50 ಸ್ಥಾನ ಗೆಲ್ಲೋದು ನನಗೆ ಕಷ್ಟವೇ ಅಲ್ಲ, ಆದ್ರೆ ಪೂರ್ಣ ಅಧಿಕಾರ ಕೊಡಿ: ಹೆಚ್‌ಡಿಕೆ ಮನವಿ

By Suvarna NewsFirst Published Jul 30, 2022, 5:38 PM IST
Highlights

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 50 ಸ್ಥಾನ ಗೆಲ್ಲುವುದು ನನಗೆ ಕಷ್ಟವೇ ಅಲ್ಲ. ಆದರೆ ಕಳೆದ ಬಾರಿಯಂತೆ ಮತ್ತೆ ಹಂಗಿನ ಅಧಿಕಾರ ಬೇಡ ಎಂದು ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಲಬುರಗಿ (ಜು.30): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 50 ಸ್ಥಾನ ಗೆಲ್ಲುವುದು ನನಗೆ ಕಷ್ಟವೇ ಅಲ್ಲ. ಆದರೆ ಕಳೆದ ಬಾರಿಯಂತೆ ಮತ್ತೆ ಹಂಗಿನ ಅಧಿಕಾರ ಬೇಡ. ಪೂರ್ಣ ಬಹುಮತ ನೀಡಿದರೆ ರಾಜ್ಯದ ಅಭಿವೃದ್ಧಿ ದಿಕ್ಕನ್ನೇ ಬದಲಾಯಿಸುವೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಕಲಬುರಗಿ ನಗರದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡುತ್ತಿದ್ದರು. 2018 ರ ವಿಧಾನಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದ ಕಾರಣ, ಬಿಜೆಪಿ ಕಾಂಗ್ರೆಸ್ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಮಾಡಿ ಅಂತಾ ಕಾಂಗ್ರೆಸ್ ನಿಯೋಗಕ್ಕೆ ದೇವೆಗೌಡ್ರು ಹೇಳಿದ್ದರು. ಆದರೆ ದೆಹಲಿಯಿಂದ ಬಂದಿದ್ದ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆರನ್ನ ಸಿಎಂ ಮಾಡಲು ಬೇಡ ಅಂದ್ರು. ಅದು ನನ್ನ ತಲೆಗೆ ಕಟ್ಟಿದರು ಎಂದು ಹಿಂದಿನ ದಿನವನ್ನು ಎಚ್ ಡಿ ಕುಮಾರಸ್ವಾಮಿ ನೆನಪಿಸಿದರು. 

ಪಕ್ಷ ವಿಸರ್ಜನೆಯ ಸಂಕಲ್ಪ: ರಾಜ್ಯದಲ್ಲಿ ಈ ಬಾರಿ ಜೆಡಿಎಸ್‌ ಪಕ್ಷ 123 ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದೇವೆ. ಪೂರ್ಣಪ್ರಮಾಣದಲ್ಲಿ ಅಧಿಕಾರ ಕೊಡಿ, ನಿಮ್ಮ‌ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಕೆಲಸ ಮಾಡಿ ನಾಡಿನ ಚಿತ್ರಣ ಬದಲಿಸುವ ಸಂಕಲ್ಪ ತೊಟ್ಟಿದ್ದೇನೆ. ಇದಾಗದಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುವುದು ಮಾತ್ರವಲ್ಲ, ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುವ ಸಂಕಲ್ಪ ಮಾಡಿದ್ದೇನೆ ಎಂದರು.

 ಇಂದಿನ ರಾಜಕಾರಣದಲ್ಲಿ ಕಬಡ್ಡಿ, ಚದುರಂಗ ಎರಡೂ ಗೊತ್ತಿರಬೇಕು: ವಿಪಕ್ಷಗಳಿಗೆ ವಿಜಯೇಂದ್ರ ಟಾಂಗ್

ಬೊಮ್ಮಾಯಿ ಒಂದು ವರ್ಗದ ಸಿಎಂ ?: ಮಂಗಳೂರಿನಲ್ಲಿ ಸರಣಿ ಕೊಲೆಗಳ ಕುರಿತು ಮಾತನಾಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಸಿಎಂ ಬೊಮ್ಮಾಯಿ,  ಕೊಲೆಯಾದ ಒಂದು ವರ್ಗದ ವ್ಯಕ್ತಿಯ ಮನೆಗೆ ಮಾತ್ರ ಭೇಟಿ ಕೊಟ್ಟಿದ್ದು,ಇನ್ನೊಂದು ವರ್ಗದ ಮನೆಗೆ ಸಿಎಂ ಭೇಟಿ ನೀಡದಿರೋದಕ್ಕೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಕೇವಲ ಒಂದು ವರ್ಗವನ್ನು ಓಲೈಸಲು ಮುಂದಾಗಿದ್ದಾರೆ. ಅವರೇನು ಒಂದು ವರ್ಗಕ್ಕೆ ಸಿಎಂ ಆಗಿದ್ದಾರೋ ಅಥವಾ ರಾಜ್ಯಕ್ಕೆ ಸಿಎಂ ಆಗಿದ್ದಾರೋ ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು. 

ಡಿಕೆಶಿಗೆ ಸಿಎಂ ಆಸೆ ಇದ್ದರೆ ತಪ್ಪೇನು? ಆರೋಗ್ಯಕರ ಪೈಪೋಟಿ ತಪ್ಪಲ್ಲ: ಸಿದ್ದು

ಹಿಂದೂಗಳ ಹೆಸರಿನಲ್ಲಿ ರಾಜಕೀಯ ಮಾಡಿ ನಾಡನ್ನ ನಿರ್ನಾಮ ಮಾಡಲು ಬಿಜೆಪಿ ಹೊರಟಿದೆ. ಇಂಥವರಿಗೆ ಅವಕಾಶ ನೀಡಬೇಡಿ ಎಂದು ಜನತೆಗೆ ಕರೆ ನೀಡಿದರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಜೆಡಿಎಸ್ ಕಲಬುರ್ಗಿ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಇನ್ನಿತರರು ಸಮಾವೇಶದಲ್ಲಿ ಉಪಸ್ಥಿತರಿದ್ದರು. ಕಲ್ಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಾವಿರಾರು ಜನ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

click me!