ಚುನಾವಣೆಯಲ್ಲಿ ನಮಗೆ ಸೋಲೇ ಹೊರತು ರಾಷ್ಟ್ರೀಯ ಸಿದ್ಧಾಂತದ ಸೋಲಲ್ಲ: ಸಿ.ಟಿ.ರವಿ

By Kannadaprabha NewsFirst Published Jul 14, 2024, 4:24 PM IST
Highlights

ಸೋಲೆಂಬುದು ನಮಗೆ ಪಾಠ ಕಲಿಸುವ ಜೊತೆಗೆ ನಮ್ಮವರು ಯಾರೆಂಬುದನ್ನೂ ಸಹ ತಿಳಿಸುತ್ತದೆ. ನಮಗೆ ಚುನಾವಣೆಯಲ್ಲಿ ಸೋಲಾಗಿದೆಯೇ ಹೊರತು ಇದು ಜೀವನದ ಸೋಲಂತೂ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. 
 

ದಾವಣಗೆರೆ (ಜು.14): ಸೋಲೆಂಬುದು ನಮಗೆ ಪಾಠ ಕಲಿಸುವ ಜೊತೆಗೆ ನಮ್ಮವರು ಯಾರೆಂಬುದನ್ನೂ ಸಹ ತಿಳಿಸುತ್ತದೆ. ನಮಗೆ ಚುನಾವಣೆಯಲ್ಲಿ ಸೋಲಾಗಿದೆಯೇ ಹೊರತು ಇದು ಜೀವನದ ಸೋಲಂತೂ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಜಿ.ಎಂ.ಸಿದ್ದೇಶ್ವರ ಅಭಿಮಾನಿ ಬಳಗದಿಂದ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರರ 72ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಒಂದು ಗುರಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇವೆ ಎಂದರು.

ನಮ್ಮದು ರಾಷ್ಟ್ರೀಯ ಸಿದ್ಧಾಂತವಾಗಿದೆ. ಅದಕ್ಕೆ ಎಂದಿಗೂ ಸೋಲೆಂಬುದೇ ಇಲ್ಲ. ನಾವು ಚುನಾವಣೆಯಲ್ಲಷ್ಟೇ ಸೋತಿರಬಹುದು. ಆದರೆ, ಇದು ಚುನಾವಣೆಯ ಸೋಲೇ ಹೊರತು, ಸಿದ್ಧಾಂತದ ಸೋಲಲ್ಲ. ರಾಷ್ಟ್ರ ನಿಷ್ಟೆ ಹಾಗೂ ಪಕ್ಷ ನಿಷ್ಟೆಗೆ ಚ್ಯುತಿ ಬಾರದಂತೆ ಇರೋಣ ಎಂದು ಅವರು ತಿಳಿಸಿದರು. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಕಾಂಗ್ರೆಸ್ ಎಂಬ ಕಸವನ್ನು ದೇಶದಿಂದ ಗುಡಿಸಿ ಹಾಕುವುದು ಕಷ್ಟವೇನಲ್ಲ. ಗಾಯತ್ರಿ ಸಿದ್ದೇಶ್ವರರ ಸೋಲಿಗೆ ನಾವ್ಯಾರೂ ಎದೆಗುಂದಬಾರದು. ಜಿ.ಎಂ.ಸಿದ್ದೇಶ್ವರ್ ಸಹ ಈ ಸೋಲಿಗೆ ಕುಗ್ಗಬಾರದು. ವಿರೋಧಿಗಳಿಗೆ ಸೋಲಬಾರದು. ನಮ್ಮ ಕೆಲಸವನ್ನು ನಾವು ಮಾಡೋಣ. 

Latest Videos

ಗೂಂಡಾ ವರ್ತನೆ, ಟಾರ್ಗೆಟ್ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ

ನಮ್ಮನ್ನು ದ್ವೇಷ ಮಾಡುವವರನ್ನು ನಾವೂ ದ್ವೇಷ ಮಾಡಬಾರದು. ನಾವು ಶಾಂತಿಯಿಂದ ಇದ್ದರೆ ಕಾಲವೇ ಎಲ್ಲವನ್ನೂ ನಿರ್ಣಯ ಮಾಡುತ್ತದೆ ಎಂದು ಅವರು ಹೇಳಿದರು. ಶಾಸಕ, ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರರದ್ದು ನೇರ ಮತ್ತು ನಿಷ್ಟುರ ಮಾತು. ಹಾಗಾಗಿ ಕೆಲವರಿಗೆ ನೋವಾಗಬಹುದು. ಆದರೂ, ಸಿದ್ದೇಶ್ವರರ ಮನಸ್ಸು ನಿಷ್ಕಲ್ಮಷವಾದುದು. ಒಳ್ಳೆಯ ಮನಸ್ಸು ಇರುವವರಿಗೆ ದೇವರು ಖಂಡಿತಾ ಒಳ್ಳೆಯದನ್ನೇ ಮಾಡುತ್ತಾನೆ. ಸದ್ಯ ತಾತ್ಕಾಲಿಕವಾಗಿ ಹಿನ್ನಡೆಯಾಗಿರಬಹುದು. ಆದರೆ, ಮುಂದಿನ ಭವಿಷ್ಯವು ಉಜ್ವವಾಗಿರಲಿ ಎಂದು ಶುಭಾರೈಸಿದರು.

click me!