ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರು

Kannadaprabha News   | Kannada Prabha
Published : Dec 01, 2025, 05:21 AM IST
Lok Sabha Monsoon session

ಸಾರಾಂಶ

ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಕೇಂದ್ರ ಸರ್ಕಾರವು ನಾಗರಿಕ ಅಣು ಕ್ಷೇತ್ರದಲ್ಲಿ ಖಾಸಗಿಯವರಿಗೂ ಅವಕಾಶ ನೀಡುವಂಥ ವಿಧೇಯಕಸೇರಿ 10 ವಿವಿಧ ಮಸೂದೆಗಳ ಅಂಗೀಕಾರಕ್ಕೆ ಸಜ್ಜಾಗಿದೆ.

ನವದೆಹಲಿ : ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಕೇಂದ್ರ ಸರ್ಕಾರವು ನಾಗರಿಕ ಅಣು ಕ್ಷೇತ್ರದಲ್ಲಿ ಖಾಸಗಿಯವರಿಗೂ ಅವಕಾಶ ನೀಡುವಂಥ ವಿಧೇಯಕಸೇರಿ 10 ವಿವಿಧ ಮಸೂದೆಗಳ ಅಂಗೀಕಾರಕ್ಕೆ ಸಜ್ಜಾಗಿದೆ. ಆದರೆ, ಪ್ರತಿಪಕ್ಷಗಳು ದೇಶದ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಮತಕಳವು ವಿಚಾರ ಮುಂದಿಟ್ಟುಕೊಂಡು ತೀವ್ರ ಗದ್ದಲ ನಡೆಸುವ ಸಾಧ್ಯತೆ ಇದೆ.

ಕಳೆದ ಬಾರಿಯ ಮಾನ್ಸೂನ್‌ ಅಧಿವೇಶನದ ಹೆಚ್ಚಿನ ಕಲಾಪವು ಆಪರೇಷನ್‌ ಸಿಂದೂರ ಹಾಗೂ ಮತಪಟ್ಟಿ ಪರಿಷ್ಕರಣೆ ವಿಷಯಗಳ ಕಾರಣ, ಪ್ರತಿಪಕ್ಷಗಳ ಗದ್ದಲದಿಂದಾಗಿ ವ್ಯರ್ಥವಾಗಿತ್ತು. ಆದರೆ ಇದೀಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಸಿಕ್ಕ ಅಭೂತಪೂರ್ವ ಗೆಲುವಿನಿಂದ ಬೀಗುತ್ತಿರುವ ಎನ್‌ಡಿಎ ಮೈತ್ರಿಕೂಟ, ಈ ಅಧಿವೇಶನದಲ್ಲಿ ತನ್ನ ಸುಧಾರಣಾ ನೀತಿಗಳನ್ನು ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಪ್ರಸ್ತುತ ಪಡಿಸುವ ನಿರೀಕ್ಷೆ ಇದೆ.

ಈ ನಡುವೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಎಲ್ಲಾ ಪಕ್ಷಗಳ ಸಂಸದೀಯ ನಾಯಕರ ಜತೆಗೆ ಮಾತುಕತೆ ನಡೆಸಿದ್ದು, ಕಲಾಪವು ಸುಗಮವಾಗಿ ನಡೆಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಎಸ್‌ಐಆರ್‌ ವಿಚಾರದಲ್ಲಿ ಗದ್ದಲ:

ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್‌ ಹಾಗೂ ಇತರೆ ಪ್ರತಿಪಕ್ಷಗಳು ಮತಗಳವು ಹಾಗೂ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್‌) ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಕಳೆದ ಅಧಿವೇಶನದಲ್ಲಿ ಬಿಹಾರದಲ್ಲಿ ನಡೆಯುತ್ತಿದ್ದ ಎಸ್‌ಐಆರ್‌ ಅನ್ನು ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು ಬಹಿರಂಗವಾಗಿ ವಿರೋಧಿಸಿದ್ದವು. ಇದೀಗ ದೇಶಾದ್ಯಂತ ಎಸ್‌ಐಆರ್‌ಗೆ ಚಾಲನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ಈ ವಿಚಾರವಾಗಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುವ ನಿರೀಕ್ಷೆ ಇದೆ.

ಯಾವ್ಯಾವ ವಿಧೇಯಕಗಳು ಮಂಡನೆ?:

ಅಧಿವೇಶನದಲ್ಲಿ ಅಟೋಮಿಕ್‌ ಎನರ್ಜಿ ಬಿಲ್‌-2025 ಅಲ್ಲದೆ, ಪಾರದರ್ಶಕ ವ್ಯವಸ್ಥೆಯ ಮಾನ್ಯತೆ ಹಾಗೂ ಸ್ವಾಯತ್ತೆ ಮೂಲಕ ವಿವಿಗಳು ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ವತಂತ್ರ, ಸ್ವಯಂ ಆಡಳಿತದ ಸಂಸ್ಥೆಗಳಾಗಿ ಪರಿವರ್ತಿಸಲು ಅನುವಾಗುವ ರೀತಿಯಲ್ಲಿ ಆಯೋಗವೊಂದನ್ನು ರಚಿಸಲು ಅವಕಾಶ ಮಾಡಿಕೊಡುವ ಭಾರತೀಯ ಉನ್ನತ ಶಿಕ್ಷಣ ಆಯೋಗ ವಿಧೇಯಕವನ್ನು ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿದೆ.

ಇದರ ಜತೆಗೆ, ರಾಷ್ಟ್ರೀಯ ಹೆದ್ದಾರಿಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರಗತಿ ಹಾಗೂ ಪಾರದರ್ಶಕವಾಗಿ ನಡೆಸಲು ರಾಷ್ಟ್ರೀಯ ಹೆದ್ದಾರಿಗಳ(ತಿದ್ದುಪಡಿ) ವಿಧೇಯಕ, ಕಂಪನಿಗಳ ಕಾಯ್ದೆಯಲ್ಲಿ ಸುಧಾರಣೆಗೆ ಅವಕಾಶ ಮಾಡಿಕೊಡುವ ಕಾರ್ಪೋರೇಟ್‌ ಕಾನೂನುಗಳ(ತಿದ್ದುಪಡಿ) ವಿಧೇಯಕ, ಸೆಕ್ಯುರಿಟೀಸ್‌ ಮಾರ್ಕೆಟ್ಸ್‌ ಕೋಡ್‌ ಬಿಲ್‌, ಇದರ ಜತೆಗೆ ಕಳೆದ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ಬಾಕಿ ಉ‍ಳಿದಿದ್ದ ಎರಡು ವಿಧೇಯಕಗಳು ಹಾಗೂ ಮೊದಲ ಪೂರಕ ಬಜೆಟ್‌ ಕೂಡ ಮಂಡನೆಯಾಗುವ ನಿರೀಕ್ಷೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

India Latest News Live: 19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು - ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
63 ಪರ್ಸೆಂಟ್‌ ಭ್ರಷ್ಟಾಚಾರ ಬಿಜೆಪಿ ಕಾಲದ್ದು, ಅಶೋಕ್‌ಗೆ ಅರ್ಥವಾಗೇ ಇಲ್ಲ: ಸಿಎಂ