
ನವದೆಹಲಿ(ಆ.8): ಸಂಸತ್ತಿನ ಸದಸ್ಯರು ಸೋಮವಾರ ರಾಜ್ಯಸಭಾ ಚೇರ್ಮನ್ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಬೀಳ್ಕೊಡುಗೆ ನೀಡಿದರು. ಅವರ ಅಧಿಕಾರವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ. ಸದನದಲ್ಲಿ ಉಪರಾಷ್ಟ್ರಪತಿಗೆ ಬೀಳ್ಕೊಡುವ ವೇಳೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡರೇಕ್ ಓಬ್ರಿಯಾನ್ ಒಂದು ಕತೆ ಹೇಳಲು ಆರಂಭಿಸಿದರು. ಈ ಕತೆಯನ್ನು ಕೇಳುತ್ತಿದ್ದಂತೆಯೇ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ವೆಂಕಯ್ಯ ನಾಯ್ಡು ಭಾವುಕರಾದರು. ಒಂದು ಹಂತದಲ್ಲಿ ಕಣ್ಣೀರನ್ನು ತಡೆಯಲಾರದೆ ಅದನ್ನು ಕೈಯಿಂದ ಒರೆಸಿಕೊಂಡರು. ಯಾಕೆಂದರೆ, ಡರೆಕ್ ಒಬ್ರಿಯಾನ್ ಹೇಳಿದ್ದ ಕತೆ ಬೇರೆ ಯಾರದ್ದೋ ಆಗಿರಲಿಲ್ಲ. ಸ್ವತಂ ವೆಂಕಯ್ಯ ನಾಯ್ಡು ಅವರ ಬಾಲ್ಯದ ದಿನಗಳ ಕತೆಯಾಗಿತ್ತು. ಬಾಲ್ಯದಲ್ಲಿಯೇ ವೆಂಕಯ್ಯ ನಾಯ್ಡು ತಾಯಿಯನ್ನು ಕಳೆದುಕೊಂಡ ಕತೆಯವನ್ನು ಸದನದ ಮುಂದೆ ಹೇಳಿದ ಡರೇಕ್ ಓಬ್ರಿಯಾನ್, ನಿಮ್ ಬದುಕಿನ ಬಗ್ಗೆ ಆತ್ಮಚರಿತ್ರೆ ಬರೆಯಬೇಕು ಎಂದು ಕೇಳಿಕೊಂಡರು. ಅದು ದೇಶಕ್ಕೆ ಆಗತಾನೆ ಸ್ವಾತಂತ್ರ್ಯ ಸಿಕ್ಕ ಸಮಯ. ಆಂಧ್ರಪ್ರದೇಶದ ಅವಿಭಜಿತವಾಗಿತ್ತು. ಅಂದು ಶ್ರೀಮಂತಿಕೆಯನ್ನು ಹಣದಿಂದ ಗುರುತು ಮಾಡುತ್ತಿರಲಿಲ್ಲ. ನಿಮ್ಮಲ್ಲಿ ಎಷ್ಟು ಕೃಷಿಭೂಮಿ ಇದೆ ಹಾಗೂ ಈ ಭೂಮಿಯನ್ನು ಊಳಲು ಎಷ್ಟು ಸ್ವಂತದ ಎತ್ತುಗಳಿವೆ ಎನ್ನುವ ಆಧಾರದ ಮೇಲೆ ನಿರ್ಧಾರವಾಗುತ್ತಿತ್ತು. ಒಂದು ಜೋಡಿ ಎತ್ತುಗಳು ನಿಮ್ಮಲ್ಲಿದ್ದರೆ, ಒಂದು ಮಟ್ಟಿಗೆ ಧನಿಕರೆಂದೇ ಗುರುತಿಸಲಾಗುತ್ತಿತ್ತು.
ನಿಮ್ಮ ಜೀವನದ ದೊಡ್ಡ ನಷ್ಟದ ಕತೆ: 'ಆದರೆ, ಅಲ್ಲಿಂದ ಒಂದು ಕುಟುಂಬದ ಬಳಿ, ಒಂದಲ್ಲ ಎರಡಲ್ಲ. ಎಂಟು ಜೋಡಿ ಎತ್ತುಗಳಿದ್ದವು. ಹಾಗಾಗಿ ಅವರನ್ನು ಜಮೀನ್ದಾರರ ರೀತಿಯಲ್ಲೇ ಊರಿನಲ್ಲಿ ಕಾಣಲಾಗುತ್ತಿತ್ತು. ಪ್ರತಿದಿನ ಮನೆಯುವರ ಆರೈಕೆಯಲ್ಲಿಯೇ ಬೆಳೆಯತ್ತಿದ್ದ ಎತ್ತುಗಳ ಪೈಕಿ ಒಂದು ಎತ್ತು ಮನೆಯ ಮಹಿಳೆಯ ಮೇಲೆ ದಾಳಿ ಮಾಡಿಬಿಟ್ಟಿತು. ಕೈಯಲ್ಲಿ ಒಂದು ವರ್ಷದ ಮಗುವನ್ನು ಹಿಡಿದುಕೊಂಡಿದ್ದ ಮಹಿಳೆಯ ಹೊಟ್ಟೆಗೆ ಎತ್ತಿನ ಕೊಂಬುಗಳು ತಿವಿದಿದ್ದವು. ರಕ್ತಚೆಲ್ಲುತ್ತಿದ್ದರು. ಮಗುವನ್ನು ಆಕೆ ರಕ್ಷಣೆ ಮಾಡಿದ್ದಳು. ಈ ಗದ್ದಲ ಕೇಳಿ ಸ್ಥಳಕ್ಕೆ ಆಗಮಿಸಿದ ಮನೆಯೆ ಇತರರು, ಶೀಘ್ರವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಆಕೆ ಬದುಕುಳಿಯಲಿಲ್ಲ. ಅಮ್ಮನೊಂದಿಗೆ ಆಡಬೇಕಾದ ವಯಸ್ಸಿನಲ್ಲಿಯೇ ಒಂದು ವರ್ಷದ ಹುಡುಗ ತನ್ನ ತಾಯಿಯನ್ನು ಕಳೆದುಕೊಂಡಿದ್ದ. ಇದು ನನ್ನ ಕತೆಯಲ್ಲ. ನಿಮ್ಮ ಕತೆ ಸರ್. ನಿಮ್ಮ ಜೀವನದ ಆರಂಭಿಕ ದಿನಗಳ ಆದ ಬಹುದೊಡ್ಡ ನಷ್ಟದ ಕತೆ' ಎಂದು ಡರೇಕ್ ಒಬ್ರಿಯಾನ್ ಹೇಳುತ್ತಿದ್ದಂತೆ ವೆಂಕಯ್ಯ ನಾಯ್ಡು ಭಾವುಕರಾದರು.
ಉಪ ರಾಷ್ಟ್ರಪತಿ ಬೀಳ್ಕೊಡುಗೆ ಸಮಾರಂಭ, ವೆಂಕಯ್ಯ ನಾಯ್ಡು ಮಾತಿನ ಚಾಕಚಕತ್ಯೆ ಕೊಂಡಾಡಿದ ಮೋದಿ!
ಆತ್ಮ ಚರಿತ್ರೆ ಬರೆಯಿರಿ: ಕಣ್ಣೀರನ್ನು ಕಡೆದುಕೊಳ್ಳಲಾಗದೆ ಕೈಗಳ ಅಸರೆಯನ್ನೂ ಪಡೆದರು. ಇಡೀ ಸದನ ವೆಂಕಯ್ಯ ನಾಯ್ಡು ಅವರ ಬಾಲ್ಯದ ಕತೆ ಕೇಳೆ ಒಂದು ಕ್ಷಣ ಮೌನವಾಗಿತ್ತು. ಒಂದನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಕ್ಷಣಗಳನ್ನು ನೆನಪಿಸಿಕೊಂಡು ವೆಂಕಯ್ಯ ನಾಯ್ಡು ಅವರ ಕಣ್ಣಾಲಿಗಳು ಒದ್ದೆಯಾಗಿದ್ದು, ಸದನದ ಹೈಲೈಟ್ ಕ್ಷಣವಾಗಿತ್ತು. ಅಂದಿನ ಆ ಆರಂಭಿಕ ನಷ್ಟದ ಬಳಿಕ, ನಿಮಗೆ ಸಾಧ್ಯ ಅನಿಸಿದ್ದೆಲ್ಲವನ್ನೂ ನೀವು ಮಾಡಿದ್ದೀರಿ. ಅವುಗಳನ್ನು ನಾವು ಬರೀ ವಿಕಿಪೀಡಿಯಾ ಎಂಟ್ರಿಗಳಲ್ಲಿ ಮಾತ್ರವಲ್ಲ ನಿಮ್ಮ ಅತ್ಯಾಕರ್ಷಕ ಜೀವನದಲ್ಲಿಯೂ ಕಾಣುತ್ತೇವೆ. ನಾನು ನಿಮ್ಮಲ್ಲಿ ಹೇಳುವುದು ಒಂದೇ, ಸಾಧ್ಯವಾದರೆ ನಿಮ್ಮ ಆತ್ಮಚರಿತ್ರೆಯನ್ನು ಬರೆಯಿರಿ ಎಂದು ಹೇಳಿದರು.
ಶಿಕ್ಷಣವನ್ನ ಕೇಸರೀಕರಣ ಮಾಡೋದ್ರಲ್ಲಿ ತಪ್ಪೇನಿದೆ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನೆ!
ಆಪ್ ಸಂಸದ ರಾಘವ್ ಛಡ್ಡಾ ಕಾಲೆಳೆದ ವೆಂಕಯ್ಯ ನಾಯ್ಡು: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾಗೆ ಈ ವೇಳೆ ವೆಂಕಯ್ಯ ನಾಯ್ಡು ಕಾಲೆಳೆದ ಪ್ರಸಂಗ ಕೂಡ ನಡೆಯಿತು. ಮಾತನಾಡುವ ವೇಳೆ ರಾಘವ್, "ಸರ್, ಪ್ರತಿ ವ್ಯಕ್ತಿಯೂ ತನ್ನ ಮೊದಲ ದಿನದ ಶಾಲೆ, ಮೊದಲ ಟೀಚರ್ ಹಾಗೂ ಮೊದಲ ಪ್ರೀತಿಯನ್ನು ಖಂಡಿತಾ ನೆನಪಿಟ್ಟುಕೊಳ್ಳುತ್ತಾರೆ. ನಾನು ನಿಮ್ಮನ್ನು ನನ್ನ ಮೊದಲ ಚೇರ್ಮನ್ ಆಗಿ ನೆನಪಿಟ್ಟುಕೊಳ್ಳುತ್ತೇನೆ' ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಯ್ಯ ನಾಯ್ಡು, ರಾಘವ್, ಪ್ರೀತಿ ಮೊದಲನೆಯದು ಮಾತ್ರ.. ಅಲ್ಲವೇ? ನಿಮಗೇನಾದರೂ ಎರಡು ಅಥವಾ ಮೂರನೇ ಪ್ರೀತಿ ಅಂತೇನಾದರೂ ಇದೆಯೇ' ಎಂದು ಪ್ರಶ್ನಿಸಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.