ಹೊರಗಿನ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರ: ಬಿಜೆಪಿಗೆ ಜಯ, ಕಾಂಗ್ರೆಸ್‌ಗೆ ಸೋಲು..!

By Kannadaprabha NewsFirst Published Jun 7, 2024, 10:55 PM IST
Highlights

ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ, ತುಮಕೂರಿನಲ್ಲಿ ವಿ.ಸೋಮಣ್ಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ. ಮಂಜುನಾಥ್‌ ಅವರು ಜಯಶಾಲಿಯಾಗಿದ್ದಾರೆ. ಗೆದ್ದ ಮೂವರೂ ಕೂಡ ಬೇರೆ ಜಿಲ್ಲೆಯವರೇ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಾಗಿದೆ.  
 

ಉಗಮ ಶ್ರೀನಿವಾಸ್

ತುಮಕೂರು(ಜೂ.07): ಮೂರು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಹೊರಗಿನರೇ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಕುಣಿಗಲ್ ಬೆಂಗಳೂರು ಗ್ರಾಮಾಂತರಕ್ಕೆ, ಶಿರಾ, ಪಾವಗಡ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಉಳಿದ 8 ವಿಧಾನಸಭಾ ಕ್ಷೇತ್ರಗಳು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ

Latest Videos

ಗೋವಿಂದರಾಜನಗರದ ಶಾಸಕರಾಗಿದ್ದ ವಿ. ಸೋಮಣ್ಣ ಮೂಲತಃ ರಾಮನಗರ ಜಿಲ್ಲೆಯವರು. ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅನುಭವ ಹೊಂದಿದವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ನಿವೃತ್ತರಾಗಿದ್ದ ಜಿ.ಎಸ್. ಬಸವರಾಜು ಅವರ ಜಾಗಕ್ಕೆ ಹಲವಾರು ಮಂದಿ ಪ್ರಯತ್ನ ಪಟ್ಟರು. ಆದರೆ ಕೊನೆಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ವಿ. ಸೋಮಣ್ಣಗೆ ಮಣೆಹಾಕಿತು.

ಬೆಂಗ್ಳೂರು, ದೆಹಲಿಗಿಂತ ಕ್ಷೇತ್ರದ ಸಂಪರ್ಕದಲ್ಲಿದ್ದು ಜನ ಪರ ಕೆಲಸ ಮಾಡಿ: ನೂತನ ಸಂಸದರಿಗೆ ರಾಹುಲ್‌ ಗಾಂಧಿ ಸೂಚನೆ

ಈ ಬಾರಿ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 1,75,594 ಮತಗಳ ಅಂತರದಿಂದ ಜಯಶಾಲಿಯಾದರು. ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಸೋಮಣ್ಣ 720946 ಮತಗಳನ್ನು ಪಡೆದು 1,75,594 ಮತಗಳ ಅಂತರದಿಂದ ಕಾಂಗ್ರೆಸ್‌ನ ಮುದ್ದಹನುಮೇಗೌಡರನ್ನು ಪರಾಭವಗೊಳಿಸಿದರು. ಮುದ್ದಹನುಮೇಗೌಡರು 54,5352 ಮತಗಳನ್ನು ಪಡೆದರು. ಕಳೆದ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಜಯಶಾಲಿಯಾಗಿದ್ದರು.

ಇನ್ನು ಶಿರಾ, ಪಾವಗಡ ಕ್ಷೇತ್ರವನ್ನು ಹಂಚಿಕೊಂಡಿರುವ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದವರು ಹೊರಗಿನವರು. ಮೂಲತಃ ವಿಜಯಪುರದವರಾದ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಹೈಕಮಾಂಡ್ 2019ರ ಲೋಕಸಭೆಯಲ್ಲಿ ಜಯಶಾಲಿಯಾಗಿ ಕೇಂದ್ರ ಸಚಿವರೂ ಆಗಿದ್ದ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಿ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿತ್ತು. ಇವರು ಕೂಡ ಹೊರಗಿನವರು ಎಂದು ಪ್ರಚಾರ ಮಾಡಲಾಗಿತ್ತು. ಕಾಂಗ್ರೆಸ್‌ನಿಂದ ಮಾಜಿ ಸಂಸದ ಚಂದ್ರಪ್ಪ ಅವರು ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಗೋವಿಂದ ಕಾರಜೋಳ ಒಟ್ಟು 6,84,890, ಪಡೆದು 48,121 ಮತಗಳ ಅಂತರದಿಂದ ಗೆದ್ದರು. ಚಂದ್ರಪ್ಪ 6,36,769 ಮತ ಪಡೆದರು.

ಲೋಕಸಭಾ ಫಲಿತಾಂಶ ಬಳಿಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಸಚಿವ ಜಾರಕಿಹೊಳಿ ಹೇಳಿದ್ದಿಷ್ಟು

ಇನ್ನು ರಾಜ್ಯದ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಕೂಡ ಹೊರಗಿನವರು ಗೆದ್ದಿದ್ದಾರೆ. ಜಯದೇವ ಆಸ್ಪತ್ರೆಯ ಮುಖ್ಯಸ್ಥರಾಗಿದ್ದ ಡಾ. ಮಂಜುನಾಥಗೆ ಬಿಜೆಪಿ ಟಿಕೆಟ್ ನೀಡಿತ್ತು. ಡಾ. ಮಂಜುನಾಥ್ ಕೂಡ ಹಾಸನ ಜಿಲ್ಲೆಯವರು. ಕಾಂಗ್ರೆಸ್‌ನಿಂದ ಡಿಸಿಎಂ ಡಿ.ಕೆ. ಶಿವಕುಮಾರ ಸಹೋದರ ಡಿ.ಕೆ.ಸುರೇಶ ಸ್ಪರ್ಧಿಸಿದ್ದರು. ಜಿದ್ದಾ ಜಿದ್ದಿನ ಹಣಾಹಣಿಯಲ್ಲಿ ಡಾ. ಮಂಜುನಾಥ ಜಯಗಳಿಸಿ ಸಂಸತ್ ಪ್ರವೇಶಿಸಿದ್ದಾರೆ.

ಚುನಾವಣೆಯಲ್ಲಿ ಡಾ. ಮಂಜುನಾಥ್ 10,79,002 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಡಿ.ಕೆ ಸುರೇಶ 8,09,355 ಮತ ಪಡೆದರು. 2,69,647 ಮತಗಳ ಅಂತರದಿಂದ ಡಾ. ಮಂಜುನಾಥ ಜಯಗಳಿಸಿದ್ದಾರೆ. ಮೂರು ಲೋಕಸಭೆಯಲ್ಲಿ ಕಳೆದ ಬಾರಿ ಎರಡು ಬಿಜೆಪಿ ಮತ್ತು ಒಂದು ಕಾಂಗ್ರೆಸ್ ಜಯಗಳಿಸಿತ್ತು. ಆದರೆ ಈ ಬಾರಿ ಎಲ್ಲಾ 3 ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಜಯಗಳಿಸಿದಂತಾಯಿತು.

click me!