ಬೆಂ-ಮೈ ದಶಪಥ ಅಡಿಗಲ್ಲು ನಮ್ಮದೆ, ಉದ್ಘಾಟಿಸುತ್ತಿರೋದು ನಾವೇ: ಸಿಎಂ ಬೊಮ್ಮಾಯಿ

By Kannadaprabha NewsFirst Published Mar 13, 2023, 10:26 AM IST
Highlights

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಅಡಿಗಲ್ಲು ಹಾಕಿದ್ದು ನಾವೇ. ಉದ್ಘಾಟನೆ ಮಾಡುತ್ತಿರುವುದೂ ನಾವೇ. 2019ರಲ್ಲಿ ಶಂಕುಸ್ಥಾಪನೆಯಾಗಿ ಈಗ 2023ರಲ್ಲಿ ಉದ್ಘಾಟನೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಡ್ಯ (ಮಾ.13): ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಅಡಿಗಲ್ಲು ಹಾಕಿದ್ದು ನಾವೇ. ಉದ್ಘಾಟನೆ ಮಾಡುತ್ತಿರುವುದೂ ನಾವೇ. 2019ರಲ್ಲಿ ಶಂಕುಸ್ಥಾಪನೆಯಾಗಿ ಈಗ 2023ರಲ್ಲಿ ಉದ್ಘಾಟನೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಭಾನುವಾರ ನಡೆದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಅವರು ಪ್ರಧಾನಿಯಾಗಿದ್ದ 2015ರಲ್ಲಿ ಹೆದ್ದಾರಿಯ ಡಿಪಿಆರ್‌ ತಯಾರಾಯಿತು. 2016ಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆಯಾಯಿತು. ಅಂದಾಜು ವೆಚ್ಚ ಹೆಚ್ಚಾಗಿದ್ದರಿಂದ ಅದು ಮತ್ತೆ ಮೋದಿ ಅವರ ಬಳಿಗೆ ಹೋಯಿತು. ತಡ ಮಾಡದೆ ಮಂಜೂರಾತಿ ನೀಡಿದರು ಎಂದು ನೆನೆದರು.

ನಂ.1 ಜಿಲ್ಲೆ ಮಾಡುವೆವು: ನಾಲ್ಕು ವರ್ಷಗಳಿಂದ ಮಂಡ್ಯದ ಮೈಷುಗರ್‌ ಕಾರ್ಖಾನೆ ಸ್ಥಗಿತಗೊಂಡಿತ್ತು. ಅದನ್ನು ಪುನಾರಂಭಿಸಿದ್ದು ನಾವೇ. ಕಳೆದ ವರ್ಷ 50 ಕೋಟಿ ರು. ನೀಡಲಾಗಿದ್ದು, ಈ ಸಾಲಿನಿಂದ ಎಥೆನಾಲ್‌ ಘಟಕವನ್ನು ಆರಂಭಿಸಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆಯ ವಿತರಣಾ ನಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ನೀರಾವರಿ ಯೋಜನೆಗಳ ಬೇಡಿಕೆಗಳನ್ನು ಈಡೇರಿಸಿದೆ ಎಂದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಮೇಲೆ ಭರವಸೆ ಇಟ್ಟು ಆಶೀರ್ವದಿಸಿದರೆ ಮಂಡ್ಯಜಿಲ್ಲೆಯನ್ನು ರಾಷ್ಟ್ರದ ನಂ.1 ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದು ಭರವಸೆಯಿತ್ತರು.

ಬೆಂ-ಮೈ ಎಕ್ಸ್‌ಪ್ರೆಸ್‌ವೇಯಿಂದ ಕರ್ನಾ​ಟ​ಕದ ಅಭಿ​ವೃ​ದ್ಧಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಮೋದಿ, ಬೊಮ್ಮಾಯಿ ಕಾರ್ಯ ಗುರುತಿಸಿ ಬಿಜೆಪಿಗೆ ಬೆಂಬಲ: ರಾಜ್ಯದ ಜನತೆ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರ್ಯ ಗುರುತಿಸಿ ಬಿಜೆಪಿ ಬೆಂಬಲಿಸುತ್ತಿರುವುದು ವಿಜಯ ಸಂಕಲ್ಪ ಯಾತ್ರೆಯ ವೇಳೆ ಕಂಡು ಬರುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 1ರಿಂದ ಆರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆ 100ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಸಂಚರಿಸಿದೆ ಎಂದರು. ಕಾಂಗ್ರೆಸ್‌ ಪಕ್ಷಕ್ಕೆ ಹೇಳಿಕೊಳ್ಳುವಂತಹ ನಾಯಕತ್ವ ಇಲ್ಲ, ಆಕ್ರಮಣಕಾರಿ ಇತಿಹಾಸವೇ ಭಾರತದ ಇತಿಹಾಸ ಎಂದು ಕಾಂಗ್ರೆಸ್‌ ಬಿಂಬಿಸುತ್ತಿದೆ. 

ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೆಲಸ ಕಾಂಗ್ರೆಸ್‌ ನೇತಾರ ರಾಹುಲ್‌ ಗಾಂಧಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸೋತರೆ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುವುದು, ಗೆದ್ದಾಗ ಜನರ ಆಶೀರ್ವಾದ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಲೇವಡಿ ಮಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿಕೊಡಬೇಕು. ರಾಜಕೀಯ ರಾಜಿಗೆ ಅವಕಾಶವಿಲ್ಲದಂತೆ ನಮಗೆ ಪೂರ್ಣ ಬಹುಮತ ಕೊಡಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಂದು ಸಮುದಾಯಕ್ಕೆ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದರು. 

ವೀರಶೈವ, ಲಿಂಗಾಯತ ಒಡೆಯುವ ಷಡ್ಯಂತ್ರ ಮಾಡಿದ್ದೇ ಕಾಂಗ್ರೆಸ್‌ ಪಕ್ಷ, ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಂ.ಬಿ.ಪಾಟೀಲರನ್ನು ವೈಯಕ್ತಿಕವಾಗಿ ಕೇಳಬೇಕು ಎಂದರು. ಮಾಡಾಳು ವಿರುಪಾಕ್ಷಪ್ಪ ಕೇಸ್‌ ಕಾಂಗ್ರೆಸ್‌ನಲ್ಲಿ ಆಗಿದ್ದರೆ ಕ್ಲೀನ್‌ ಚಿಟ್‌ ಲಭಿಸುತ್ತಿತ್ತು. ಲೋಕಾಯುಕ್ತಕ್ಕೆ ಬಾಗಿಲು ಹಾಕಿದ್ದು ಯಾಕೆ ಎಂದು ಸಿದ್ದರಾಮಯ್ಯ ಅವರನ್ನು ಕೇಳಬೇಕು. ಮಾಡಾಳು ವಿರುಪಾಕ್ಷಪ್ಪ ಪ್ರಕರಣ ಕುರಿತ ವಿಚಾರ ನಡೆಯುತ್ತಿದೆ. ಅದರ ಕುರಿತು ಕಾನೂನು ಮತ್ತು ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನವಲಗುಂದ ಬಂಡಾಯ: ಶಂಕರ ಪಾಟೀಲ ಮುನೇನಕೊಪ್ಪ ವಿರುದ್ಧ ಸ್ಪರ್ಧೆಗೆ 8 ಕಾಂಗ್ರೆಸಿಗರು ಸಿದ್ಧ!

ಕೊಪ್ಪಳ ಜಿಲ್ಲೆಯಲ್ಲಿ ಏತ ನೀರಾವರಿ, ಸಂಸದ ಸಂಗಣ್ಣ ಕರಡಿ ಅವರ ಶ್ರಮದಿಂದ ಕ್ಲಸ್ಟರ್‌ ಪ್ರಾರಂಭ ಆಗುತ್ತಿದೆ. ಇದರಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ನೌಕರಿ ಸಿಗುತ್ತದೆ. ಕೊಪ್ಪಳದಲ್ಲಿ ಎರಡು ಎಂಜಿನೀಯರ್‌ ಕಾಲೇಜು ಪ್ರಾರಂಭಕ್ಕೆ ಸರ್ಕಾರ ಮುಂದಾಗಿದೆ ಎಂದರು. ನಮ್ಮ ಪಕ್ಷವು ನೀತಿ, ನೇತೃತ್ವ ಮತ್ತು ನಿಯತ್ತು ಈ ಮೂರು ಅಂಶಗಳ ಆಧಾರದ ಮೇಲೆ ನಿಂತಿದೆ. ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ನೀತಿ ಕುಟುಂಬ ನೀತಿಯ ಮೇಲೆ ನಿಂತಿವೆ. ನಮ್ಮ ಪಕ್ಷದ ನೀತಿ ದೇಶದ ರಕ್ಷಣೆಗೆ ಮೊದಲ ಆದ್ಯತೆ. ಕೇಂದ್ರದಿಂದ ಕಳುಹಿಸುವ ಒಂದು ರೂಪಾಯಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತದೆ. ನಮ್ಮ ಸೈನ್ಯಕ್ಕೆ ಬಲ ತುಂಬೋದು ಹಾಗೂ ದೇಶದ ರಕ್ಷಣೆ ಮಾಡೋದು ನಮ್ಮ ಧ್ಯೇಯವಾಗಿದೆ ಎಂದರು.

click me!