. ನನಗೂ ಕೆಲವು ಅಭಿಪ್ರಾಯ ಬೇಧಗಳಿವೆ. ನನಗೆ ಅವರ ಬರವಣಿಗೆ ಬಗ್ಗೆ ಹೆಮ್ಮೆ ಇದೆ, '777 ಚಾರ್ಲಿ' ಸಿನಿಮಾದ ಬಳಿಕ ಅವರ ನಟನೆಯ ಬಗ್ಗೆಯೂ ಖುಷಿ ಎನಿಸುತ್ತದೆ'' ಎಂದು ಹೊಗಳಿದ್ದಾರೆ ನಟ ಸುದೀಪ್.

ಸಲ್ಮಾನ್ ಖಾನ್‌ಗೆ ಸುದೀಪ್ ನಿರ್ದೇಶನ; ಎಕ್ಸ್‌ಕ್ಲೂಸಿವ್ ಮಾಹಿತಿ ರಿವೀಲ್ ಮಾಡಿದ ಕಿಚ್ಚ

'ಅವರಿಗೆ ಕತೆ ಹೇಳುವ ದೊಡ್ಡ ಬಯಕೆ ಇದೆ. ಒಳ್ಳೆ-ಒಳ್ಳೆ ಕತೆಗಳನ್ನು ಹೇಳಲು ಕಾತರರಾಗಿದ್ದಾರೆ. ಒಂದು ಸಿನಿಮಾ(Movie) ಮುಗಿದ ಕೂಡಲೇ ಇನ್ನೊಂದು ಸಿನಿಮಾದ ಕಡೆಗೆ ಅವರು ಓಡುತ್ತಿದ್ದಾರೆ. ಅದು ಸರಿ ಸಹ. 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾವನ್ನು ಅವರು ಮಾಡುತ್ತಾರೆ. ಅವರಿಗೆ ಅನುಕೂಲವಾದಾಗ ಮಾಡಲಿ. ಎಲ್ಲದಕ್ಕೂ ಸಮಯವೆಂಬುದು ಇದೆ, ಸಮಯ ಬಂದಾಗ ಆ ಸಿನಿಮಾ ಖಂಡಿತ ಆಗುತ್ತದೆ. ಸಿನಿಮಾದ ಒನ್‌ಲೈನ್(Oneline) ಅನ್ನು ನಾನು ಕೇಳಿದ್ದೇನೆ. ಅದೊಂದು ಅದ್ಭುತವಾದ ಐಡಿಯಾ(Idea). ಖಂಡಿತ ಒಳ್ಳೆಯ ಸಿನಿಮಾ ಅದಾಗುತ್ತದೆ. ಅವರೊಬ್ಬ ಒಳ್ಳೆಯ ಸಿನಿಮಾ ಪ್ರೇಮಿ, ರಕ್ಷಿತ್ ಶೆಟ್ಟಿಯ ಪ್ರತಿಭೆ ಬಗ್ಗೆ ಅನುಮಾನ ವ್ಯಕ್ತಪಡಿಸಿದವರನ್ನು ನಾನು ಗದರಿಸಿದ ಸಂದರ್ಭಗಳೂ ಇವೆ' ಎಂದು ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿಯನ್ನು ಸುದೀಪ್ ಹೊಗಳಿದ್ದಾರೆ.

ದುಲ್ಖರ್ ಸಲ್ಮಾನ್ ಜೊತೆ ನಟಿಸ್ತಾರಾ ಗಟ್ಟಿಮೇಳದ ನಟಿ ನಿಶಾ ಮಿಲನ?

ಕೆಲ ವರ್ಷಗಳ ಹಿಂದೆ ತಾವು, ಸುದೀಪ್‌ಗಾಗಿ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ನಿರ್ದೇಶನ ಮಾಡುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದರು. ಆದರೆ ಸಿನಿಮಾ ಪ್ರಾರಂಭವಾಗಲೇ ಇಲ್ಲ. ರಕ್ಷಿತ್ ಶೆಟ್ಟಿ ಸಹ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು. 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾದ ಕತೆಯ ಬಗ್ಗೆ ಒಂದು ಸಮಾನ ಅಭಿಪ್ರಾಯಕ್ಕೆ ಬರಲಾಗದ ಕಾರಣ ಈ ಸಿನಿಮಾಕ್ಕೆ ತಾತ್ಕಾಲಿಕ ಬ್ರೇಕ್ (Break) ಬಿದ್ದಂತಾಗಿದೆ ಅನ್ನುವುದು ಈಗ ಕೇಳಿ ಬರುತ್ತಿರುವ ಮಾತು.

ಸದ್ಯಕ್ಕೀಗ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೊ' ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ಅದರ ಬಳಿಕ 'ರಿಚರ್ಡ್ ಆಂಟೊನಿ' ಸಿನಿಮಾದಲ್ಲಿ ತೊಡಗಿಕೊಳ್ಳುತ್ತಾರೆ. ಆ ಬಳಿಕ 'ಕಿರಿಕ್ ಪಾರ್ಟಿ 2' ಬರಲಿದೆ. ಇನ್ನು ಸುದೀಪ್ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

click me!