ಪ್ರಧಾನಿ ಮೋದಿ ಯೋಜನೆಗೆ ಸಿದ್ದರಾಮಯ್ಯ ತಡೆ: ಶೋಭಾ ಕರಂದ್ಲಾಜೆ ಕಿಡಿ

By Govindaraj SFirst Published Nov 30, 2023, 4:23 PM IST
Highlights

ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸಲು ಸಿದ್ದರಾಮಯ್ಯನವರ ಸರಕಾರದ ಅವಶ್ಯಕತೆ ಇಲ್ಲ. ಜನರೇ ಎಲ್ಲ ಮನೆ - ಮನಗಳಿಗೆ ನರೇಂದ್ರ ಮೋದಿಯವರ ಸರಕಾರ, ಜನತೆಗಾಗಿ ರೂಪಿಸಿರುವ ಯೋಜನೆಗಳ ಮಾಹಿತಿಯನ್ನು ತಲುಪಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಮತ ವ್ಯಕ್ತಪಡಿಸಿದ್ದಾರೆ. 

ಉಡುಪಿ (ನ.29): ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸಲು ಸಿದ್ದರಾಮಯ್ಯನವರ ಸರಕಾರದ ಅವಶ್ಯಕತೆ ಇಲ್ಲ. ಜನರೇ ಎಲ್ಲ ಮನೆ - ಮನಗಳಿಗೆ ನರೇಂದ್ರ ಮೋದಿಯವರ ಸರಕಾರ, ಜನತೆಗಾಗಿ ರೂಪಿಸಿರುವ ಯೋಜನೆಗಳ ಮಾಹಿತಿಯನ್ನು ತಲುಪಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಮತ ವ್ಯಕ್ತಪಡಿಸಿದ್ದಾರೆ. ಅವರು ಗುರುವಾರ, ಅಂಬಲಪಾಡಿ ಪಂಚಾಯತ್ ನಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. 

ಕೇಂದ್ರ ಸರಕಾರದ ಅನುದಾನ ಪಡೆಯುವ ರಾಜ್ಯ ಸರಕಾರ, ಕೇಂದ್ರದಿಂದ ಜನತೆಗೆ ದೊರಕುವ ಸೌಲಭ್ಯಕ್ಕೆ ಸಿಎಂ ಸಿದ್ದರಾಮಯ್ಯನವರ ಸರಕಾರ ಸಾಥ್ ನೀಡುತ್ತಿಲ್ಲ. ಇದು ದುರದೃಷ್ಟಕರ. ನ.15 ರಂದು ಸಿಎಂ ಸಿದ್ದರಾಮಯ್ಯ, ರಾಜ್ಯದ ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಓ ಅವರಿಗೆ ಮೌಖಿಕವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸದಿರುವಂತೆ ಸೂಚಿಸಿದ್ದಾರೆ. ಹೀಗಾಗಿ ಯಾವುದೇ ಅಧಿಕಾರಿಗಳು ಭಾಗಿಯಾಗಿಲ್ಲ. ಇದು ಪಕ್ಷದ ಕಾರ್ಯಕ್ರಮವಲ್ಲ, ಕೇಂದ್ರ ಸರಕಾರದ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಈ ರೀತಿ ನಡೆದುಕೊಂಡಿರುವುದು ಅವರಿಗೆ ಜನರ ಬಗೆಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಖೇದ ವ್ಯಕ್ತಪಡಿಸಿದರು. 

ಪಾಲಿಕೆ ಸದಸ್ಯನ ಬಂಧನಕ್ಕೂ, ಕಾಂಗ್ರೆಸ್‌ಗೂ ಸಂಬಂಧವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

2047 ರ ವೇಳೆಗೆ ಭಾರತವನ್ನು ವಿಶ್ವದಲ್ಲಿ ನಂ.1 ಮಾಡಬೇಕು ಎಂಬ ಉದ್ದೇಶದ ಸಲುವಾಗಿ, ಕೇಂದ್ರ ಸರಕಾರ ರೂಪಿಸಿದ ಎಲ್ಲಾ ಯೋಜನೆಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೆ ಅರಿವು ಮೂಡಿಸುವುದು ಈ ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ. ಪ್ರಧಾನಿ ಮೋದಿಯವರ ಭಾಷಣವನ್ನು ಗ್ರಾಮೀಣ ಭಾಷೆಗೆ ಭಾಷಾಂತರಿಸಲಾಗಿದ್ದು, ಅರ್ಹರು ಇದುವರೆಗೆ ಫಲಾನುಭವಿಗಳಾಗದೇ ಇದ್ದಲ್ಲಿ, ಅಧಿಕಾರಿಗಳ ಮೂಲಕ ಅರ್ಜಿಯನ್ನು ಭರಿಸುವಂತೆ ಸಂಕಲ್ಪ ಯಾತ್ರೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಸರಕಾರದ ನೀರಸ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಲೀಡ್ ಬ್ಯಾಂಕ್ ನ ಸಹಕಾರದಿಂದ ಯಾತ್ರೆಯನ್ನು ಯಶಸ್ವಿಗೊಳಿಸಲು ಕ್ರಮವಹಿಸಲಾಗಿದೆ ಎಂದರು. 

ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಹಿಂದೆ ಬಜೆಟ್ ನಲ್ಲಿ ಘೋಷಣೆಯಾದ ಯೋಜನೆಗಳು ಶೇ 5 ರಷ್ಟು ಜನರಿಗೆ ತಲುಪುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರ ಸರಕಾರ, ಯೋಜನೆಯನ್ನು ರೂಪಿಸಿ, ಘೋಷಿಸುವ ಮುನ್ನವೇ ಫಲಾನುಭವಿಗಳ ಸಂಖ್ಯೆಯನ್ನು ಲೆಕ್ಕ ಹಾಕಿರುತ್ತದೆ. ಯೋಜನೆಯೂ ಘೋಷಣೆಯಾದ ಬಳಿಕ ಅರ್ಹರು ಯೋಜನೆಯ ಫಲವನ್ನು ಪಡೆಯದೇ ಇದ್ದಲ್ಲಿ, ಅವರನ್ನು ಸಂಪರ್ಕಿಸಿ ಯೋಜನೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. 

ಸಿದ್ದು, ಡಿಕೆಶಿಯನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ: ಸಂಸದ ಪ್ರತಾಪ್ ಸಿಂಹ

ವೇದಿಕೆಯಲ್ಲಿ ಕೆನರಾ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಪುರಂದರ, ಶಾಸಕರಾದ ಗುರುರಾಜ್ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಅಂಬಲಪಾಡಿ ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ, ಉಪಾಧ್ಯಕ್ಷೆ ಸುಜಾತ ಸುಧಾಕರ್ ಉಪಸ್ಥಿತರಿದ್ದರು.  ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಪಿ.ಎಮ್ ಪಿಂಜಾರ ಸ್ವಾಗತಿಸಿದರು. ಅಂಬಲಪಾಡಿ ಪಂಚಾಯತ್ ಪಿಡಿಓ ವಸಂತಿ ನಿರೂಪಿಸಿ, ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ನೆರೆದಿದ್ದ ಜನರು, ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಎಲ್.ಡಿ.ಪರದೆಯ ಮೂಲಕ ವೀಕ್ಷಿಸಿದರು.

click me!