ವಿಜಯೇಂದ್ರನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ: ಬಿ.ಎಸ್‌.ಯಡಿಯೂರಪ್ಪ

By Govindaraj SFirst Published Nov 29, 2022, 1:30 AM IST
Highlights

ಇದುವರೆಗೂ ತಾಲೂಕಿನ ಜನತೆ ನೀಡಿದ ಎಲ್ಲ ರೀತಿಯ ಬೆಂಬಲ, ಆಶೀರ್ವಾದವನ್ನು ಮುಂದೆ ಪುತ್ರ ವಿಜಯೇಂದ್ರನಿಗೂ ನೀಡಿ ದೊಡ್ಡ ಅಂತರದಿಂದ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಕಾರಣಕರ್ತರಾಗುವಂತೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರು.

ಶಿಕಾರಿಪುರ (ನ.29): ಇದುವರೆಗೂ ತಾಲೂಕಿನ ಜನತೆ ನೀಡಿದ ಎಲ್ಲ ರೀತಿಯ ಬೆಂಬಲ, ಆಶೀರ್ವಾದವನ್ನು ಮುಂದೆ ಪುತ್ರ ವಿಜಯೇಂದ್ರನಿಗೂ ನೀಡಿ ದೊಡ್ಡ ಅಂತರದಿಂದ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಕಾರಣಕರ್ತರಾಗುವಂತೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರು. ಸೋಮವಾರ ತಾಲೂಕಿನ ಈಸೂರು ಗ್ರಾಮದಲ್ಲಿನ ಶ್ರೀ ಬನಶಂಕರಿ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕ್ಷೇತ್ರದ ಶಾಸಕನಾಗಿ ನಾಡಿನ ಜನತೆಯ ಸೇವೆ ಮಾಡುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ. ನಾಡಿನ ಎಲ್ಲೆಡೆ ಪ್ರವಾಸದ ಸಂದರ್ಭದಲ್ಲಿ ತಾಲೂಕು ಹಾಗೂ ಹೋರಾಟದ ನೆಲೆ ಈಸೂರನ್ನು ಜ್ಞಾಪಿಸಿಕೊಳ್ಳದೆ ಭಾಷಣ ಮಾಡುವುದಿಲ್ಲ ಎಂದರು.

ದೇವಾಂಗ ಸಮುದಾಯಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ಸಮುದಾಯದ ಎಲ್ಲ ಸಮಸ್ಯೆಯನ್ನು ಬಗೆಹರಿಸಲು ನೇಕಾರ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ದೇವಾಂಗ ಸಮಾಜವನ್ನು ಒಗ್ಗೂಡಿಸಿ, ಸಮಸ್ಯೆ ಪರಿಹರಿಸುವ ದಿಸೆಯಲ್ಲಿ ಯತ್ನಿಸುತ್ತಿದ್ದಾರೆ. ಬರಲಿರುವ ದಿನದಲ್ಲಿ ಲಕ್ಷ್ಮಿನಾರಾಯಣರವರು ಸಮಾಜದ ಅಭಿವೃದ್ಧಿಗೆ ಸೂಚಿಸುವ ಎಲ್ಲ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಎಲ್ಲ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬರವಸೆ ನೀಡಿದರು. ಗ್ರಾಮದ ಸಮಗ್ರ ಅಭಿವೃದ್ಧಿಗೆ 1.5 ಕೋಟಿ ಅನುದಾನ ಅಗತ್ಯವಿರುವ ಬಗ್ಗೆ ನೀಡಿದ ಮನವಿಯನ್ನು ಮುಖ್ಯಮಂತ್ರಿ ಬಳಿ ಚರ್ಚಿಸಿ ಬಿಡುಗಡೆಗೆ ಹೆಚ್ಚಿನ ಗಮನಹರಿಸಲಾಗುವುದು. 

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತಾಗುತ್ತಾರೆ: ಬಿಎಸ್‌ವೈ

ತಾಲೂಕಿನಲ್ಲಿ ಇದುವರೆಗೂ ಜನತೆ ಅತಿ ಹೆಚ್ಚಿನ ರೀತಿಯಲ್ಲಿ ಬೆಂಬಲ ಆಶೀರ್ವಾದ ನೀಡಿದ್ದು, ಬರಲಿರುವ ದಿನದಲ್ಲಿ ಪುತ್ರ ವಿಜಯೇಂದ್ರನಿಗೂ ಹಿಂದೂ ಮುಸ್ಲಿಂ ಕ್ರೈಸ್ತರೆಂಬ ಬೇಧ-ಭಾವವಿಲ್ಲದೆ ಎಲ್ಲರೂ ನನಗೆ ನೀಡಿದ ಬೆಂಬಲದ ರೀತಿಯಲ್ಲಿಯೇ ನೀಡಿ ದೊಡ್ಡ ಅಂತರದಲ್ಲಿ ಗೆಲ್ಲಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕರ್ತರಾಗುವಂತೆ ತಿಳಿಸಿದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ದೇಶಕ್ಕಾಗಿ ಮಾನ- ಪ್ರಾಣ ನೀಡಿದ ಈಸೂರಿನ ಜನತೆಗೆ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಕೊಡುಗೆ ನೀಡಲಾಗಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಇದುವರೆಗೂ 50 ಕೋಟಿ ಅನುದಾನ ನೀಡಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಯಡಿಯೂರಪ್ಪ ಎಂದಿಗೂ ರಾಜಕೀಯ, ಜಾತಿ ತಾರತಮ್ಯ ಮಾಡಿಲ್ಲ. 

ಶಿವಮೊಗ್ಗ ತುಂಗಾ ನದಿಯಿಂದ ಏತ ನೀರಾವರಿ ಮೂಲಕ ಅಂಜನಾಪುರಕ್ಕೆ ಹರಿಸಿದ ನೀರು ಗ್ರಾಮದ ಎಲ್ಲ ರೈತರಿಗೂ ಅನುಕೂಲ ಕಲ್ಪಿಸುತ್ತದೆ. ಜಲಾಶಯದ ನೀರನ್ನು ಬಿಜೆಪಿ ಪಕ್ಷದ ರೈತನ ಎಮ್ಮೆ ಮಾತ್ರ ಕುಡಿಯುವುದಿಲ್ಲ ಬದಲಿಗೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದವರ ಎಮ್ಮೆಗಳೂ ನೀರನ್ನು ಕುಡಿಯುತ್ತವೆ. ಹೀಗೆ ತಾರತಮ್ಯ ಇಲ್ಲದೆ ಊರು ಕಟ್ಟುವ ಕೆಲಸ ಮಾಡಿದೆ. ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ನೇಕಾರರ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ ಮಾತನಾಡಿದರು. ಎಂಎಡಿಬಿ ಅಧ್ಯಕ್ಷ ಕೆ.ಎಸ್‌.ಗುರುಮೂರ್ತಿ, ಎಂಸಿಎ ನಿರ್ದೇಶಕ ವಸಂತಗೌಡ, ಗ್ರಾ.ಪಂ. ಅಧ್ಯಕ್ಷೆ ಕವಿತಾ, ಅರುಂಧತಿ, ಮುಖಂಡ ಶಿವಪ್ಪಯ್ಯ, ಟಿ.ರಾಜೇಶ್‌, ವೀರೇಂದ್ರ, ಗಿರಿಯಪ್ಪ, ರೇವಣಪ್ಪ, ಡಾ.ರವಿ, ಪವನಕುಮಾರ್‌ ಗ್ರಾಮದ ಎಲ್ಲ ಮುಖಂಡರು ಇದ್ದರು.

ಕಾಂಗ್ರೆಸ್‌ ಪಕ್ಷ ವಿಷಯಗಳನ್ನು ತಿರುಚಿ ಜನರ ದಿಕ್ಕು ತಪ್ಪಿಸುತ್ತಿದೆ: ಬಿ.ಎಸ್‌.ಯಡಿಯೂರಪ್ಪ

ಬಿ.ಎಸ್‌.ಯಡಿಯೂರಪ್ಪ ಅವರು ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಸಮಗ್ರ ನೀರಾವರಿಗೆ ಅಳವಡಿಸಿರುವ 300 ಎಚ್‌ಪಿ ಮೋಟಾರ್‌ ಕೆಟ್ಟರೆ ರಿಪೇರಿ ಮಾಡಿಸುವುದಕ್ಕೆ, ತಾಲೂಕಿನ ಎಲ್ಲ ಗ್ರಾಮದಲ್ಲಿ ನಿರ್ಮಿಸಿರುವ ಸಮುದಾಯ ಭವನಕ್ಕೆ ಸುಣ್ಣ ಬಣ್ಣ ಮಾಡಲು ಸಮರ್ಥವಾದ ನಾಯಕನ ಅಗತ್ಯ ತಾಲೂಕಿಗೆ ಇದೆ. ಅದಕ್ಕೆ ಬಿ.ವೈ.ವಿಜಯೇಂದ್ರ ಸಮರ್ಥರು. ಬಿಜೆಪಿ ಸರಕಾರ ರಚನೆ ಆಗುವ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಶಾಸಕರನ್ನು ಉಪಚುನಾವಣೆ ಮೂಲಕ ಗೆಲ್ಲಿಸಿದ್ದು, ಬಿಜೆಪಿ ಠೇವಣಿ ಕಳೆದುಕೊಳ್ಳುತ್ತದೆ ಎನ್ನುವಂತಹ ಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟು ನನ್ನ ತಂದೆಯವರ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿಜಯೇಂದ್ರ ಸಾಕಷ್ಟು ಅನುಭವ ಹೊಂದಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರು ತಾಲೂಕಿನಿಂದ ಸ್ಪರ್ಧಿಸುತ್ತಾರೆ ಅವರಿಗೆ ನಿಮ್ಮ ಆಶೀರ್ವಾದ ನೀಡಿರಿ ಎಂದು ಮನವಿ ಮಾಡಿದರು.

click me!