
ಬೆಂಗಳೂರು : ‘ಆರೆಸ್ಸೆಸ್ ದೆವ್ವ ಇದ್ದಂಗೆ, ಬಿಜೆಪಿ ಅದರ ನೆರಳು’ ಎಂದು ತಾವು ಕಿಡಿಕಾರಿದ್ದಕ್ಕೆ ಬಿಜೆಪಿ ನಾಯಕರು ಉತ್ತರಿಸಿರುವುದನ್ನು ಪ್ರಶ್ನಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ನಾನು ಪ್ರಶ್ನೆ ಮಾಡುತ್ತಿರುವುದು ಆರ್ಎಸ್ಎಸ್ ಸಂಘಟನೆಗೆ. ಆರ್ಎಸ್ಎಸ್ ಸಂಘಟನೆ ಬಗ್ಗೆ ಕೇಳಿದರೆ ಇವರು ಯಾಕೆ ಉತ್ತರ ಕೊಡುತ್ತಿದ್ದಾರೆ? ಇವರು ಸಂಘಟನೆಯ ವಕ್ತಾರರೇ?’ ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಮಕ್ಕಳನ್ನು ಗಣವೇಷದಲ್ಲಿ ನನಗೆ ತೋರಿಸಲಿ. ಬಿಜೆಪಿ ನಾಯಕರಲ್ಲಿ ಫುಲ್ ಟೈಂ ಪ್ರಚಾರಕರು ಯಾರಿದ್ದಾರೆ ಎಂಬುದನ್ನು ತೋರಿಸಲಿ’ ಎಂದು ಸವಾಲು ಹಾಕಿದರು.
‘ಕೋಮುವಾದದ ಪ್ರಯೋಗಶಾಲೆ ತೆರೆದು, ದ್ವೇಷದ ನಶೆ ಮಾರುತ್ತಿದ್ದೀರಿ. ಕರಾವಳಿಯಲ್ಲಿನ ಅಪಾರ ಆರ್ಥಿಕ ಸಾಮರ್ಥ್ಯ, ಅಲ್ಲಿನ ಜನರ ಪ್ರತಿಭೆ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹಿನ್ನೆಲೆಗೆ ತಳ್ಳುವ ಕೆಲಸ ಮಾಡಿದ್ದೀರಿ’ ಎಂದು ದೂರಿದರು.
‘ಆದರೆ ನಮ್ಮ ಸರ್ಕಾರ ಕರಾವಳಿಯ ಸಾಮರ್ಥ್ಯವನ್ನು ಸಮೃದ್ಧಿಯಾಗಿ ಪರಿವರ್ತಿಸಲು ಬದ್ಧವಾಗಿದೆ, ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು ರಂಗೋಲಿ ಬಿಡಿಸಲು ಅಲ್ಲ. ಕೋಮು ಸಂಘರ್ಷಗಳಿಗೆ ಕಡಿವಾಣ ಹಾಕಿ ಶಾಂತಿ-ಸೌಹಾರ್ದತೆ ಕಾಪಾಡಲು’ ಎಂದು ಹೇಳಿದರು.
‘ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ. ಪ್ರಾದೇಶಿಕ ಅಸಮತೋಲನಕ್ಕೆ ಐತಿಹಾಸಿಕ ಮತ್ತು ಭೌಗೋಳಿಕ ಕಾರಣಗಳಿವೆ. ಅಲ್ಲಿ ಐಟಿ ಕಂಪನಿಗಳು ಬಂದಿಲ್ಲ ಎಂದು ಪ್ರಶ್ನಿಸುವವರ ತಲೆ ಕೆಟ್ಟಿದೆಯೇ? ಮಾನವ ಸಂಪನ್ಮೂಲಕ್ಕೆ ತಕ್ಕಂತೆ ಐಟಿ ಕಂಪನಿಗಳು ಬರುತ್ತವೆ. ಅದರ ಜ್ಞಾನ ಇಲ್ಲವೇ? ಶಿವಮೊಗ್ಗಕ್ಕೆ ಸಿಮೆಂಟ್ ಕಾರ್ಖಾನೆ ಬರುತ್ತದೆಯೇ?’ ಎಂದು ಕಿಡಿ ಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.