ಪಾಲಿಕೆ ಸದಸ್ಯನ ಬಂಧನಕ್ಕೂ, ಕಾಂಗ್ರೆಸ್‌ಗೂ ಸಂಬಂಧವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

By Kannadaprabha NewsFirst Published Nov 30, 2023, 4:17 PM IST
Highlights

ಮೊಬೈಲ್‌ ಟವರ್‌ ವಿಚಾರವಾಗಿ ಪಾಲಿಕೆ ಸದಸ್ಯ ಮತ್ತು ನಿವಾಸಿಗಳ ನಡುವೆ ನಡೆದ ಗಲಾಟೆ ವೈಯಕ್ತಿಕವಾದದ್ದು. ಅದಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಬೆಳಗಾವಿ (ನ.29): ಪಾಲಿಕೆ ಸದಸ್ಯನ ಬಂಧನ ಪ್ರಕರಣ ವಿಚಾರದಲ್ಲಿ ಬಿಜೆಪಿ ವಿನಾಕಾರಣ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಮೊಬೈಲ್‌ ಟವರ್‌ ವಿಚಾರವಾಗಿ ಪಾಲಿಕೆ ಸದಸ್ಯ ಮತ್ತು ನಿವಾಸಿಗಳ ನಡುವೆ ನಡೆದ ಗಲಾಟೆ ವೈಯಕ್ತಿಕವಾದದ್ದು. ಅದಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗಳ ಮಾಡಲು ಅವರಿಗೆ ನಾವು ಹೇಳಿದ್ದೇವಾ? ಅದು ನಮ್ಮ ಜಗಳವಾ? ವೈಯಕ್ತಿಕ ಕಾರಣಕ್ಕಾಗಿ ಜಗಳಾಡಿದ್ದಾರೆ. ಅದನ್ನು ಕಾಂಗ್ರೆಸ್‌ ಮೇಲೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ಗೂ ಬಳಗಾವಿ ಪಾಲಿಕೆ ಸೂಪರ್ ಸೀಡ್‌ಗೂ ಯಾವುದೇ ಸಂಬಂಧ ಇಲ್ಲ ಎಂದರು.

ಬೆಳಗಾವಿಯಲ್ಲಿ ಬಿಹಾರ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಶಾಸಕ ಅಭಯ ಪಾಟೀಲ ಈ ಹಿಂದೆ ಗುಂಡಿ ಬಿದ್ದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಪೋಸ್ಟ್‌ ಹಾಕಿದ್ದಕ್ಕೆ ಅ‍ವರ ಮೇಲೆ ಅಟ್ರಾಸಿಟಿ ಕೇಸ್‌ ಹಾಕಿಸಿದ್ದ. ಆಗ ಬೆಳಗಾವಿ ರಾಜಸ್ಥಾನ ಆಗಿತ್ತಾ ಎಂದು ಪ್ರಶ್ನಿಸಿದರು. ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ ಜವಳಕರ ಮೇಲೆ ಹಲ್ಲೆಯಾಗಿದೆ ಎಂದು ಬಿಜೆಪಿ ಪಾಲಿಕೆ ಸದಸ್ಯರು ಟಿಳಕವಾಡಿ ಠಾಣೆ ಎದುರು ಪ್ರತಿಭಟನೆ ಮಾಡಿದರು. ರಮೇಶ ಪಾಟೀಲ ಪರವಾಗಿ ಎಂಇಎಸ್‌ನವರು ಪ್ರತಿಭಟನೆ ಮಾಡಿದರು. ಪಾಲಿಕೆ ಸದಸ್ಯ ಯಾರ ಕುಮ್ಮಕ್ಕಿನಿಂದ ಹಲ್ಲೆ ಮಾಡಿದ್ದಾನೆ. 

Latest Videos

ಬರ ನಿರ್ವಹಣೆಯಲ್ಲಿ ಲೋಪವಾದ್ರೆ ಅಧಿಕಾರಿಗಳೇ ಹೊಣೆ: ಸಚಿವ ಸತೀಶ್‌ ಜಾರಕಿಹೊಳಿ

ಬಿಜೆಪಿಯವರು ಪ್ರತಿಭಟನೆ ಮಾಡುವ ಮೂಲಕ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಇದರಲ್ಲಿ ರಾಜಕೀಯವೇನೂ ಇಲ್ಲ. ಈ ಕುರಿತು ಅಂತಿಮವಾಗಿ ನ್ಯಾಯಾಲಯ ತೀರ್ಪು ನೀಡುತ್ತದೆ ಎಂದು ಹೇಳಿದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೇ ಜವಳಕರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪೊಲೀಸರ ಬಳಿ ದಾಖಲೆಯಿದೆ. ತೆಲಂಗಾಣದಿಂದ ಶಾಸಕ ಅಭಯ ಪಾಟೀಲ ಬಂದ ಮೇಲೆ ಮತ್ತೊಂದು ಪತ್ರ ಕೊಡಿಸಿದ್ದಾನೆ. ಪೊಲೀಸರು ಡಿಸ್ಚಾರ್ಜ್ ಪತ್ರ ಪಡೆದುಕೊಂಡೇ ಜವಳಕರ ಅವರನ್ನು ಬಂಧಿಸಿದ್ದೇವೆ ಎನ್ನುತ್ತಾರೆ ಎಂದರು.

ಬಿಜೆಪಿ ಕಾರ್ಯಕರ್ತರಿಗೆ ಮಳಿಗೆ ಹಂಚಿಕೆ: ತಿನಿಸು ಕಟ್ಟೆ ಮಳಿಗೆಗಳು ಪಾಲಿಕೆಯ ಬಿಜೆಪಿ ಸದಸ್ಯರ ಪತ್ನಿಯರ ಹೆಸರಿನಲ್ಲಿರುವುದು ತನಿಖೆಯಾಗುತ್ತಿದೆ. ₹ 1 ಕೋಟಿ ಮೌಲ್ಯದ ಕಾರು ಹೊಂದಿರುವವರು, ಚಿನ್ನಾಭರಣ ಅಂಗಡಿ ಇದ್ದವರಿಗೂ ಮಳಿಗೆ ಹಂಚಿಕೆ ಮಾಡಲಾಗಿದೆ. ಬಡವರಿಗೆ, ನಿರ್ಗತಿಕರಿಗೆ ಅನ್ಯಾಯ ಮಾಡಲಾಗಿದೆ. ನಿಯಮ ಗಾಳಿಗೆ ತೂರಿ ಬಿಜೆಪಿ ಕಾರ್ಯಕರ್ತರಿಗೆ ಮಳಿಗೆ ಹಂಚಲಾಗಿದೆ. ಈ ಕುರಿತು ತನಿಖೆ ಪೂರ್ಣಗೊಂಡಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ: ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡುವುದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂಬ ಭೀಮಪ್ಪ ಗಡಾದ ಹೇಳಿಕೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡುವ ವಿಚಾರ ಸಂಬಂಧ ಕಾನೂನಿನಡಿಯಲ್ಲೇ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ. ಹಿಂದಿನ ಸರ್ಕಾರದಲ್ಲಿ ಸಂಪುಟ ದರ್ಜೆ ಕೊಡಲಾಗಿತ್ತು. ಈಗಲೂ ಕೂಡ ಸಿಎಂ‌ಗೆ ಎರಡು ಕಾರ್ಯದರ್ಶಿ ಹುದ್ದೆ ಕೊಡಲಾಗಿದೆ. ಎಲ್ಲ ಸರ್ಕಾರದಲ್ಲೂ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲೂ ಮಾಡುತ್ತಾರೆ ಎಂದ ಅವರು ,ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಬಿಟ್ಟ ವಿಚಾರ ಎಂದರು. ತಮ್ಮ ವಿದೇಶ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರವಾಸಕ್ಕೆ ಒಬ್ಬನೇ ಹೋಗಿದ್ದೇನೆ, ಒಬ್ಬನೇ ಬಂದಿದ್ದೇನೆ. ಅದರಲ್ಲೇನೂ ವಿಶೇಷತೆ ಇಲ್ಲ. ಒಟ್ಟಾಗಿ ಹೋಗಿದ್ದರೆ ವಿಶೇಷ ಇರುತ್ತಿತ್ತು. ಒಟ್ಟಾಗಿ ಹೋಗುವುದಕ್ಕೆ ಮುಹೂರ್ತ ತೆಗೆದು ನೋಡಬೇಕೆಂದು ನಸುನಗುತ್ತ ಹೇಳಿದರು.

ಸಿದ್ದು, ಡಿಕೆಶಿಯನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ: ಸಂಸದ ಪ್ರತಾಪ್ ಸಿಂಹ

ನಿಗಮ ಮಂಡಳಿಗೆ ಕಾರ್ಯಕರ್ತರನ್ನು ನೇಮಿಸಲಿ: ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ವಿಚಾರ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜಂಟಿಯಾಗಿ ನಿರ್ಧಾರ ಮಾಡುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಹಿರಿಯ ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಕಾರ್ಯಕರ್ತರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂಬುದು ನಮ್ಮ ಬೇಡಿಕೆಯಿದೆ. ಈ ಕುರಿತು ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ. ಶೇ.50ರಷ್ಟು ಕಾರ್ಯಕರ್ತರಿಗೆ, ಶೇ.50ರಷ್ಟು ಶಾಸಕರಿಗೆ ನೀಡಲು ಹೇಳಿದ್ದೇವೆ .ಕಾರ್ಯಕರ್ತರಿಗೆ ನೀಡಿದರೆ ಒಳ್ಳೆಯದು. ಶಾಸಕರ ಪಟ್ಟಿ ರೆಡಿಯಾಗಿದೆ. ಕಾರ್ಯಕರ್ತರದ್ದು ಇನ್ನೂ ಆಗಿಲ್ಲ ಎಂದು ಹೇಳಿದರು.

click me!