ವರುಣಾ ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಗೇಟ್ ಪಾಸ್ ಕೊಟ್ಟ ಗ್ರಾಮಸ್ಥರು!

By Gowthami KFirst Published Apr 29, 2023, 4:12 PM IST
Highlights

ವರುಣಾ ಕ್ಷೇತ್ರ ಸೂಕ್ಷ್ಮ ಕಣವಾಗಿ ಮಾರ್ಪಾಡಾಗುತ್ತಿದೆ. ಸಂವಿಧಾನ ಬದಲಾಯಿಸುವವರು ನಮ್ಮೂರಿಗೆ ಬರಬೇಡಿ ಎಂದು ಹೇಳಿರುವ ಗ್ರಾಮಸ್ಥರು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ.

ಮೈಸೂರು (ಏ.29): ಚುನಾವಣಾ ಕಣ ರಂಗೇರಿದೆ. ಈ ನಡುವೆ ವರುಣಾ ಕ್ಷೇತ್ರ ಸೂಕ್ಷ್ಮ ಕಣವಾಗಿ ಮಾರ್ಪಾಡಾಗುತ್ತಿದೆ. ಸಂವಿಧಾನ ಬದಲಾಯಿಸುವವರು ನಮ್ಮೂರಿಗೆ ಬರಬೇಡಿ ಎಂದು ಹೇಳಿರುವ ಗ್ರಾಮಸ್ಥರು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ. ಸಂವಿಧಾನ ಬದಲಿಸುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ನಮ್ಮೂರಿಗೆ ನೋ ಎಂಟ್ರಿ ಎಂದಿದ್ದಾರೆ. ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಬಿಳುಗಲಿ ಗ್ರಾಮದಲ್ಲಿ ಈ  ಘಟನೆ ನಡೆದಿದೆ. 

ಬಿಳುಗಲಿ ಗ್ರಾಮದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ಯುವಕರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಜಯಘೋಷ ಕೂಗಿದರು. ಬಳಿಕ ಸಂವಿಧಾನ ಚೇಂಜ್ ಮಾಡ್ತೀವಿ ಅಂದ್ರೆ ಸುಮ್ಮನಿರಲ್ಲ‌. ಸಂವಿಧಾನ ಬರೆದು ಕಾನೂನನ್ನು ಬರೆದುಕೊಟ್ಟ ಅಂಬೇಡ್ಕರ್ ವಿರೋಧಿಗಳಿಗೆ ನಮ್ಮೂರಿಗೆ ಬರಲು ನೈತಿಕತೆ ಇಲ್ಲ. ಸಂವಿಧಾನದ ಅಡಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಇಂತಹ ಸಂವಿಧಾನ ವಿರೋಧಿ ಬಿಜೆಪಿ ಪಕ್ಷಕ್ಕೆ ನಾವು ಮತ ಹಾಕಬೇಕಾ? ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯರವರಾದರೂ ಗೆಲ್ಲಲಿ ಸೋಮಣ್ಣನವರಾದರೂ ಗೆಲ್ಲಲಿ ಆದರೆ ಸಂವಿಧಾನವನ್ನು ಚೇಂಜ್ ಮಾಡುತ್ತೇನೆ ಎನ್ನುತ್ತಾರೆ. ಸಂವಿಧಾನ ಚೇಂಜ್ ಮಾಡಲು ಇವರು ಯಾರು ಎಂದು ಗ್ರಾಮದ ಗ್ರಾಮಸ್ಥರು ಮತ್ತು ಯುವಕರು ಪ್ರಶ್ನೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು ಮತ್ತು ಪೊಲೀಸರು ಭೇಟಿ ನೀಡಿ ಮನವೊಲಿಕೆ ಮಾಡಿದರೂ ಯುವಕರು ಮತ್ತು ಗ್ರಾಮಸ್ಥರು‌ ಪಟ್ಟು ಬಿಡಲಿಲ್ಲ. ಈ ನಡುವೆ ಪೊಲೀಸರು ಮತ್ತು ಯುವಕರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಷಯ ತಿಳಿದ ಅಭ್ಯರ್ಥಿ ವಿ ಸೋಮಣ್ಣ ಗ್ರಾಮಕ್ಕೆ ಬರದೆ ಹೊರಟು ಹೋದರು.

Latest Videos

ವರುಣಾದಲ್ಲಿ ಪ್ರಚಾರಕ್ಕೆ ಅಡ್ಡಿ ವಿಚಾರವಾಗಿ ಚಾಮರಾಜನಗರದಲ್ಲಿ ಮಾತನಾಡಿದ ಸೋಮಣ್ಣ, ಒಂದು ದಿನ ಅಲ್ಲ, ದಿನವೂ ಪ್ರಚಾರಕ್ಕೆ ಅಡ್ಡಿಪಡಿಸ್ತಿದ್ದಾರೆ. ಅವರು ಹತಾಶರಾಗಿದ್ದಾರೆ. ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ? ಪ್ರತಾಪ್ ಸಿಂಹರಿಂದಲೇ ಗಲಾಟೆ ಯಾಗ್ತಿದೆ ಎನ್ನುವ ವಿಚಾರವಾಗಿ  ಮಾತನಾಡಿದ ಸೋಮಣ್ಣ, ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನಂಗೆ ಸಹೋದರ ಸಮಾನ,ಪಕ್ಷದ ಭವಿಷ್ಯದ ನಾಯಕ. ವಾಸ್ತವಾಂಶ ಇರೋದನ್ನು ಮಾತಾಡ್ತಾರೆ.ನಿಮ್ಮವರೇ ಜಗಳ ಮಾಡಿಸ್ತಿರೋದು, ಅವರು ಬಿಟ್ರೆ ಬೇರೆ ಯಾರೂ ಇಲ್ಲ. ನ್ಯಾಯಸಮ್ಮತ ಚುನಾವಣೆ ನಡೆಯಲಿ,10 ನೇ ತಾರೀಖು ತೀರ್ಮಾನವಾಗಲಿ ಎಂದಿದ್ದಾರೆ.

ಕುಸಿದು ಬಿದ್ದ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ! ಬಿಸಿಲಿನ ತಾಪ ಲೆಕ್ಕಕ್ಕೇ ಇಲ್ಲ!

ವರುಣಾ ದಲ್ಲಿ ಗಲಾಟೆ ಮಾಡಿಸಿದ್ದು ಸೋಮಣ್ಣ, ಸಿದ್ದು ಹೇಳಿಕೆಗೆ ಸೋಮಣ್ಣ ತಿರುಗೇಟು:
ವರುಣಾ ದಲ್ಲಿ ಗಲಾಟೆ ಮಾಡಿಸಿದ್ದು ಸೋಮಣ್ಣ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ವಿರುದ್ಧ ಚಾಮರಾಜನಗರದ ಉಗನೇಯ್ಯನ ಹುಂಡಿಯಲ್ಲಿ‌ ಸೋಮಣ್ಣ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಮತ್ತೇ ಯಾಕೆ ಈ ರೀತಿ ಮಾಡಿ ಚಿಕ್ಕವರಾಗ್ತಿದ್ದಾರೆ ಗೊತ್ತಿಲ್ಲ. ನಾವೇನೂ ಕಾಲು ಕರೆದುಕೊಂಡು ಹೋಗಿರಲಿಲ್ಲ. ನಾವು ಪ್ರಚಾರಕ್ಕೆ ಹೋದ್ರೆ ರಸ್ತೆಗೆ ಅಡ್ಡಲಾಗಿ ನೊಗ ಇಡ್ತಾರೆ. ಆಚೆಗೆ ಹೋಗಬಾರದು ಅಂತಾರೆ. ಒಂದೇ ವರ್ಗದ ಜನ. ನಮಗೆ ಹುಚ್ಚು ಹಿಡಿದಿದ್ದೀಯಾ, ಹತಾಶರಾಗಿ ಈ ರೀತಿ ಮಾತಾಡ್ತಿದ್ದಾರೆ.ನೀವೂ  ಗೆಲ್ಲೊದಾದ್ರೆ ಇದೆಲ್ಲಾ ನಿಮಗೆ ಯಾಕೆ ಬೇಕು. ಪೊಲೀಸ್ ನವರಿಗೆ ಹಿಡಿದು ಕೊಟ್ಟರು, ಪೊಲೀಸರು ಬಿಟ್ಟು ಕಳಿಸ್ತಾರೆ. ಅವರ ಮೇಲೆ 326 ರ ಅಡಿ ಪ್ರಕರಣ ದಾಖಲಿಸಬೇಕು. ಏನಾದ್ರೂ ಪಿತೂರಿ ಮಾಡಲಿ, ಭಗವಂತ, ಚಾಮುಂಡಿ ತಾಯಿ ಇದ್ದಾರೆ, ಅಲ್ಲದೇ ಕ್ಷೇತ್ರದ ಜನರಿದ್ದಾರೆ. ನನ್ನ ಸೇವೆ ಬೇಕು ಅಂದ್ರೆ ಕ್ಷೇತ್ರದ ಜನರು ಸಹಾಯ ಮಾಡ್ತಾರೆ. ಮಾಡ್ದೆ ಇದ್ರೆ ನಂಗೆನೂ ಬೇಜಾರು ಇಲ್ಲ ಎಂದಿದ್ದಾರೆ.

ಡಾ‌.ಜಿ.ಪರಮೇಶ್ವರ್ ಮೇಲೆ ಕಲ್ಲು ಎಸೆತ ಡ್ರಾಮಾ: ಕುಮಾರಸ್ವಾಮಿ ವ್ಯಂಗ್ಯ!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!