
ಬೆಂಗಳೂರು (ಆ.4): ಬರೊಬ್ಬರಿ ಎರಡು ತಿಂಗಳ ತಿಕ್ಕಾಟದ ಬಳಿಕ ನಡೆದಿರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೊನೇ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೈಬಿಟ್ಟಿದ್ದು, ಇದರಿಂದ ಖಾಲಿ ಉಳಿಯಲಿರುವ ಒಂದು ಸ್ಥಾನ ತುಂಬುವುದು ಹೇಗೆ ಎಂಬುದು ಹೈಕಮಾಂಡ್ ಅನ್ನು ಯಕ್ಷಪ್ರಶ್ನೆಯಾಗಿ ಕಾಡುವ ಸಾಧ್ಯತೆಯಿದೆ.
ಸೋಮವಾರ ಮಧ್ಯಾಹ್ನ ಹೈಕಮಾಂಡ್ 20 ಮಂದಿ ಸಚಿವರ ಪಟ್ಟಿ ರವಾನಿಸಿದ್ದು, ಈ ಪೈಕಿ ಕುರುಬ ಸಮುದಾಯದ ಪರಿಷತ್ ಸದಸ್ಯೆ ಗಾಯತ್ರಿ ಶಾಂತಗೌಡ ಅವರಿಗೆ ಅವಕಾಶ ನೀಡಲಾಗಿತ್ತು. ಇತ್ತೀಚೆಗಷ್ಟೇ ಸುದೀರ್ಘ ನ್ಯಾಯಾಲಯ ಹೋರಾಟದ ನಂತರ ಪರಿಷತ್ ಸದಸ್ಯ ಸ್ಥಾನ ಗಳಿಸಿಕೊಂಡ ಗಾಯತ್ರಿ ಅವರಿಗೆ ಸಚಿವ ಸ್ಥಾನ ಅನಿರೀಕ್ಷಿತ ಉಡುಗೊರೆಯಂತೆ ಕಂಡಿತ್ತು.
ಸಂಪುಟ ವಿಸ್ತರಣೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬದಲಿಗೆ ಪಕ್ಷ ಸಂಘಟನೆಗೆ ಅನುಕೂಲವಾಗುವ ಹಿರಿಯ ಮಹಿಳೆಗೆ ಅವಕಾಶ ನೀಡಬೇಕು ಎಂಬ ನಿಲುವಿನ ಪರಿಣಾಮವಾಗಿ ಹುದ್ದೆಗಾಗಿ ಲಾಬಿ, ಪೈಪೋಟಿ ನಡೆಸದಿದ್ದರೂ ಗಾಯತ್ರಿ ಅವರನ್ನು ಹೈಕಮಾಂಡ್ ಸಚಿವ ಸ್ಥಾನಕ್ಕೆ ಪರಿಗಣಿಸಿತ್ತು.
ಆದರೆ, ಸಿದ್ದರಾಮಯ್ಯ ಅವರು ಕುರುಬರ ಕೋಟಾದ ಉಳಿಕೆ ಒಂದು ಸ್ಥಾನಕ್ಕೆ ಬಸವರಾಜ ಶಿವಣ್ಣನವರ್ ಅವರನ್ನು ಸೂಚಿಸಿದ್ದರು. ಮೈಸೂರಿನಿಂದ ತಮ್ಮ ಪುತ್ರ ಯತೀಂದ್ರ, ಬೆಂಗಳೂರು ಭಾಗದಿಂದ ಬೈರತಿ ಸುರೇಶ್ ಸಚಿವರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಪ್ರಬಲ ಕುರುಬ ಮತ ಬ್ಯಾಂಕ್ ಇದೆ. ಹೀಗಾಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ಶಾಸಕ ಶಿವಣ್ಣವರ್ಗೆ ಅವಕಾಶ ನೀಡಬೇಕು ಎಂಬುದು ಸಿದ್ದರಾಮಯ್ಯ ಅವರ ನಿಲುವಾಗಿತ್ತು. ಅಲ್ಲದೆ, ತಮ್ಮ ಪುತ್ರ ಯತೀಂದ್ರ ಹಾಗೂ ಗಾಯತ್ರಿ ಸೇರಿ ಇಬ್ಬರೂ ಕುರುಬ ಸಚಿವರು ಪರಿಷತ್ನಿಂದ ಬರುವುದು ಜಾತಿ ಸಮೀಕರಣದ ದೃಷ್ಟಿಯಿಂದ ಸರಿಯಲ್ಲ ಎಂಬುದು ಅವರ ಭಾವನೆ ಎನ್ನಲಾಗಿದೆ.
ಸಿದ್ದರಾಮಯ್ಯರಿಂದ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಗಾಯತ್ರಿ ಅವರ ಹೆಸರಿಗೆ ತಡೆ ಬಿದ್ದಿದೆ. ಇದೀಗ ಒಂದೇ ಸ್ಥಾನ ಖಾಲಿಯಿದ್ದು ಒಂದೇ ಸ್ಥಾನದಲ್ಲಿ ಕುರುಬರು ಹಾಗೂ ಮಹಿಳೆಯರು ಇಬ್ಬರಿಗೂ ಅವಕಾಶ ಮಾಡಿಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಸಿದ್ದರಾಮಯ್ಯ ಬಸವರಾಜ ಶಿವಣ್ಣನವರ್ ಅವರಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದ್ದು, ಅವರಿಗೆ ಅವಕಾಶ ನೀಡಿದರೆ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲದಂತಾಗಲಿದೆ. ಗಾಯತ್ರಿ ಶಾಂತೇಗೌಡ ಬದಲಿಗೆ ಕನಿಜ್ ಫಾತಿಮಾ, ನಯನಾ ಮೋಟಮ್ಮ ಸೇರಿ ಯಾರಿಗೆ ಅವಕಾಶ ನೀಡಿದರೂ ಮೊದಲ ಬಾರಿಗೆ ಶಾಸಕರಾಗಿರುವುದರಿಂದ ಗಾಯತ್ರಿ ಅವರಂತೆ ಪಕ್ಷ ಸಂಘಟನೆಗೆ ಬಲ ತುಂಬುವ ಸಾಧ್ಯತೆಯಿಲ್ಲ ಎಂಬುದು ಹೈಕಮಾಂಡ್ ಭಾವನೆ. ಒಂದು ವೇಳೆ ಅವರಿಗೆ ನೀಡಿದರೂ ಕುರುಬ ಸಮುದಾಯಕ್ಕೆ ಒಂದು ಸ್ಥಾನ ವಂಚಿಸಿದಂತಾಗುತ್ತದೆ.
ಹೀಗಾಗಿ ಕೊನೆಗೆ ಉಳಿದಿರುವ ಒಂದು ಸ್ಥಾನ ತುಂಬುದು ಹೈಕಮಾಂಡ್ಗೆ ಸವಾಲಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.