ಮತ್ತೊಮ್ಮೆ ನಾನು ಮುಖ್ಯಮಂತ್ರಿ ಆಗಬಾರದೇಕೆ?: ಕುಮಾರಸ್ವಾಮಿ

By Kannadaprabha NewsFirst Published Oct 20, 2024, 6:33 AM IST
Highlights

ನಾನು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಸರ್ಕಾರ ಕೊಡಿ ಎಂದು ರಾಜ್ಯದ ಜನರಲ್ಲಿ ಈಗಲೂ ಮನವಿ ಮಾಡುತ್ತಿದ್ದೇನೆ. ನನ್ನ ೧೪ ತಿಂಗಳ ಆಡಳಿತ, ಬೇರೆಯವರ ಹಂಗಿನಲ್ಲಿ ನಡೆಸಿದ್ದು. ಆಗಲೂ ನಾಡಿಗೆ ಕೊಟ್ಟ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಉಳಿದಿದೆ. ಐದು ವರ್ಷಗಳ ಸರ್ಕಾರ ನನಗೆ ಒಂದು ಬಾರಿ ಸಿಕ್ಕರೆ ನನಗಿರುವ ಅನುಭವದಲ್ಲಿ ಕರ್ನಾಟಕವನ್ನು ಸಮೃದ್ಧ ನಾಡನ್ನಾಗಿ ಮಾಡುವುದಾಗಿ ಹೇಳಿದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ 

ಮಂಡ್ಯ(ಅ.20): ನಾನು ಜೋತಿಷ್ಯಗಾರನಲ್ಲ. ಆದರೂ ಹೇಳುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರ ೨೦೨೮ರವರೆಗೆ ಉಳಿಯುವುದಿಲ್ಲ. ಮತ್ತೊಮ್ಮೆ ನಾನು ಮುಖ್ಯಮಂತ್ರಿಯಾಗಲು ಜನರು ಒಂದು ಅವಕಾಶ ನೀಡುವರೆಂಬ ವಿಶ್ವಾಸ ನನ್ನಲ್ಲಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ರೈತಸಭಾಂಗಣದ ಆವರಣದಲ್ಲಿ ಸಭಾಂಗಣದ ನವೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಸರ್ಕಾರ ಕೊಡಿ ಎಂದು ರಾಜ್ಯದ ಜನರಲ್ಲಿ ಈಗಲೂ ಮನವಿ ಮಾಡುತ್ತಿದ್ದೇನೆ. ನನ್ನ ೧೪ ತಿಂಗಳ ಆಡಳಿತ, ಬೇರೆಯವರ ಹಂಗಿನಲ್ಲಿ ನಡೆಸಿದ್ದು. ಆಗಲೂ ನಾಡಿಗೆ ಕೊಟ್ಟ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಉಳಿದಿದೆ. ಐದು ವರ್ಷಗಳ ಸರ್ಕಾರ ನನಗೆ ಒಂದು ಬಾರಿ ಸಿಕ್ಕರೆ ನನಗಿರುವ ಅನುಭವದಲ್ಲಿ ಕರ್ನಾಟಕವನ್ನು ಸಮೃದ್ಧ ನಾಡನ್ನಾಗಿ ಮಾಡುವುದಾಗಿ ಹೇಳಿದರು.

Latest Videos

ಹಣದ ದಾಹಕ್ಕೆ ಕೆಂಪೇಗೌಡರು ಕಟ್ಟಿದ ಕೆರೆಗಳನ್ನೆಲ್ಲ ನುಂಗಿದ್ದಾರೆ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಕುಟುಂಬಗಳು ಕೈಚಾಚದಂತೆ ಮಾಡುವೆ:

ನನಗೊಂದು ಅವಕಾಶ ಕೊಟ್ಟರೆ ಕುಟುಂಬಗಳು ತಮ್ಮ ಬದುಕಿಗಾಗಿ ಬೇರೆಯವರೆದುರು ಕೈ ಚಾಚಬಾರದು. ಇನ್ನೊಬ್ಬರಿಗೆ ಕೈ ಎತ್ತಿ ಕೊಡುವ ಆರ್ಥಿಕ ಶಕ್ತಿ ಕೊಡುವ ರಾಜ್ಯ ಕರ್ನಾಟಕ. ಆದರೆ ಜನರ ಹಣ ಇವತ್ತು ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿ ಕಬಳಿಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಿದರೆ ಇವರು ಕೊಡುವ ೨ ಸಾವಿರ ರು. ಅಲ್ಲ. ಕನಿಷ್ಠ ೧೦ ಸಾವಿರ ಸಂಪಾದನೆ ಮಾಡುವ ಕಾರ್ಯಕ್ರಮಗಳು ಇವೆ ಎಂದು ಗ್ಯಾರಂಟಿ ಯೋಜನೆಗಳನ್ನು ಗುರಿಯಾಗಿಸಿಕೊಂಡು ಹೇಳಿದರು.

ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನವಿದೆ. ನಾವು ಅವರ ಸರ್ಕಾರವನ್ನು ಅಲ್ಲಾಡಿಸುತ್ತೇವೆ ಎಂದು ಹೇಳಿಲ್ಲ. ಸರ್ಕಾರದ ನಿಷ್ಕ್ರೀಯತೆಯು ಶಾಸಕರು ಹಳ್ಳಿಗೆ ಹೋಗಿ ಜನರನ್ನು ಭೇಟಿ ಮಾಡದ ವಾತಾವರಣವನ್ನು ಸೃಷ್ಟಿಸಿದೆ. ಸರ್ಕಾರದ ನಡವಳಿಕೆ ಬಗ್ಗೆ ಅವರಲ್ಲೇ ಅಸಮಾಧಾನ ಸ್ಫೋಟವಾಗಲಿದೆ ಎಂದು ಭವಿಷ್ಯ ನುಡಿದರು.

ನಿರುದ್ಯೋಗ ನಿವಾರಣೆಗೆ 'ವಿಂಗ್‌' ಸ್ಥಾಪನೆ, ಉದ್ಯೋಗ ಕಲ್ಪಿಸುವುದೇ ನನ್ನ ಮೊದಲ ಆದ್ಯತೆ:

ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ನಗರಸಭೆ ಅಧ್ಯಕ್ಷ ನಾಗೇಶ್, ಮುಖಂಡ ಬಿ.ಆರ್.ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬೇಲೂರು ಸೋಮಶೇಖರ್ ಇತರರಿದ್ದರು.

ಬಿಜೆಪಿ ನಾಯಕರ ವಿರುದ್ಧ ಕಿಡಿ:

ಚನ್ನಪಟ್ಟಣ ಉಪ ಚುನಾವಣೆ ವಿಚಾರವಾಗಿ, ಯಾರೂ ಯಾರ ಮೇಲೂ ದಬ್ಬಾಳಿಕೆ ಮಾಡಲಾಗುವುದಿಲ್ಲ. ಎರಡೂ ಪಕ್ಷದವರು ಪ್ರೀತಿ- ವಿಶ್ವಾಸದಿಂದ ಚುನಾವಣೆ ನಡೆಸಬೇಕು. ಇದನ್ನು ಎರಡೂ ಪಕ್ಷದ ನಾಯಕರು ಮನವರಿಕೆ ಮಾಡಿಕೊಳ್ಳಬೇಕು. ಒಂದು ಕಡೆ ಪ್ರೀತಿ- ವಿಶ್ವಾಸ ಇದ್ದರೆ ಸಾಲದು. ಎರಡೂ ಕಡೆಯಿಂದ ಸ್ಪಂದನೆ ಇರಬೇಕು ಎಂದು ಬಿಜೆಪಿ ನಾಯಕರಿಗೆ ಕುಟುಕಿದರು.

ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡೋಕೆ ಆಗೋಲ್ಲ ಎಂದು ಬಸವರಾಜ ಯತ್ನಾಳ್ ಹೇಳಿಕೆಗೆ ಟಾಂಗ್ ನೀಡಿದ ಕುಮಾರಸ್ವಾಮಿ, ಬಿಜೆಪಿಗೆ ಯಾವ ರೀತಿ ಶಕ್ತಿ ತುಂಬಿದೆ ಎಂಬ ಚರ್ಚೆ ಈಗ ಉಪಯೋಗವಾಗುವುದಿಲ್ಲ. ದೆಹಲಿ ನಾಯಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಈಗ ಅದರ ಬಗ್ಗೆ ಚರ್ಚಿಸುವುದಿಲ್ಲ, ನಾನು ಈ ಕ್ಷಣದವರೆಗೂ ಜನತಾದಳ, ಬಿಜೆಪಿ ಎಂದು ಬೇರ್ಪಡಿಸಿ ಮಾತನಾಡಿಲ್ಲ. ಎನ್‌ಡಿಎ ಅಭ್ಯರ್ಥಿ ಎಂದೇ ಮಾತನಾಡಿದ್ದೇನೆ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು. ಅದರಿಂದ ಮೈತ್ರಿಗೆ ಅಡ್ಡಿ ಆಗಬಾರದು ಎಂದು ಕುಟುಕಿದರು.

click me!