
ಮಂಗಳೂರು(ಜ.04): ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಹೆಮ್ಮೆಯ, ಸಂತೋಷದ ವಿಚಾರ. ಆದರೆ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕಾದ ಈ ಕಾರ್ಯಕ್ರಮವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸುತ್ತಿರುವ ಔಚಿತ್ಯವೇನು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಇದ್ದ ಅಯೋಧ್ಯೆ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾದ ಬಳಿಕ ಕೋರ್ಟ್ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಆ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಇದರಲ್ಲಿ ರಾಜಕೀಯ ಮಾಡುವುದು ಖೇದಕರ ಎಂದು ಹೇಳಿದರು.
ರಾಮಭಕ್ತರ ಮೇಲೆ ಕಾಂಗ್ರೆಸ್ಸಿಗೆ ಇಷ್ಟೊಂದು ಆಕ್ರೋಶ ಏಕೆ?: ಶಾಸಕ ವೇದವ್ಯಾಸ್ ಕಾಮತ್
ಹುಬ್ಬಳ್ಳಿಯಲ್ಲಿ 31 ವರ್ಷ ಹಿಂದೆ ನಡೆದಿದ್ದ ಗಲಭೆ ಪ್ರಕರಣದ ಇಬ್ಬರನ್ನು ಬಂಧಿಸಿರುವ ವಿಚಾರದಲ್ಲಿ ಬಿಜೆಪಿಯವರು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಆ ಇಬ್ಬರ ಮೇಲಿನ ಕ್ರಿಮಿನಲ್ ಪ್ರಕರಣವನ್ನು ಎಲ್ಪಿಸಿ (ಲಾಂಗ್ ಪೆಂಡಿಂಗ್ ಕೇಸ್) ಅಂತ ಇಡಲಾಗಿತ್ತು. ನ್ಯಾಯಾಲಯದ ಆಜ್ಞೆ ಪ್ರಕಾರ, ವಾರಂಟ್ ಇರುವಾಗ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಮಾಡುವುದು ಎಲ್ಲಿಂದ ಬಂತು? ಬಿಜೆಪಿ ಸರ್ಕಾರ ಇದ್ದಾಗ ಆ ಪ್ರಕರಣಗಳನ್ನು ಯಾಕೆ ಇತ್ಯರ್ಥಪಡಿಸಿಲ್ಲ? ಬಿಜೆಪಿ ನಾಯಕರಿಗೆ ಕಾನೂನಿನ ಕನಿಷ್ಠ ಸಾಮಾನ್ಯ ಜ್ಞಾನ ಇರಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಹಿಂದೂಗಳಿಗೆ ಬಹಳಷ್ಟು ಅನುಕೂಲ ಆಗಿದೆ. ಶಬರಿಮಲೆಗೆ ವಿಶೇಷ ಬಸ್ ಸೌಕರ್ಯ, ಅರ್ಚಕರಿಗೆ ಗೌರವಧನ ಹೆಚ್ಚಳ, ಸಾಮೂಹಿಕ ವಿಮೆ, ದೀಪಾವಳಿ ವೇಳೆ ಗೋಪೂಜೆಗೆ ಆದೇಶ, ಕಾಶಿ ಹೋಗುವವರ ಸಹಾಯಧನ ಹೆಚ್ಚಳ ಮಾಡಲಾಗಿದೆ. ಇದೆಲ್ಲ ಬಿಜೆಪಿಯವರ ಕಣ್ಣಿಗೆ ಯಾಕೆ ಕಾಣಲ್ಲ ಎಂದು ಪದ್ಮರಾಜ್ ಆರ್. ಪ್ರಶ್ನಿಸಿದರು.
ಮಂಗಳೂರಲ್ಲಿ ಎಲ್ಲೆಡೆ ರಸ್ತೆ ಅಗೆದು ಹಾಕಿ ಸಂಪೂರ್ಣ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ಜನಪ್ರತಿನಿಧಿಗಳು ಮೊದಲು ಈ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು. ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಕೇಶವ ಮರೋಳಿ, ರಾಕೇಶ್ ದೇವಾಡಿಗ, ಶಾಂತಲಾ ಗಟ್ಟಿ, ಚಂದ್ರಕಲಾ, ಉದಯ ಆಚಾರಿ, ಚೇತನ್ ಕುಮಾರ್ ಮತ್ತಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.