
ಹುಬ್ಬಳ್ಳಿ (ಡಿ.01): ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ದಿನೇ ದಿನೇ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಶೇ. 40 ರಷ್ಟು ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದರು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು 6 ತಿಂಗಳಲ್ಲಿಯೇ ಪರಿಸ್ಥಿತಿ ಭೀಕರವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣವಾಗಿ ನಿಂತು ಹೋಗಿವೆ. ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೂ ಅನುದಾನ ನೀಡುತ್ತಿಲ್ಲ. ಏಕೆ ಎಂದು ಪ್ರಶ್ನಿಸಿದರೆ ಮೇಲಿಂದ ಹೇಳಿದ್ದಾರೆ ಅದಕ್ಕೆ ಪೆಂಡಿಂಗ್ ಅಂತ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ.
ಮೇಲಿಂದ ಅಂದರೆ ಯಾರು? ಯಾಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬುದನ್ನು ತಿಳಿಸಲಿ. ಸರ್ಕಾರ ಕಾಮಗಾರಿ ಪರಿಶೀಲನೆ ಮಾಡಿ ಗುತ್ತಿಗೆದಾರಿಗೆ ಹಣ ನೀಡಲಿ ಎಂದರು. ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ. ಸಿಎಂ ಹಾಗೂ ಡಿಸಿಎಂ ನಡುವೆ ಹೊಂದಾಣಿಕೆ ಇಲ್ಲ. ದೊಡ್ಡ ಪ್ರಮಾಣದಲ್ಲಿ ಭಿನ್ನಮತವಿದೆ. ಬಿ.ಆರ್. ಪಾಟೀಲ, ಬಸವರಾಜ ರಾಯರಡ್ಡಿ, ಸತೀಶ್ ಜಾರಕಿಹೊಳಿ ಗುಂಪುಗಾರಿಕೆ ನೋಡಿದರೆ ಇವರಿಗೆ ರಾಷ್ಟ್ರೀಯ ನಾಯಕರ ಹೆದರಿಕೆ ಇಲ್ಲದಂತೆ ಕಾಣಿಸುತ್ತಿದೆ. ಜನರಿಗೆ ದಿನವಿಡೀ ಇವರ ಜಗಳ ನೋಡುವುದೇ ಆಗಿದೆ ಎಂದರು.
ಬಾಂಬ್ ಬೆದರಿಕೆ ಪ್ರಕರಣವನ್ನು ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ: ಸಚಿವ ಮಧು ಬಂಗಾರಪ್ಪ
ಕಾಂಗ್ರೆಸ್ನ ರಾಷ್ಟ್ರೀಯ ನಾಯಕ ಶಶಿ ತರೂರ್ ಪಾಲ್ಗೊಂಡ ಸಭೆಯಲ್ಲೂ ಮುಂದಿನ ಮುಖ್ಯಮಂತ್ರಿ ಯಾರು, ಸಿದ್ದರಾಮಯ್ಯ ಅವರನ್ನು ಯಾವಾಗ ಕೆಳಗಿಳಿಸುತ್ತೀರಿ ಎಂಬಿತ್ಯಾದಿ ಚರ್ಚೆಗಳೇ ನಡೆದಿವೆ. ಅದರೆ, ಅದಕ್ಕೆ ತರೂರ ಉತ್ತರ ನೀಡಿಲ್ಲ ಎಂದರು. ಬೆಳೆ ವಿಮೆ ಭಾರತ ಸರ್ಕಾರದ್ದು ಆದರೆ, ಬೆಳೆ ವಿಮೆ ಏಜೆನ್ಸಿ, ಪರಿಹಾರದ ಪ್ರಮಾಣ, ಎಲ್ಲವನ್ನೂ ನಿರ್ಧಾರ ಮಾಡುವುದು ರಾಜ್ಯ ಸರ್ಕಾರ. ಹೀಗಾಗಿ ತಪ್ಪಾಗಿದೆ ಅದನ್ನು ಮರು ಪರಿಶೀಲನೆ ಮಾಡುತ್ತೇವೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಮೊದಲಿನಿಂದಲೂ ಚಿಂತನೆಯಿದೆ. ಈಗ ₹ 324 ಕೋಟಿ ಯೋಜನೆಯ ನೀಲನಕ್ಷೆ ಸಿದ್ಧವಾಗಿದೆ ಇದಕ್ಕೆ ಅನುಮೋದನೆ ಪಡೆದು ಟೆಂಡರ್ ಕರೆಯಲಾಗುತ್ತದೆ ಎಂದರು.
80 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಹಸ್ತಾಂತರ: ಇಲ್ಲಿಯ ಬಿವಿಬಿ ಆವರಣದ ದೇಶಪಾಂಡೆ ಫೌಂಡೇಶನ್ನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಗುರುವಾರ ನಡೆದ ರೋಜಗಾರ ಮೇಳದಲ್ಲಿ 80 ಅಭ್ಯರ್ಥಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇಮಕಾತಿ ಪತ್ರ ಹಸ್ತಾಂತರಿಸಿದರು. ಇದಕ್ಕೂ ಪೂರ್ವದಲ್ಲಿ ದೇಶದ ನಾನಾ ಕಡೆಗಳಲ್ಲಿ ನಡೆದ ರೋಜಗಾರ ಮೇಳಕ್ಕೆ ಆನ್ಲೈನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಮಾತಗಳನ್ನಾಡಿದರು. ಅಲ್ಲದೇ, ಭವಿಷ್ಯದ ಯೋಜನೆಗಳ ಬಗ್ಗೆ ವಿಸ್ತೃತವಾದ ಮಾಹಿತಿ ತಿಳಿಸಿದರು.
ಖಂಡಿತ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಬರುತ್ತಾರೆ: ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್
ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಐಟಿ,ಅಂಚೆ ಇಲಾಖೆ, ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಪ್ರಧಾನಿ ಅವರ ಮಾತುಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಲಕ್ಷ ಉದ್ಯೋಗ ಒದಗಿಸುವ ಭರವಸೆ ಸರ್ಕಾರ ನೀಡಿತ್ತು.ಅದರಂತೆ ಈಗಾಗಲೇ ರೋಜಗಾರ ಮೇಳದ ಮೂಲಕ 8 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸಲಾಗಿದ್ದು, ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಪಣಜಿ ವಿಭಾಗದ ಐಟಿ ಮುಖ್ಯ ಆಯುಕ್ತ ಶಾಜಿ ಪಿ. ಜಾಕೋಬ್, ಕರ್ನಾಟಕ ಐಟಿ ಮುಖ್ಯ ಆಯುಕ್ತೆ ಜಿ. ಅಪರ್ಣಾ ರಾವ್ ಸೇರಿದಂತೆ ಹಲವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.