
ಹುಬ್ಬಳ್ಳಿ (ಫೆ.27): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲರಿಗೂ ಟಿಕೆಟ್ ಕೊಟ್ಟರೂ ಅವರಲ್ಲಿ ಕಿತ್ತಾಟ ಸಾಮಾನ್ಯ. ಹಾಗಾಗಿ ಅವರು ಮೊದಲು ತಮ್ಮ ಮನೆ, ಕುಟುಂಬ ಸರಿ ಮಾಡಿಕೊಳ್ಳಲಿ. ಆಮೇಲೆ ರಾಜ್ಯ ಆಳಲು ಬರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಕಿದ್ದಾರೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕುರಿತ ಚರ್ಚೆ ಬಗ್ಗೆ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಮೊದಲು ಮನೆಯನ್ನು ನಿರ್ವಹಿಸಲಿ. ಕುಟುಂಬದ 10-12 ಮಂದಿ ಚುನಾವಣೆಯಲ್ಲಿ ನಿಂತರೂ ಅವರಿಗೆ ಸಮಾಧಾನವಿಲ್ಲ. ಹಾಗಿದ್ದ ಮೇಲೂ ಪರಸ್ಪರ ಬಡಿದಾಡುತ್ತಾರೆ. ಕುಟುಂಬವನ್ನೇ ನಿರ್ವಹಿಸಲಾಗದವರು ರಾಜ್ಯ, ದೇಶವನ್ನು ಹೇಗೆ ನಿಭಾಯಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಮಠಾಧೀಶರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳು ರಾಜಕಾರಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಯಾರು, ಯಾವ ಅರ್ಥದಲ್ಲಿ ಮಠಾಧೀಶರ ಬಗ್ಗೆ ಹಾಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದರು. ಇನ್ನು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯ ಬಗ್ಗೆಯೂ ಟೀಕಾ ಪ್ರಹಾರ ನಡೆಸಿದ ಪ್ರಹ್ಲಾದ ಜೋಶಿ, ರಾಹುಲ್ ಗಾಂಧಿ ಕೋವಿಡ್ ವ್ಯಾಕ್ಸಿನ್ ಬಗ್ಗೆ ಆಗಾಗ ಸುಳ್ಳು ಸುದ್ದಿ ಹಬ್ಬಿಸುತ್ತಿರುತ್ತಾರೆ. ಅವರಿಗೆ ದೇಶದ ವಿಜ್ಞಾನಿಗಳ ಬಗ್ಗೆ ನಂಬಿಕೆ ಇಲ್ಲ. ಕೋವಿಡ್ ಲಸಿಕೆ ಕಳಪೆ ಆಗಿದ್ದರೆ ಜನರು ದಂಗೆ ಏಳುತ್ತಿದ್ದರು ಎಂದು ಹೇಳಿದರು.
ಮೋದಿ ರೋಡ್ ಶೋಗಾಗಿ ಪಿಯು ಪರೀಕ್ಷೆ ಮುಂದೂಡಿಕೆ: ಸಮಾವೇಶಕ್ಕೆ ವಿದ್ಯಾರ್ಥಿಗಳು
ಮೊದಲು ನಿಮ್ಮ ಮನೆ ಸರಿ ಇಟ್ಕೊಳ್ಳಿ: ಮನೆಯನ್ನೇ ಮ್ಯಾನೇಜ್ ಮಾಡದವರು ರಾಜ್ಯವನ್ನು ಮ್ಯಾನೇಜ್ ಮಾಡ್ತಾರಾ? ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಮೊದಲು ನಿಮ್ಮ ಮನೆ ಸರಿ ಮಾಡಿಕೊಂಡು ಬಳಿಕ ನಮ್ಮ ವಿಷಯ ಮಾತನಾಡಿ ಎಂದು ಟಾಂಗ್ ನೀಡಿದ್ದಾರೆ. ಜಿಲ್ಲೆಯ ಕೊಪ್ಪದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ಚರ್ಚೆಗಳಾಗುವುದು, ರಾಜ್ಯದ ಜನತೆಯ ಒಳಿತಿಗಾಗಿ. ಕಾರ್ಯಕ್ರಮ ಕೊಡುವುದು ನಮ್ಮ ಕುಟುಂಬದ ಕೆಲಸ. ಜನರ ಸೇವೆ ಮಾಡಲು ಪೈಪೋಟಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಜೊತೆಗೆ ಅವರಿಗೆ, ಓರ್ವ ತಮ್ಮನನ್ನು ಸರಿಯಾಗಿ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲ, ಅವರಲ್ಲಿಯೇ ಹೊಡೆದಾಟವಿದೆ. ಅವರ ಸಹೋದರ ಸಚಿವರ ಅಕ್ರಮಗಳ ದಾಖಲೆ ಕೊಡುವುದಾಗಿ ದಿನವೂ ನಮಗೆ ಪೋನ್ ಮಾಡ್ತಾ ಇದ್ದಾರೆ. ಅವರ ಕುಟುಂಬ ನೆಟ್ಟಗೆ ಇಡೋದು ಅವರಿಗೇ ಗೊತ್ತಿಲ್ಲ, ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಎಚ್ಡಿಕೆ ಕಿಡಿಕಾರಿದರು.
ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ: ಎಚ್.ಡಿ.ಕುಮಾರಸ್ವಾಮಿ
ಚುನಾವಣೆ ಬಂದಾಗ, ಪಕ್ಷ ಸಂಘಟನೆ ಮತ್ತು ಜನ ಸೇವೆ ಮಾಡಲು ಎಲ್ಲರಲ್ಲೂ ಉತ್ಸಾಹ ಇರುವುದರಿಂದ ಬೆಳವಣಿಗೆ ಆಗಿದೆ. ಇದು, ಕುಟುಂಬದ ಕಲಹನಾ ಎಂದು ಪ್ರಶ್ನಿಸಿದ ಕುಮಾರ ಸ್ವಾಮಿ, ಹಿಂದೂ ಸಂಸ್ಕೃತಿ ಬಗ್ಗೆ ಹೇಳುವ, ರಾಮ ಮಂದಿರ ಕಟ್ಟುವ ಜೋಶಿಯವರಿಗೆ ಕೇಳ್ತೀನಿ, ನಮ್ಮ ರಾಮಾಯಣ ಇರಲೀ, ಮಹಾಭಾರತ ಇರಲಿ ಏನು ನಡೆದಿದೆ. ದಶರಥ ತನ್ನ 3 ಪತ್ನಿಯರ ಪೈಕಿ ಕೈಕೇಯಿಗೆ ಕೊಟ್ಟಮಾತಿನಂತೆ ರಾಮನನ್ನು ಕಾಡಿಗೆ ಕಳುಹಿಸಿದ. ಅದು, ಅಧಿಕಾರಕ್ಕಾಗಿ ನಡೆದದ್ದು ಅಲ್ವಾ ಎಂದು ಪ್ರಶ್ನಿಸಿದರು. ನಮ್ಮ ಪಕ್ಷದಲ್ಲಿ, ಕಾರ್ಯಕರ್ತರಲ್ಲಿ ಕೆಲವರು ಗೊಂದಲ ಸೃಷ್ಟಿಮಾಡಿದ್ದಾರೆ. ಆ ಗೊಂದಲ ನಿವಾರಣೆ ಮಾಡುವ ಶಕ್ತಿ ಇದೆ ನಮಗೆ ಇದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.