
ಸೋಮರಡ್ಡಿ ಅಳವಂಡಿ
ಕೊಪ್ಪಳ (ಏ.2) : ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ತನ್ನ ಹುರಿಯಾಳು ಘೋಷಿಸಿದೆ. ಹಾಲಿ ಶಾಸಕ ಅಮರೇಗೌಡ ಭಯ್ಯಾಪುರ ಹೆಸರನ್ನು ಮೊದಲ ಪಟ್ಟಿಯಲ್ಲಿಯೇ ಘೋಷಣೆ ಮಾಡಿರುವುದರಿಂದ ಈಗಾಗಲೇ ಅವರು ಸಹ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಆದರೆ, ಇವರ ವಿರುದ್ಧ ಯಾರನ್ನು ಅಖಾಡಕ್ಕೆ ಇಳಿಸಬೇಕು ಎಂದು ಬಿಜೆಪಿ ಇನ್ನೂ ಫೈನಲ್ ಮಾಡಿಲ್ಲ. ಕಾಂಗ್ರೆಸ್ ಚುನಾವಣೆಯ ತಯಾರಿಯಲ್ಲಿ ತೊಡಗಿದ್ದರೆ ಬಿಜೆಪಿಯಲ್ಲಿ ಟಿಕೆಟ್ಗಾಗಿ ಒಳಗೊಳಗೆ ಫೈಟ್ ನಡೆದಿದೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರ(Kushtagi assembly constituency)ದಲ್ಲಿ ಇದುವರೆಗೂ ಸತತ ಎರಡು ಬಾರಿ ಯಾರೂ ಗೆದ್ದಿಲ್ಲ. ಪ್ರತಿ ಬಾರಿಯೂ ಇಲ್ಲಿ ಬದಲಾವಣೆ ಮಾಡಲಾಗುತ್ತದೆ. ಎರಡೆರಡು ಬಾರಿ ಶಾಸಕರು ಆದವರು ಇದ್ದಾರೆ. ಸತತವಾಗಿ ಗೆದ್ದ ಉದಾಹರಣೆ ಇಲ್ಲ. ಹೀಗಾಗಿ, ಈ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ಹುಮ್ಮಸ್ಸಿನಲ್ಲಿ ಹಾಲಿ ಶಾಸಕ ಅಮರೇಗೌಡ ಭಯ್ಯಾಪುರ(MLA Amaregowda Bhaiyapur) ಶತಾಯ-ಗತಾಯ ಪ್ರಯತ್ನಿಸುತ್ತಿದ್ದಾರೆ.
ಕೊಪ್ಪಳ: ನೀತಿ ಸಂಹಿತೆ ಉಲ್ಲಂಘನೆ, ಕೆಆರ್ಪಿ ಪಕ್ಷದ ಅಂಬ್ಯುಲೆನ್ಸ್ ಜಪ್ತಿ
ಈ ನಡುವೆ ಬಿಜೆಪಿ ತನ್ನ ಹುರಿಯಾಳು ಘೋಷಣೆ ಮಾಡಲು ನಾನಾ ರೀತಿಯಲ್ಲಿ ಪರಿಶೀಲಿಸುತ್ತಿದೆ. ಹಾಗೆ ನೋಡಿದರೆ ಈ ಹಿಂದೆ ಕುಷ್ಟಗಿಗೆ ಆಗಮಿಸಿದ ಎಲ್ಲ ನಾಯಕರು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್(Doddanagowda Patil) ಅವರೇ ಅಭ್ಯರ್ಥಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ದೊಡ್ಡನಗೌಡ ಪಾಟೀಲ್ ಕೂಡ ಈಗಾಗಲೇ ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.
ಕುಷ್ಟಗಿಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ದೊಡ್ಡನಗೌಡ ಪಾಟೀಲ್ ಅವರನ್ನು ಈ ಬಾರಿ ಗೆಲ್ಲಿಸಲೇಬೇಕು ಎಂದು ಮನವಿ ಮಾಡುವ ಮೂಲಕ ಇವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು.
ಆದರೂ ಒಳಗೊಳಗೆ ಟಿಕೆಟ್ಗಾಗಿ ಫೈಟ್ ಇದ್ದೇ ಇತ್ತು. ಈಗ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪರಿಶೀಲನೆ ಮಾಡುತ್ತಿರುವ ವೇಳೆ ಇದು ಮತ್ತಷ್ಟುಮುನ್ನೆಲೆಗೆ ಬಂದಿದೆ. ಕುರುಬ ಸಮುದಾಯ(Kuruba community)ದ ದೊಡ್ಡನಗೌಡ ಪಾಟೀಲ್ಗೆ ಟಿಕೆಟ್ ಕೊಡಲೇಬೇಕಿರುವುದರಿಂದ ಇದರಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಆದರೆ, ಇದೇ ಸಮುದಾಯದ ಕುರಿ, ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ ಹೆಸರು ಚಾಲ್ತಿಯಲ್ಲಿದೆ. ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಪರಮಾಪ್ತ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಕೃಪೆ ಇರುವ ಶರಣು ತಳ್ಳಿಕೇರಿಗೆ ಟಿಕೆಟ್ ದಕ್ಕಬಹುದೇ ಎನ್ನುವ ಮಾತು ಕೇಳಿ ಬರುತ್ತಿದೆ. ಮೊದ ಮೊದಲು ಈ ಬಗ್ಗೆ ಅಷ್ಟಾಗಿ ಚರ್ಚೆಯಾಗುತ್ತಿರಲಿಲ್ಲ. ಆದರೆ, ಈಗೀಗ ಇವರ ಹೆಸರು ಮುಂಚೂಣಿಗೆ ಬರುತ್ತಿದೆ.
ಈ ಮಧ್ಯೆ ಪಂಚಮಸಾಲಿ ಸಮುದಾಯದ ಹಳ್ಳೂರು ಬಸವರಾಜ ಪ್ರಯತ್ನದಲ್ಲಿದ್ದಾರೆ. ದೊಡ್ಡನಗೌಡ ಪಾಟೀಲ್ ಜತೆ ಗುರುತಿಸಿಕೊಂಡಿರುವ ಅವರು, ಈಗೀಗ ಟಿಕೆಟ್ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವೂ ಮತ ಸೆಳೆಯಲು ಸಾಕಷ್ಟುಶ್ರಮ ಹಾಕುತ್ತಿದೆ. ತುಕಾರಾಮಪ್ಪ ಸುರ್ವೆ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಅವರು ಕ್ಷೇತ್ರ ಸುತ್ತಾಟದಲ್ಲಿದ್ದಾರೆ. ಆದರೆ, ಬಿಜೆಪಿ ಟಿಕೆಟ್ ಯಾರಿಗೆ ಸಿಗುತ್ತದೆ ಎನ್ನುವುದರ ಆಧಾರದ ಮೇಲೆ ಜೆಡಿಎಸ್ ಪಕ್ಷ ಟಿಕೆಟ್ ಮರುಪರಾಮರ್ಶೆಗೆ ಒಳಪಡುವ ಸಾಧ್ಯತೆ ಇದೆ.
ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ ವಿರುದ್ಧ ಅಖಾಡಕ್ಕೆ ಇಳಿಯೋರು ಯಾರು?
ಕೆಆರ್ಪಿಪಿ ಪಕ್ಷವೂ ತನ್ನ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲು ಮುಂದಾಗಿದೆ. ಈಗಾಗಲೇ ಸಿ.ಎಂ.ಹಿರೇಮಠ ಹೆಸರು ಕೇಳಿ ಬರುತ್ತಿದೆ. ಅವರು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಕೆಆರ್ಪಿಪಿ ಪಕ್ಷ ಲಕ್ ಮೂಲಕ ಅಲ್ಪಸಂಖ್ಯಾತ ಸಮುದಾಯದವರೊಬ್ಬರನ್ನು ಅಖಾಡಕ್ಕೆ ಇಳಿಸಲು ಚಿಂತನೆ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.