
ಕಡೂರು (ಜ19) : ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸದೃಢವಾಗಿ ಕಟ್ಟಿಬೆಳೆಸಲು ನನ್ನ ಜೊತೆ ನೀವು ಹೆಜ್ಜೆ ಹಾಕಿ ಎಂದು ಶಾಸಕ ಮತ್ತು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಮನವಿ ಮಾಡಿದರು.
ಪಟ್ಟಣದ ನಂದಿ ಕ್ರೀಡಾ ಭವನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದವರು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಒಬ್ಬರೇ. ಕಡೂರು ಬಗ್ಗೆ ವಿಶೇಷ ಒಲವು ಹೊಂದಿರುವ ಅವರು, ಈ ಕ್ಷೇತ್ರಕ್ಕೆ ತಮ್ಮ ಅನುದಾದಲ್ಲಿ ಹೆಚ್ಚಿನ ಹಣವನ್ನು ನೀಡಿದ್ದಾರೆ. ದೇವೇಗೌಡರ ಗರಡಿಯಲ್ಲಿ ಪಳಗಿ ಅವರಿಗೆ ಮೋಸ ಮಾಡಿ ಹೊರ ಹೋದವರು ಹೋದಲ್ಲಿ ಬಂದಲ್ಲಿ ಮುಖಭಂಗ ಅನುಭವಿಸಿದ್ದಾರೆ. ಇನ್ನು ದೇವೇಗೌಡರು ವೈಎಸ್ವಿ ದತ್ತ ಅವರನ್ನು ಹೇಗೆ ನೋಡಿಕೊಂಡರು ಎಂಬುದನ್ನು ಹೇಳಬೇಕಿಲ್ಲ. ಆದರೂ ಅವರು ಕಾಂಗ್ರೆಸ್ಸಿಗೆ ಹೋಗಿದ್ದಾರೆ. ಹಿಂದೆ ಬಿ.ಎಲ್. ಶಂಕರ್ ಅವರು ಪಕ್ಷದಲ್ಲಿ ಎತ್ತರಕ್ಕೆ ಬೆಳೆದು ಕಾಂಗ್ರೆಸ್ಸಿಗೆ ಹೋದರು. ಈಗ ಏನಾಗಿದೆ? ದತ್ತರವರಿಗೆ ಒಳ್ಳೆಯದಾಗಲಿ ಎಂಬುದಷ್ಟೆನಮ್ಮ ಹಾರೈಕೆ ಎಂದರು.
ಜೆಡಿಎಸ್ ತೊರೆಯುವವರಿಗೆಲ್ಲ ಶುಭವಾಗಲಿ: ಎಚ್.ಡಿ.ರೇವಣ್ಣ
ನಾನು ಸಚಿವನಾಗಿದ್ದಾಗ ಕಡೂರು ಕ್ಷೇತ್ರದ ರಸ್ತೆಗಳ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 250 ಕೋಟಿ ರು. ವಿಶೇಷ ಅನುದಾನ ನೀಡಿದ್ದೇನೆ. ಕಾರ್ಯಕರ್ತರು ಪಕ್ಷದ ಬೆನ್ನೆಲುಬು, ಅವರಿಂದಲೇ ರಾಜ್ಯದಲ್ಲಿ ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ರೈತರ ಪರ ನಿಲುವುಗಳನ್ನು ಹೊಂದಿರುವ ಪಕ್ಷ ಅಧಿಕಾರದಲ್ಲಿ ಇದ್ದರೆ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ರಾಜ್ಯದ ಸವಾಂರ್ಗೀಣ ಅಭಿವೃದ್ಧಿಗೆ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ತರಲೇ ಬೇಕು. ನಾನು ನಿಮ್ಮ ಜೊತೆಗಿರುತ್ತೇನೆ. ಯಾವ ಕಾರ್ಯಕರ್ತರು ಧೃತಿಗೆಡದೆ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರವನ್ನು ಕಾರ್ಯಕರ್ತರಿಗೆ ನೀಡಿದ್ದೇನೆ. ನೀವು ಸೂಚಿಸುವ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ನಿಮ್ಮದು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ ಮಾತನಾಡಿ, ನಮ್ಮ ತಂದೆಯವರ ಕಾಲದಿಂದ ನಾವು ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇವೆ, ಪಕ್ಷದ ಧ್ಯೇಯ ಉದ್ದೇಶಗಳಂತೆ ಕ್ಷೇತ್ರದ ಜನತೆಯ ಪರವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ದತ್ತಾರವರು ಶಾಸಕರಾಗಿದ್ದ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಮುಂದೆ ಯಾರೇ ಅಭ್ಯರ್ಥಿ ಆದರೂ ನಾವು ಒಂದಾಗಿ ದುಡಿದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದರು.
'ದಳಪತಿ'ಗಳ ಪ್ರತಿಷ್ಠೆಯ ಕಣವಾದ ಕೆ.ಆರ್ ಪೇಟೆ: ಹೆಚ್ಡಿಕೆ-ರೇವಣ್ಣ ನಡುವೆ ಅಂತರ್ಯುದ್ಧ?
ಕೆಎಂಎಫ್ ನಿರ್ದೇಶಕ ಬಿದರೆ ಜಗದೀಶ್, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಪ್ರೇಮ ಕುಮಾರ್, ಬೇಲೂರು ಶಾಸಕ ಲಿಂಗೇಶ್ ಮಾತನಾಡಿದರು. ಮುಖಂಡರಾದ ಬಿ.ಪಿ. ನಾಗರಾಜ್, ಸೋನಾಲ್ ಗೌಡ, ಪುರಸಭೆ ಸದಸ್ಯ ಮನು ಮರುಗುದ್ದಿ, ಗ್ರಾಪಂ ಸದಸ್ಯ ಆನಂದ ನಾಯಕ್, ಪಂಚನಹಳ್ಳಿ ಪಾಪಣ್ಣ, ಗಂಗಾಧರ ನಾಯ್ಕ ಸೇರಿದಂತೆ ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.