
ಶಿವಮೊಗ್ಗ (ನ.29) : ನನಗೆ ಕೋಲಾರ, ಚಿಕ್ಕನಾಯಕನಹಳ್ಳಿ, ವರುಣಾ, ಹೆಬ್ಬಾಳ ಸೇರಿದಂತೆ ಅನೇಕ ಕಡೆ ಸ್ಪರ್ಧಿಸುವಂತೆ ಆಹ್ವಾನವಿದೆ. ಅದಕ್ಕಾಗಿ ನಾನು ಅರ್ಜಿಯಲ್ಲಿ ಕ್ಷೇತ್ರದ ಆಯ್ಕೆಯನ್ನು ಹೈ ಕಮಾಂಡ್ಗೆ ಬಿಟ್ಟಿದ್ದೇನೆ. ಅವರು ಎಲ್ಲಿ ಹೇಳ್ತಾರೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಯಾರಿಗೆ ಸಿಗುತ್ತೆ, ಸಿಗಲ್ಲ ಎಂಬುದು ಪ್ರಶ್ನೆಯಲ್ಲ. ನನಗೆ ಕೋಮುವಾದಿ, ಮನುವಾದಿ ಬಿಜೆಪಿಯನ್ನು ಆಡಳಿತದಿಂದ ಕೆಳಗಿಸಬೇಕು ಎಂಬುದಷ್ಟೇ ಮುಖ್ಯ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅನೇಕ ಕ್ಷೇತ್ರದ ಜನರು ಕೋರುತ್ತಿದ್ದಾರೆ. ನಾನು ಇದೇ ಕ್ಷೇತ್ರದಲ್ಲಿ ಆಯ್ಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ಗೆ ಬಿಟ್ಟಿದ್ದೀನಿ ಎಂದರು.
ಸಿದ್ರಾಮುಲ್ಲಾ ಖಾನ್ ಬೈಗುಳ ಅಲ್ಲ: ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ.ರವಿ
ಸಿದ್ದರಾಮಯ್ಯ ಜೀವನ ಕುರಿತು ಫಿಲ್ಮ… ತೆಗೆಯುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕನಕಗಿರಿ ಕ್ಷೇತ್ರದವರು ಬಂದು ಫಿಲ್ಮ… ತೆಗೆಯುವುದಾಗಿ ಕೇಳಿದ್ದಾರೆ. ಅದು ಬಿಟ್ಟು ನನಗೆ ಬೇರೆನೂ ಗೊತ್ತಿಲ್ಲ. ನಟಿಸುವ ಆಸಕ್ತಿಯೂ ಇಲ್ಲ ಎಂದು ಹೇಳಿದರು.
ಸಿ.ಟಿ.ರವಿ ಮೋಸ್ಟ್ ಕಮ್ಯೂನಲ್ ಫೆಲೋ:
ಸಿ.ಟಿ.ರವಿ ಮೋಸ್ಟ್ ಕಮ್ಯೂನಲ್ ಫೆಲೋ. ಅವರಿಗೆ ಜಾತ್ಯತೀತ ತತ್ವ ಅರ್ಥವಾಗುವುದಿಲ್ಲ, ಸಂವಿಧಾನದ ತತ್ವ ಅರ್ಥವಾಗುವುದಿಲ್ಲ. ಅಂತಹವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೊಲೆ, ಗಲಭೆಗಳಾಗುತ್ತದೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಸೈಲೆಂಟ್ ಸುನೀಲ ಅವರೆಲ್ಲಾ ಡಕಾಯಿತಿ, ಮರ್ಡರ್ ಮತ್ತಿತರ ಕೇಸ್ನಲ್ಲಿದ್ದಾರೆ. ಅಂತಹವರ ಜೊತೆ ಮೋಹನ್, ಸೂರ್ಯ ಮತ್ತಿತರರು ಹೋಗಿದ್ದಾರೆ. ಆಡಳಿತ ಪಕ್ಷದ ಎಂಪಿಗಳು ರೌಡಿಗಳ ಜತೆ ಇದ್ದರೆ ರೌಡಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಪೊಲೀಸರಿಗೆ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಕ್ರಿಮಿನಲ್ಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಬಿಜೆಪಿ ಹೇಳೋದು ಒಂದು, ಮಾಡೋದು ಒಂದು. ನಲಪಾಡ್, ವಿನಯ್ ಕುಲಕರ್ಣಿ ಅವರ ಮೇಲೆ ಆರೋಪವಿದೆ. ಅದು ಸಾಬೀತಾಗಿಲ್ಲ. ಹಾಗೆ ನೋಡಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೂ ಮರ್ಡರ್ ಕೇಸ್ ಇದೆ. ಗಡಿಪಾರಿಗೂ ಆದೇಶವಾಗಿತ್ತು ಎಂದರು.
ಕೊಲಿಜಿಯಂ ಕುರಿತು ಸುಪ್ರೀಂ ಕೋರ್ಚ್ ವ್ಯಕ್ತಪಡಿಸಿರುವ ಅಭಿಪ್ರಾಯ ಸರಿ ಇದೆ. ಕೊಲಿಜಿಯಂನಲ್ಲಿ ವಿರೋಧ ಪಕ್ಷದವರಿಗೂ ಅವಕಾಶ ಇರಬೇಕು. ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ತಲಾ 10 ಕೆ.ಜಿ ಉಚಿತ ಅಕ್ಕಿ: ಸಿದ್ದರಾಮಯ್ಯ
ಜನಾಕ್ರೋಶ ಸಭೆ ಯಶಸ್ವಿ
ಶಿವಮೊಗ್ಗದ ಮಲೆನಾಡು ಜನಾಕ್ರೋಶ ಸಭೆ ಯಶಸ್ವಿಯಾಗಿದೆ. ನಾವು ಅಧಿಕಾರದಲ್ಲಿದ್ದಾಗ ಶರಾವತಿ ಸಂತ್ರಸ್ತರ ಹಿತ ಗಮನದಲ್ಲಿಟ್ಟುಕೊಂಡು 56 ಡಿ ನೋಟಿಫಿಕೇಷನ್ ಹೊರಡಿಸಿದ್ದೇವು. ಮದನ್ ಗೋಪಾಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೆವು. ಶರಾವತಿ ಯೋಜನೆ ಆಗಿದ್ದು 1950ರಲ್ಲಿ. ಅರಣ್ಯ ಕಾಯ್ದೆ ಬಂದಿದ್ದು 1980ರಲ್ಲಿ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಾವು ಆದೇಶ ಹೊರಡಿಸಿದ್ದು. ಆದರೆ, ಗಿರೀಶ್ ಆಚಾರ್ ಎಂಬವರು ಹೈಕೋರ್ಚ್ಗೆ ಹೋದ ಕಾರಣ ಡಿ ನೋಟಿಫಿಕೇಷನ್ ರದ್ದಾಗಿದೆ. ಈಗಿನ ಬಿಜೆಪಿ ಸರ್ಕಾರ ಏನು ಮಾಡಿತು? ಯಡಿಯೂರಪ್ಪ, ಬೊಮ್ಮಾಯಿ ಏನು ಮಾಡಿದರು? ರೈತ ನಾಯಕ ಎಂದು ಹೇಳಿಕೊಂಡರೆ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.