
ನವದೆಹಲಿ(ಮೇ.14) ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಅತಿಯಾಗಿ ಎಐ ಬಳಕೆಯಾಗುವ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಸಣ್ಣ ಪ್ರಮಾಣದಲ್ಲಿ ಹೊಡೆತ ನೀಡಿದ್ದು ನಿಜ. ಆದರೆ ಹಲವು ಕ್ಷೇತ್ರಗಳಲ್ಲಿ ಎಐ ಅಳವಡಿಕೆಯಾದರೂ ಕೆಲಸ ಸುಲಭವಾಗಬಹುದು, ನಿಖರವಾಗಬಹುದು,ಪಾರದರ್ಶಕತೆಯಿಂದ ಕೂಡಿರಬಹುದು, ಆದರೆ ಉದ್ಯೋಗಕ್ಕೆ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಎಐ ಎಲ್ಲಾ ಕ್ಷೇತ್ರದಲ್ಲಿ ಕೆಲಸಕ್ಕೆ ಕುತ್ತು ನೀಡಲಿದೆ ಅನ್ನೋದು ಇದೀಗ ಪ್ರತಿಷ್ಠಿತ ಐಬಿಎಂ ಕಂಪನಿಯ ನಿರ್ಧಾರದಿಂದ ಸಾಬೀತಾಗಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸಿಯಿಂದ ಇದೀಗ ಐಬಿಎಂ ಕಂಪನಿಯ ಬರೋಬ್ಬರಿ 200 ಹೆಚ್ಆರ್ (ಮಾನವ ಸಂಪನ್ಮೂಲ) ಉದ್ಯೋಗಿಗಳು ಅತಂತ್ರರಾಗಿದ್ದಾರೆ. 200 ಹೆಚ್ಆರ್ ಉದ್ಯೋಗ ಕಡಿತಗೊಳಿಸಿ ಈ ಸ್ಥಾನಕ್ಕೆ ಎಐ ಆಟೋಮೇಶನ್ ಬಳಕೆ ಮಾಡಲಾಗಿದೆ.
ಹೆಚ್ಆರ್ ಕೆಲಸವನ್ನು ಎಐ ಮಾಡುತ್ತಿದೆ
ಉದ್ಯೋಗಿಗಳ ಸಂಬಳ, ಹಾಜರಿ, ಅವರ ರಜೆ ಮನವಿ, ನೇಮಕಾತಿ, ಸೂಕ್ತರ ಆಯ್ಕೆ, ಸಂದರ್ಶನ ಸೇರಿದಂತೆ ಇತರ ಯಾವುದೇ ರೀತಿಯ ಮನವಿ, ಪ್ರಶ್ನೆಗಳಿಗೆ ಉತ್ತರಿಸಲು, ಹೆಚ್ಆರ್ ವಿಭಾಗ ಸಕ್ರೀಯಾಗಿ ಕಾರ್ಯನಿರ್ವಹಿಸುತ್ತದೆ. ಇದೀಗ ಐಬಿಎಂ ಕಂಪನಿಯಲ್ಲಿ ಇತರ ಉದ್ಯೋಗಿಗಳ ಸಂಬಳ, ರಜೆ, ಹಾಜರಾತಿ ಸೇರಿದಂತೆ ಉದ್ಯೋಗಿಗಳ ಇತರ ಪ್ರಶ್ನೆಗಳಿಗೆ ಉತ್ತರಿಸಲು ಎಐ ಬಳಕೆ ಮಾಡಲಾಗುತ್ತಿದೆ. ಇಲ್ಲಿ ಹೆಚ್ಆರ್ ಅವಶ್ಯಕತೆ ಇಲ್ಲ. ಎಲ್ಲವನ್ನೂ ಆಟೋಮೇಶನ್ ಮಾಡಲಾಗಿದೆ. ಎಐ ಮೂಲಕ ಉದ್ಯೋಗಿ ಎಷ್ಟು ದಿನ ಹಾಜರಾಗಿದ್ದಾನೆ, ಎಷ್ಟು ಗಂಟೆ ಕೆಲಸ ಮಾಡಿದ್ದಾನೆ, ಏನು ಮಾಡಿದ್ದಾನೆ, ರಜೆ ಎಷ್ಟು ತೆಗೆದುಕೊಂಡಿದ್ದಾನೆ, ಮನವಿ ಮಾಡಿದ್ದಾನೆ ಎಲ್ಲವೂ ಎಐ ಲೆಕ್ಕ ಹಾಕಲಿದೆ. ಕ್ಷಣಾರ್ಧದಲ್ಲಿ ಎಐ ಪ್ರತಿಯೊಬ್ಬ ಉದ್ಯೋಗಿಯ ಜಾತಕ ನೀಡಲಿದೆ. ಇದನ್ನು ಐಬಿಎಂ ಆಟೋಮೇಶನ್ ಮಾಡಿದೆ. ಇದರಿಂದ ಯಾರೂ ಕೂಡ ನಿರ್ವಹಣೆ ಮಾಡುವ ಅಗತ್ಯವೂ ಇಲ್ಲ. ಹೀಗಾಗಿ ಈ ಕೆಲಸ ಮಾಡುತ್ತಿದ್ದ ಬರೋಬ್ಬರಿ 200 ಹೆಚ್ಆರ್ಗಳು ಇದೀಗ ಕೆಲಸ ಕಳೆದುಕೊಂಡಿದ್ದಾರೆ
AI ಕಲಿಯಿರಿ, ದುಡ್ಡು ಮಾಡ್ಕೊಳ್ಳಿ! ಯುಪಿ ಸರ್ಕಾರದ ಡಿಜಿಟಲ್ ಜಾಬ್!
ಸಿಇಒ ಅರವಿಂದ್ ಕೃಷ್ಣ ಸ್ಪಷ್ಟನೆ
ಐಬಿಎಂ ಸಿಇಒ ಅರವಿಂದ್ ಕೃಷ್ಣ ಈ ಕುರಿತು ಮಾತನಾಡಿದ್ದಾರೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಹೆಚ್ಆರ್ ಕೆಲಸಗಳು ಸುಲಭವಾಗುತ್ತಿದೆ. ಹೆಚ್ಆರ್ ಮಾಡುವ ಬಹುತೇಕ ಕೆಲಸಗಳನ್ನು ಇದೀಗ ಎಐ ಆಟೋಮೇಶನ್ ಮಾಡುತ್ತಿದೆ. ಹೀಗಾಗಿ ಕಂಪನಿ ಹೊರೆ ಕಡಿಮೆಯಾಗಿದೆ. ಸುಲಭವಾಗಿ ಕೆಲಸಗಳು ಪೂರ್ಣಗೊಳ್ಳುತ್ತದೆ. ಒಟ್ಟು 200 ಹೆಚ್ಆರ್ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಹಂತ ಹಂತವಾಗಿ ಹೆಚ್ಆರ್ ಉದ್ಯೋಗ ಕಡಿತಗೊಳ್ಳಲಿದೆ ಎಂದು ಅರವಿಂದ್ ಕೃಷ್ಣ ಹೇಳಿದ್ದಾರೆ.
ಐಬಿಎಂನಲ್ಲಿ ಉದ್ಯೋಗ ಕಡಿತವಿಲ್ಲ, ಉದ್ಯೋಗಿಗಳ ಸಂಖ್ಯೆ ಹೆಚ್ಚಳ
ಐಬಿಎಂನಲ್ಲಿ ಉದ್ಯೋಗ ಕಡಿತ ಮಾಡುತ್ತಿಲ್ಲ. ಇದು ಎಐ ಆಟೋಮೇಶನ್ ಬಳಕೆಯಿಂದ ಹೆಚ್ಆರ್ ವಿಭಾಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಆದರೆ ಐಬಿಎಂನ ಒಟ್ಟು ಉದ್ಯೋಗಳ ಸಂಖ್ಯೆ ಹೆಚ್ಚಾಗಿದೆ. ಎಂಜಿನೀಯರ್, ಮಾರ್ಕೆಟಿಂಗ್, ಸೇಲ್ಸ್ ಸೇರಿದಂತೆ ಇತರ ವಿಭಾಗದಲ್ಲಿ ನೇಮಕಾತಿ ನಡೆಯುತ್ತಿದೆ ಎಂದು ಅರವಿಂದ್ ಕೃಷ್ಣ ಹೇಳಿದ್ದಾರೆ.
ಐಬಿಎಂ ನಿರ್ಧಾರದಿಂದ ಇದೀಗ ಹಲವು ಕಂಪನಿಗಳ ಹೆಚ್ಆರ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗ ಆತಂಕ ಶುರುವಾಗಿದೆ. ಐಬಿಎಂ ರೀತಿ ಎಲ್ಲಾ ಕಂಪನಿಯಲ್ಲೂ ಎಐ ಆಟೋಮೇಶನ್ ಆರಂಭಿಸಿದರೆ ಹೆಚ್ಆರ್ ವಿಭಾಗವೇ ಬೇಕಿಲ್ಲ. ಇದರಿಂದ ಉದ್ಯೋಗ ಕಳೆದುಕೊಳ್ಳುವ ಹಾಗೂ ಅವಕಾಶಗಳು ಕ್ಷೀಣಿಸಲಿದೆ ಅನ್ನೋ ಆತಂಕ ಎದುರಾಗಿದೆ.
AI ಬರಲೀ, ChatGpt ಇರಲಿ; ಈ ಜಾಬ್ಗಳನ್ನು ಮಾತ್ರ ಕಿತ್ಕೋಳೋಕೆ ಆಗಲ್ಲ; ಅವು ಯಾವುವು?