ಉಪಚುನಾವಣೆ: ಯಾರಿಗೆ ದೀಪಾವಳಿ ಸಿಹಿ?

Kannadaprabha News   | Asianet News
Published : Oct 31, 2021, 07:58 AM ISTUpdated : Oct 31, 2021, 08:31 AM IST
ಉಪಚುನಾವಣೆ: ಯಾರಿಗೆ ದೀಪಾವಳಿ ಸಿಹಿ?

ಸಾರಾಂಶ

*  ಮತಯಂತ್ರದಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ *  ಮತದಾರ ಕೊಟ್ಟ ತೀರ್ಪು ನೋಡಲು ಇನ್ನೆರಡು ದಿನ ಕಾಯಲೇಬೇಕು *  ಫಲಿಸುತ್ತಾ ಬಿಜೆಪಿ ತಂತ್ರ? ಮಾನೆ ನೆರವು ಕೈ ಹಿಡಿಯುತ್ತಾ? 

ನಾರಾಯಣ ಹೆಗಡೆ/ಮಯೂರ ಹೆಗಡೆ

ಹಾನಗಲ್ಲ(ಅ.31): ಕಳೆದ ಹದಿನೈದು ದಿನಗಳಿಂದ ತೀವ್ರ ರಾಜಕೀಯ(Politics) ಕಾವು ಏರಿಸಿದ್ದ ಹಾನಗಲ್ಲ(Hanagal) ಉಪಕದನದ ಪ್ರಮುಖ ಘಟ್ಟಮತದಾನ ಮುಗಿದಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ(Election) ಈಗಾಗಲೆ ಮತದಾರ ತನ್ನ ತೀರ್ಪು ನೀಡಿದ್ದು, ಮತಯಂತ್ರದಲ್ಲಿ 13 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಭದ್ರವಾಗಿದೆ. ನ. 2ರಂದು ಅಭ್ಯರ್ಥಿಗಳ(candidates) ಹಣೆಬರಹ ಬಹಿರಂಗವಾಗಲಿದೆ.

ಹಾನಗಲ್ಲ(Hanagal) ಕ್ಷೇತ್ರ ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಚುನಾವಣಾ ಅಬ್ಬರಕ್ಕೆ ಸಾಕ್ಷಿಯಾಯಿತು. ಘಟಾನುಘಟಿ ನಾಯಕರ ಮಾತಿನ ಬಿರುಸುಬಾಣ, ಅಭಿವೃದ್ಧಿ ಮಂತ್ರ, ಹಣದ ಹೊಳೆ, ಭ್ರಷ್ಟಾಚಾರದ ಆರೋಪ, ಜಿದ್ದಾಜಿದ್ದಿನ ಸ್ಪರ್ಧೆ ಹಾನಗಲ್ಲ ಕ್ಷೇತ್ರ ಕಂಡಿದ್ದು ಇದೆ ಮೊದಲು ಎನ್ನುತ್ತಾರೆ ತಾಲೂಕಿನ ಜನರು. ಉಪಚುನಾವಣೆ(Byelection) ಅಕ್ಷರಶಃ ಸಾರ್ವತ್ರಿಕ ಚುನಾವಣೆಯ ಕಾವನ್ನೂ ಮೀರಿಸಿತ್ತು. ಎಲ್ಲವನ್ನೂ ಆಲಿಸಿದ, ಕಣ್ಣಾರೆ ಕಂಡ ಮತದಾರ ನೀಡಿದ ತೀರ್ಪು ಮತಯಂತ್ರದಲ್ಲಿ ಗೌಪ್ಯವಾಗಿದೆ.

ಶೀಘ್ರ ಕಾಂಗ್ರೆಸ್ ಪ್ರಬಲ ವಿಕೆಟ್ ಪತನ ಸೂಚನೆ

ಫಲಿಸುತ್ತಾ ಬಿಜೆಪಿ ರಣತಂತ್ರ?:

ಪ್ರಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai), ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yediyurappa) ಬರುವವರೆಗೆ ಕ್ಷೇತ್ರದಲ್ಲಿ ಬೇರೆಯದೆ ವಾತಾವರಣ ಇತ್ತು ಎಂಬುದು ಕ್ಷೇತ್ರದ ಸಾಮಾನ್ಯ ಕಾರ್ಯಕರ್ತನೂ ಹೇಳುವ ಮಾತು. ಆದರೆ, ಬಳಿಕ ಸಿಎಂ ಹೆಣೆದ ರಣತಂತ್ರಕ್ಕೆ ಕಾಂಗ್ರೆಸ್‌(Congress) ಪಾಳಯವನ್ನು ಅಲುಗಾಡಿಸಿದ್ದು ಸುಳ್ಳಲ್ಲ. ಮುಖ್ಯಮಂತ್ರಿ ಮೊದಲ ದಿನವೆ ವಂಶಿ ಫಾಮ್‌ರ್‍ಹೌಸ್‌ನಲ್ಲಿ ಸಮುದಾಯವಾರು ಸಭೆ ನಡೆಸುವ ಮೂಲಕ ತಾವೆಂತ ರಾಜತಂತ್ರ ರೂಪಿಸಿದ್ದೇವೆ ಎಂಬುದನ್ನು ಸಾರಿಬಿಟ್ಟರು. ಸಚಿವರನ್ನು ಕರೆಸಿ ಅವರ ಸಮುದಾಯಗಳ ಮತ ಸೆಳೆಯಲು ಸೂಚಿಸಿ ಕಾಂಗ್ರೆಸ್ಸಿಗೆ ಪ್ರತಿಪಟ್ಟು ಹಾಕಿದ್ದರು.
ನೀರಾವರಿ, ಆಶ್ರಯ ಮನೆ, ರಸ್ತೆ ಸೇರಿ ಇತರ ಅಭಿವೃದ್ಧಿ ಕುರಿತು ಸಿದ್ದರಾಮಯ್ಯ(Siddaramaiah) ಪ್ರಶ್ನೆಯ ಮೊನಚಿಗೆ, ಬೆಲೆಯೇರಿಕೆ ಕುರಿತು ವ್ಯಂಗ್ಯಕ್ಕೆ ಬಿಜೆಪಿ(BJP) ಪ್ರತ್ಯುತ್ತರವನ್ನು, ಮರುಪ್ರಶ್ನೆಯನ್ನು ಹಾಕಿತ್ತು. ಇದು ಜನಮನವನ್ನು ಎಷ್ಟು ತಲುಪಿದೆ ಎಂಬುದಕ್ಕೆ ಫಲಿತಾಂಶ ಕನ್ನಡಿಯಾಗಲಿದೆ.

ಕ್ಷೇತ್ರದಲ್ಲಿ ಲಿಂಗಾಯತ(Linagayat) ಪಂಚಮಸಾಲಿ ಮತಗಳೆ ಅಧಿಕವಾಗಿರುವ ಕಾರಣ ಸಮಾಜದ ರಾಜ್ಯ ನಾಯಕ ಸಿ.ಆರ್‌. ಬಳ್ಳಾರಿ, ಬಿಜೆಪಿಯಿಂದ ಟಿಕೆಟ್‌ಗೆ ಪ್ರಯತ್ನಿಸಿ ಕೊನೆ ಕ್ಷಣದಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದರು. ಅದೇ ಸಮಾಜದ, ಮಾಜಿ ಸಚಿವ ಮನೋಹರ ತಹಶೀಲ್ದಾರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸೋಮಶೇಖರ ಕೋತಂಬರಿ ಸಹ ಕಣದಿಂದ ಹಿಂದೆ ಸರಿದು ಬಿಜೆಪಿ ಬೆಂಬಲಿಸಿದ್ದರು. ಇದು ಎಷ್ಟರ ಮಟ್ಟಿಗೆ ಬಿಜೆಪಿಗೆ ಪ್ಲಸ್‌ ಆಗಲಿದೆ ಎಂಬುದು ಕಾದು ನೋಡಬೇಕು.

ಆದರೆ, ಕೋವಿಡ್‌(Covid19) ವೇಳೆ ಬಿಜೆಪಿ ಮುಖಂಡರು, ಸಂಸದರು ವೈಯಕ್ತಿಕವಾಗಿ ಕಾಣಿಸಿಕೊಂಡಿಲ್ಲ ಎಂಬ ಬೇಸರ ಹಳ್ಳಿಗರಲ್ಲಿ ಇರಲಿಲ್ಲ ಎಂದು ಹೇಳಲಾಗಲ್ಲ. ಸಿಎಂ ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಈ ಬೇಸರ ನೀಗಿಸಿದೆ ಎಂಬ ಸೀಕ್ರೆಟ್‌ ಫಲಿತಾಂಶದ ದಿನ ಅನ್‌ಲಾಕ್‌ ಆದಾಗಲೆ ತಿಳಿಯಲಿದೆ.

ಸಚಿವ ಎಂಟಿಬಿ ನಾಗರಾಜ್ ಮನವಿಗೆ ಸ್ಪಂದಿಸಿದ ಈಶ್ವರಪ್ಪ

ಮಾನೆ ನೆರವು ಕೈ ಹಿಡಿಯುತ್ತಾ?:

ಹಾಗೆ ನೋಡಿದರೆ, ಮಾನೆ ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಜನಪರ ಕಾರ್ಯಗಳು, ಅವರ ಉಪ ಚುನಾವಣೆಯ ಬತ್ತಳಿಕೆಯಲ್ಲಿನ ಪ್ರಮುಖ ಅಸ್ತ್ರವಾಗಿತ್ತು. ಹಳ್ಳಿಹಳ್ಳಿಗಳಲ್ಲಿ ಮಾನೆ ಮಾಡಿರುವ ಉಪಕಾರ ಸ್ಮರಿಸಿದವರು ಕಂಡುಬಂದಿದ್ದಾರೆ. ಆದರೆ, ಆಪತ್ಬಾಂಧವ ಎಂಬ ನಾಮಾಂಕಿತ ಎಷ್ಟರ ಮಟ್ಟಿಗೆ ಮತ ತಂದು ಕೊಡುತ್ತದೆ ಎಂಬುದು ಮುಖ್ಯ. ಇನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಸೇರಿ ಕೈ ಅದ್ಧೂರಿಯಾಗಿ ಪ್ರಚಾರ ನಡೆಸಿದೆ. ಕ್ಷೇತ್ರದಲ್ಲಿ ಮಾನೆ ಮಾಡಿದ ಸಹಾಯಹಸ್ತವು ಹಸ್ತದ ಗುರುತಿಗೆ ಮತವಾಗಿ ಪರಿವರ್ತನೆಯಾಗಿದೆಯೇ ಎಂಬುದು ಎಣಿಕೆ ದಿನ ಗೊತ್ತಾಗಲಿದೆ.

ಜೆಡಿಎಸ್‌ನತ್ತ(JDS) ಮುಸ್ಲಿಂ(Muslim) ಮತಗಳು ಹೆಚ್ಚು ಹರಿಯದಂತೆ ಅಂಜುಮನ್‌ ಸೇರಿ ಸ್ಥಳೀಯ ಮುಸ್ಲಿಂ ಮುಖಂಡರೊಟ್ಟಿಗೆ ಕಾಂಗ್ರೆಸ್‌ ನಾಯಕರು ಮಾತುಕತೆ ನಡೆಸಿದ್ದರು. ಅಲ್ಲದೆ ಕೊನೆ ದಿನ ಜಮೀರ್‌ ಅಹ್ಮದ್‌ ಕರೆಸಿ ಪ್ರಯತ್ನ ನಡೆಸಿದ್ದರು. ಎರಡನೇ ದೊಡ್ಡ ಸಂಖ್ಯೆಯ ಮತದಾರರಾದ9(Voters) ಮುಸ್ಲಿಮರು ಯಾರ ಪರ ವಾಲಿದ್ದಾರೆ ಎಂಬುದೂ ಸಿಕ್ರೇಟ್‌. ಜತೆಗೆ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದು, ಟಿಕೆಟ್‌ ಕೊಡದಿರುವುದರ ಬಗ್ಗೆ ಮನೋಹರ ತಹಶೀಲ್ದಾರ ಬೇಸರ ನಿಜವಾಗಿಯೂ ಕಳೆದಿತ್ತೆ ಎಂಬ ಈ ವರೆಗಿನ ಪ್ರಶ್ನೆಗೆ ದೀಪಾವಳಿ(Deepavali) ಮುನ್ನಾದಿನ ಉತ್ತರ ಸಿಗಲಿದೆ. ಹೆಚ್ಚಿನ ಮತದಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಗಂಗಾಮತಸ್ಥ ಸಮುದಾಯದ ಎಷ್ಟುಮತಗಳನ್ನು ಅವರ ಮುಖಂಡರು ಮಾನೆಗೆ ಕೊಡಲಿದ್ದಾರೆ ಎಂಬುದು ಕೂಡ ಅಂದು ಗೊತ್ತಾಗಲಿದೆ.

ಜೆಡಿಎಸ್‌ ವರ್ಕೌಟ್‌:

ಸಿಂದಗಿ(Sindagi) ಉಪಚುನಾವಣೆಗೆ ನೀಡಿದಷ್ಟು ಒತ್ತನ್ನು ಜೆಡಿಎಸ್‌ ವರಿಷ್ಠರು ಇಲ್ಲಿ ನೀಡಿಲ್ಲ ಎಂಬುದು ಸ್ಪಷ್ಟ. ಅ. 23 ಒಂದೇ ದಿನ ಕುಮಾರಸ್ವಾಮಿ(HD Kumaraswamy) ತಮ್ಮ ನಾಯಕರನ್ನು ಕರೆತಂದು ಸಮಾವೇಶ ನಡೆಸಿದ್ದು ಹೊರತುಪಡಿಸಿ ಉಳಿದ ದಿನ ಅದರ ನಾಯಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಒಂದು ಹಂತದಲ್ಲಿ ಇಲ್ಲಿನ ಅಭ್ಯರ್ಥಿ ನಿಯಾಜ್‌ ಶೇಖ ಏಕಾಂಗಿಯಾಗಿ ತೆನೆ ಹೊತ್ತು ಓಡಾಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್‌ ಎದುರು ಜೆಡಿಎಸ್‌ ತೀರಾ ಮಂಕಾಗಿತ್ತು. ಹಳ್ಳಿಗಳಲ್ಲಿ ಓಡಾಡಿ ಮತ ಕೇಳಿದ್ದು, ವಿವಿಧ ಮಾಧ್ಯಮವನ್ನು, ಸೋಶಿಯಲ್‌ ಮೀಡಿಯಾವನ್ನೂ ಸಮರ್ಥವಾಗಿ ಬಳಸಿಕೊಂಡಿದ್ದು ಕಂಡುಬರಲಿಲ್ಲ ಎನ್ನುತ್ತಾರೆ ಕ್ಷೇತ್ರದ ರಾಜಕೀಯ ವಿಶ್ಲೇಷಕರು.

ಒಟ್ಟಾರೆ 13 ಅಭ್ಯರ್ಥಿಗಳು ಕಣದಲ್ಲಿದ್ದರೂ ಪ್ರತಿಧ್ವನಿಸಿದ್ದು ಶಿವರಾಜ ಸಜ್ಜನರ ಹಾಗೂ ಶ್ರೀನಿವಾಸ ಮಾನೆ ಹೆಸರು ಮಾತ್ರ. ಇವರಿಬ್ಬರಲ್ಲಿ ಮತದಾರ ದೀಪಾವಳಿಯ ಮುನ್ನಾದಿನ ಯಾರಿಗೆ ಸಿಹಿ ನೀಡಲಿದ್ದಾನೆ ಎಂಬುದಕ್ಕೆ ಇನ್ನೆರಡು ದಿನ ಕಾಯಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ