
ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ದೊಡ್ಡ ಸಂಚಲನ ಸೃಷ್ಟಿಯಾಗಿದೆ. ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತ ಗೆಳತಿ ವಿ.ಕೆ. ಶಶಿಕಲಾ ಅವರು ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಜಯಲಲಿತಾ ಅವರ ಜನ್ಮದಿನವಾದ ಇಂದು (ಫೆಬ್ರವರಿ 24) ರಾಮನಾಥಪುರಂನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಶಶಿಕಲಾ ಈ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ತಮ್ಮ ರಾಜಕೀಯ ಗುರು ಮತ್ತು ಆಪ್ತೆ ಜಯಲಲಿತಾ ಅವರ ಜನ್ಮದಿನವನ್ನೇ ಈ ಘೋಷಣೆಗೆ ಆಯ್ದುಕೊಳ್ಳುವ ಮೂಲಕ ಶಶಿಕಲಾ ದೊಡ್ಡ ಸಂದೇಶ ರವಾನಿಸಿದ್ದಾರೆ. ಪಕ್ಷದ ಹೆಸರನ್ನು ಸದ್ಯಕ್ಕೆ ಗೌಪ್ಯವಾಗಿರಿಸಲಾಗಿದ್ದು, ಶೀಘ್ರದಲ್ಲೇ ಲೋಗೋ ಮತ್ತು ಹೆಸರನ್ನು ಅಧಿಕೃತವಾಗಿ ನೋಂದಣಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇನ್ನು ಪಕ್ಷದ ಧ್ವಜ ಹೇಗಿರಲಿದೆ ಎಂಬುದನ್ನು ಅವರು ಬಹಿರಂಗಪಡಿಸಿದ್ದು, ಅದರಲ್ಲಿ ದ್ರಾವಿಡ ರಾಜಕಾರಣದ ದಿಗ್ಗಜರಾದ ಅಣ್ಣಾದೊರೈ, ಎಂ.ಜಿ. ರಾಮಚಂದ್ರನ್ (ಎಂಜಿಆರ್) ಮತ್ತು ಜಯಲಲಿತಾ ಅವರ ಭಾವಚಿತ್ರಗಳು ಇರಲಿವೆ. ಈ ಮೂಲಕ ತಾನೇ ಜಯಲಲಿತಾ ಅವರ ಅಸಲಿ ವಾರಸುದಾರಿ ಎಂಬ ಪರೋಕ್ಷ ಸಂದೇಶವನ್ನು ಅವರು ಎಐಎಡಿಎಂಕೆ ನಾಯಕರಿಗೆ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಎಐಎಡಿಎಂಕೆ (AIADMK) ಪಕ್ಷಕ್ಕೆ ಮರಳಲು ಶಶಿಕಲಾ ಹರಸಾಹಸ ಪಟ್ಟಿದ್ದರು. ಆದರೆ ಪಳನಿಸ್ವಾಮಿ ನೇತೃತ್ವದ ಬಣ ಶಶಿಕಲಾ ಅವರಿಗೆ ಪಕ್ಷದೊಳಗೆ ಪ್ರವೇಶ ನೀಡಲು ಸತತವಾಗಿ ನಿರಾಕರಿಸುತ್ತಲೇ ಬಂದಿತ್ತು. ಪಕ್ಷದ ಮೇಲೆ ಹಿಡಿತ ಸಾಧಿಸುವ ಎಲ್ಲಾ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಶಶಿಕಲಾ ತಮ್ಮದೇ ಹಾದಿಯನ್ನು ಕಂಡುಕೊಂಡಿದ್ದಾರೆ. ಎಐಎಡಿಎಂಕೆಯನ್ನು ಹತ್ತಿಕ್ಕಲು ಅಥವಾ ಅದರ ಮತಬ್ಯಾಂಕ್ ಮೇಲೆ ಕನ್ನ ಹಾಕಲು ಶಶಿಕಲಾ ಈ ಹೊಸ ಪಕ್ಷವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಶಶಿಕಲಾ ನೇತೃತ್ವದ ಈ ಹೊಸ ಪಕ್ಷವು ಕನಿಷ್ಠ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ವಿಶೇಷವಾಗಿ ದಕ್ಷಿಣ ತಮಿಳುನಾಡಿನ ಥೇವರ್ ಸಮುದಾಯದ ಪ್ರಭಾವವಿರುವ ಕ್ಷೇತ್ರಗಳಲ್ಲಿ ಶಶಿಕಲಾ ಹೆಚ್ಚಿನ ಒತ್ತು ನೀಡಲಿದ್ದಾರೆ. ಇದು ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ಪಕ್ಷಗಳಿಗೆ ನಡುಕ ಹುಟ್ಟಿಸುವ ಸಾಧ್ಯತೆಯಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ ಅವರಿಗೆ ಚುನಾವಣಾ ಆಯೋಗದ ನಿಯಮದಂತೆ 2027ರ ಜನವರಿ 27ರವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೂ, ಪಕ್ಷದ ಅಧ್ಯಕ್ಷರಾಗಿ ಅವರು ಸಕ್ರಿಯವಾಗಿ ಕೆಲಸ ಮಾಡಬಹುದು ಮತ್ತು ಅಭ್ಯರ್ಥಿಗಳ ಪರ ಪ್ರಚಾರ ನಡೆಸಬಹುದು. ಚುನಾವಣೆಯಲ್ಲಿ ತಾನು ಸ್ವತಃ ನಿಲ್ಲಲು ಸಾಧ್ಯವಾಗದಿದ್ದರೂ, ತನ್ನ ಬೆಂಬಲಿಗರನ್ನು ಗೆಲ್ಲಿಸುವ ಮೂಲಕ ಕಿಂಗ್ ಮೇಕರ್ ಆಗುವುದು ಶಶಿಕಲಾ ಅವರ ಪ್ಲಾನ್ ಆಗಿದೆ.
ರಾಮನಾಥಪುರಂನಲ್ಲಿ ಜಮಾಯಿಸಿದ್ದ ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ಶಶಿಕಲಾ ಅವರು ಹೊಸ ಪಕ್ಷ ಘೋಷಿಸುವ ಮೂಲಕ ತಮಿಳುನಾಡಿನ ದ್ರಾವಿಡ ರಾಜಕಾರಣದ ಸಮೀಕರಣವನ್ನು ಬದಲಿಸಲು ಹೊರಟಿದ್ದಾರೆ. ಈ ಬೆಳವಣಿಗೆಯು ಮುಂಬರುವ ದಿನಗಳಲ್ಲಿ ತಮಿಳುನಾಡಿನಲ್ಲಿ ಎಂತಹ ಬದಲಾವಣೆ ತರಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.