ಮೂನ್ ಲೈಟಿಂಗ್ ಮಾಡೋರು ರಾಜ್ಯ ಬಿಡಿ, ಟೆಕ್ಕಿಗಳಿಗೆ ಸಚಿವ ಅಶ್ವತ್ಥ ನಾರಾಯಣ್ ಖಡಕ್ ಎಚ್ಚರಿಕೆ

By Gowthami KFirst Published Oct 20, 2022, 4:53 PM IST
Highlights

ಮೂನ್ ಲೈಟ್ ಮಾದರಿಯನ್ನು ವಿರೋಧಿಸುತ್ತಿರುವ ಭಾರತದ ಐಟಿ ದಿಗ್ಗಜರಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತಿತರ ಸಂಸ್ಥೆಗಳಿಗೆ ತಿಳಿಯದೆ ತನ್ನ ತೂಕವನ್ನು ಇಟ್ಟು ಮೂನ್‌ಲೈಟ್ ಮಾಡುವವರು ರಾಜ್ಯವನ್ನು ತೊರೆಯಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಅ.20): ಕರ್ನಾಟಕದ ಐಟಿ ಸಚಿವ ಸಿಎನ್ ಅಶ್ವತ್ಥ ನಾರಾಯಣ ಟೆಕ್ಕಿಗಳಿಗೆ  ಮಹತ್ವದ ಸಂದೇಶ ನೀಡಿದ್ದಾರೆ. ಮೂನ್ ಲೈಟ್ ಮಾದರಿಯನ್ನು ವಿರೋಧಿಸುತ್ತಿರುವ ಭಾರತದ ಐಟಿ ದಿಗ್ಗಜರಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತಿತರ ಸಂಸ್ಥೆಗಳಿಗೆ ತಿಳಿಯದೆ ತನ್ನ ತೂಕವನ್ನು ಇಟ್ಟು ಮೂನ್‌ಲೈಟ್ ಮಾಡುವವರು ರಾಜ್ಯವನ್ನು ತೊರೆಯಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಕಂಪೆನಿಗೆ ಮೋಸ ಮಾಡಿ   ಫ್ರೀಲ್ಯಾನ್ಸಿಂಗ್  ಮಾಡುವುದು ಮೋಸ ಮತ್ತು ಹಾಗೆ ಮಾಡಲು ಬಯಸುವ ವೃತ್ತಿಪರರು ರಾಜ್ಯದಿಂದ ಹೊರಹೋಗಬೇಕು ಎಂದಿದ್ದಾರೆ. ರೀತಿ ನೀತಿ  ಮತ್ತು ನೈತಿಕವಾಗಿ, ಮೂನ್‌ಲೈಟಿಂಗ್ ಮಾಡಲು ಓರ್ವ ಉದ್ಯೋಗಿಗೆ ಹೇಗೆ ಅನುಮತಿಸಬಹುದು?  ಮೂನ್‌ಲೈಟ್ ಯಾವುದೇ ರೀತಿಯಲ್ಲಿ ನ್ಯಾಯೋಚಿತವಲ್ಲ.  ಇದು ಅಕ್ಷರಶಃ ಮೋಸವಾಗಿದೆ ಎಂದಿದ್ದಾರೆ'. ಕಳೆದ ಕೆಲವು ತಿಂಗಳ ಹಿಂದೆ ವಿಪ್ರೋ  ಕಂಪೆನಿಯು ಮೂನ್‌ಲೈಟ್‌ಗಾಗಿ ಸುಮಾರು 300 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ವಿಪ್ರೋ ಸಿಇಒ ರಿಷಾದ್ ಪ್ರೇಮ್‌ಜಿ ಅವರು ಮೂನ್‌ಲೈಟ್ ವಂಚನೆ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದ ಮೊದಲಿಗರಾಗಿದ್ದಾರೆ.  ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಇತ್ತೀಚೆಗೆ ಕಂಪನಿಯು ಎರಡು ಕಡೆ ಉದ್ಯೋಗವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಉದ್ಯೋಗಿಗಳ ಮೂನ್‌ಲೈಟಿಂಗ್ ಅಭ್ಯಾಸದ ಬಗ್ಗೆ ಕಂಪನಿಯ ನಿಲುವನ್ನು ಪುನರುಚ್ಚರಿಸಿದರು. ಕಳೆದ ಒಂದು ವರ್ಷದಲ್ಲಿ ಕಂಪನಿಯು ಇತರ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿರುವ ನೌಕರರನ್ನು ಕೈಬಿಟ್ಟಿದೆ ಎಂದು ಪಾರಿಖ್ ಹೇಳಿದರು.  

ಭಾರತೀಯ ಐಟಿ ಪ್ರಮುಖ ಟಿಸಿಎಸ್ ಕೂಡ ಮೂನ್‌ಲೈಟಿಂಗ್ ವಿರುದ್ಧ ಬಹಿರಂಗವಾಗಿ ಹೇಳಿಕೊಂಡಿದೆ. ಮೂನ್‌ಲೈಟಿಂಗ್ ಕಂಪನಿಯ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟಿಸಿಎಸ್ ಜಾಗತಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಹೇಳಿದ್ದಾರೆ. ಮೂನ್‌ಲೈಟಿಂಗ್ ಒಂದು ನೈತಿಕ ಸಮಸ್ಯೆ ಎಂದು ನಾವು ನಂಬುತ್ತೇವೆ ಮತ್ತು ಇದು ನಮ್ಮ ಮೂಲ ಮೌಲ್ಯಗಳು ಮತ್ತು ಸಂಸ್ಕೃತಿಗೆ ವಿರುದ್ಧವಾಗಿದೆ ಎಂದಿದ್ದಾರೆ. TCS ತನ್ನ ಉದ್ಯೋಗಿಗಳ ಕಡೆಗೆ ದೀರ್ಘಾವಧಿಯ ಬದ್ಧತೆಯನ್ನು ಹೊಂದಿದೆ ಮತ್ತು ಉದ್ಯೋಗಿಗಳು ಕಂಪನಿಯ ಕಡೆಗೆ "ಪರಸ್ಪರ ಬದ್ಧತೆಯನ್ನು" ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೈಸೂರಿನಲ್ಲಿ 10 ಸಾವಿರ ಕೋಟಿ ರೂ.ವಹಿವಾಟಿನ ಸಾಧನೆ: ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇಎಸ್ಡಿಎಂ ವಲಯದ 230 ಕಂಪನಿಗಳು ಈಗಾಗಲೇ ಸ್ಥಾಪನೆಯಾಗಿದ್ದು ವರ್ಷಕ್ಕೆ 10,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿವೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ  ಗುರುವಾರ ಇಲ್ಲಿ ಏರ್ಪಡಿಸಿದ್ದ ಬಿಗ್ ಟೆಕ್ ಶೋ ಕಾರ್ಯಕ್ರಮದಲ್ಲಿ ಅವರು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಹತ್ತು ತಿಂಗಳಲ್ಲಿ ಮೈಸೂರಿನಲ್ಲಿ ಏಳು ಕಂಪನಿಗಳು ಕಾರ್ಯಾರಂಭ ಮಾಡಿವೆ. ಜೊತೆಗೆ 1,400 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವ ಇನ್ನೂ 7 ಕಂಪನಿಗಳ ಪ್ರಸ್ತಾವನೆಗಳು ಸರ್ಕಾರದ ಮುಂದಿವೆ. ಇವು 12,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು ಇವುಗಳಿಗೆ ಸದ್ಯದಲ್ಲೇ ಒಪ್ಪಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು. ಮೈಸೂರಿನಲ್ಲಿ ಮುಂದಿನ ಒಂದು ವರ್ಷದಲ್ಲಿ ವಿದ್ಯಾರ್ಥಿಗಳೇ ನೇತೃತ್ವ ವಹಿಸಲಿರುವ 500 ನವೋದ್ಯಮಗಳನ್ನು ಸ್ಥಾಪಿಸಲಾಗುವುದು. ಇದಲ್ಲದೆ ಸ್ಟಾರ್ಟ್ ಅಪ್ ಹಬ್ ಮುಖಾಂತರ ಈ ಕಂಪನಿಗಳನ್ನು ಬೆಸೆಯಲಾಗುವುದು ಎಂದು ಅವರು ಹೇಳಿದರು. ಸೆಮಿಕಂಡಕ್ಟರ್ ಫ್ಯಾಬ್ ವಲಯಕ್ಕೆ ಇಲ್ಲಿ ಈಗಾಗಲೇ 200 ಎಕರೆ ಭೂಮಿ ನೀಡಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 250 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ ಎಂದು ಅವರು ನುಡಿದರು.

ರಾಜ್ಯದಲ್ಲಿ ಚಿಪ್ ತಯಾರಿಕೆ ಆಗಬೇಕೆಂಬುದು ಸರಕಾರದ ಸಂಕಲ್ಪವಾಗಿದೆ. ಇದಕ್ಕಾಗಿ ಐಸಿಎಮ್ಇ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು 6,000 ಕೋಟಿ ರೂಪಾಯಿಗಳಷ್ಟು ಸಬ್ಸಿಡಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಸಾವಿರಾರು ಸಂಖ್ಯೆಯ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ರಾಜ್ಯದ ಆರ್ಥಿಕತೆಗೆ ಮೌಲಿಕ ಕೊಡುಗೆ ನೀಡಲಿದೆ ಎಂದು ಸಚಿವರು ಪ್ರತಿಪಾದಿಸಿದರು.

Digital Indiaಗೆ ಥ್ಯಾಂಕ್ಸ್‌: ಪಿಎಫ್‌ನಿಂದಾಗಿ ಮೂನ್‌ಲೈಟಿಂಗ್ ಬಯಲು..!

ಮೈಸೂರಿನಲ್ಲಿ ಉದ್ಯಮ ವಲಯಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲು ಈಗ ಇರುವ 53 ಕಿ.ಮೀ. ಸುತ್ತಳತೆಯ ವರ್ತುಲ ರಸ್ತೆ ಸಾಕಾಗುತ್ತಿಲ್ಲ. ಹೀಗಾಗಿ ನಗರದ ಸುತ್ತ 103 ಕಿಲೋಮೀಟರ್ ವ್ಯಾಪ್ತಿಯ ಪೆರಿಫೆರಲ್ ರಿಂಗ್ ರೋಡ್ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಈ ಕಾರಣಕ್ಕಾಗಿ 10 ನಿಮಿಷಗಳಲ್ಲಿ ಕಂಪನಿಯ ಪ್ರಮುಖ ಉದ್ಯೋಗಿ ವಜಾ: Wipro ಬಾಸ್‌

ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್,  ಯುನೈಟೆಡ್ ಕಿಂಗ್ಡಮ್ ನ  ಡೆಪ್ಯುಟಿ  ಹೈಕಮಿಷನರ್ ಆಂಡ್ರ್ಯೂ ಫ್ಲೆಮಿಂಗ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯಸ್ಥ ಬಿ ವಿ ನಾಯ್ಡು, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಟಾಟಾ ಸನ್ಸ್ ಸಮೂಹದ ತನ್ಮಯ್ ಚಕ್ರವರ್ತಿ ಮುಂತಾದವರಿದ್ದರು.

click me!