
ಹುಬ್ಬಳ್ಳಿ (ಅ.30): ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಯಾರಾದರೂ ಅನ್ಯಾಯ ಮಾಡಿದ್ದರೆ ಅದು ಕಾಂಗ್ರೆಸ್ನವರು ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಜತೆಗೆ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಕಾನೂನುಗಳೇ ಪಾಲನೆಯಾಗುತ್ತಿದೆ. ಘಟಬಂಧನ ಉಳಿಸಿಕೊಳ್ಳಲು ಡಿಎಂಕೆ ಪರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಪ್ರಚಾರ ಮಾಡುತ್ತಾರೆ, ಆದರೆ, ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಜತೆಗೆ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಡಿಎಂಕೆ ನಮ್ಮ ಮಾತನ್ನು ಕೇಳುವುದಿಲ್ಲ, ನಾವೇನು ಮಾಡಿದರೂ ಅದಕ್ಕೆ ಸಹಜವಾಗಿ ವಿರೋಧ ಮಾಡುತ್ತಾರೆ ಎಂದರು. ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಯಾರಾದರೂ ಅನ್ಯಾಯ ಮಾಡಿದ್ದರೆ ಅದು ಕಾಂಗ್ರೆಸ್ನವರು. ನೆಲ, ಜಲ ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ಸಿಗರ ನಾಟಕವನ್ನು ಜನತೆ ಇನ್ನು ನಂಬುವುದಿಲ್ಲ. ನಮ್ಮನ್ನು ಜನ ರಾಜ್ಯದಲ್ಲಿ ಸೋಲಿಸಿರಬಹುದು, ಆದರೆ, ದೇಶದಲ್ಲಿ ಬಿಜೆಪಿಯ ಕೈಹಿಡಿದಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ನದು ನಾಯಕತ್ವ ಇಲ್ಲದ ಪಕ್ಷ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ
ಪರಿಷ್ಕೃತ ಸ್ಪಷ್ಟೀಕರಣ ವರದಿ ನೀಡದ ಕಾರಣ ಮಹದಾಯಿ ವಿಳಂಬ: ಮಹದಾಯಿ ಯೋಜನೆ ಕುರಿತು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಬಳಿ ಪರಿಸರ ಮತ್ತು ವನ್ಯಜೀವಿ ಮಂಡಳಿಯಿಂದ ಕೆಲವು ಸ್ಪಷ್ಟೀಕರಣದ ವರದಿ ಕೇಳಿದೆ. ಈವರೆಗೂ ನೀಡದ ಕಾರಣ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಭಾನುವಾರ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ ಮಾತನಾಡಿ, ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಈಗಾಗಲೇ ಕೇಂದ್ರದ ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಯೋಜನೆಯ ಸಮಗ್ರ ವಿಸ್ತೃತ ವರದಿ (ಡಿಪಿಆರ್) ಸಿದ್ಧಪಡಿಸಿ ಒಪ್ಪಿಗೆ ನೀಡಿದ್ದೇ ಬಿಜೆಪಿ ಸರ್ಕಾರ. ಅದರ ಅನುಷ್ಠಾನ ಸಹ ನಾವೇ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ: ನಿಕ್ಲೆಗ್ ನಮಸ್ಕಾರ, ಎಂಚ ಉಲ್ಲರ್ ಎಂದ ಸಿದ್ಧರಾಮಯ್ಯ
ಬೆಳೆ ವಿಮೆ ಪರಿಹಾರದ ಹಣ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಅಧಿಕಾರಿಗಳ ತಪ್ಪಿನಿಂದ 2022ರ ವರದಿಯನ್ನು ರಾಜ್ಯ ಸರ್ಕಾರ ತಪ್ಪಾಗಿ ನೀಡಿತ್ತು. ಅದನ್ನು ಸರಿಪಡಿಸಿ ಕಳುಹಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಜತೆಯೂ ಮಾತನಾಡಲಾಗಿದೆ. ವರದಿ ಬಂದ ನಂತರ ಪರಿಹಾರ ಹಣ ವಿತರಿಸಲಾಗುವುದು ಎಂದರು. ರಾಜ್ಯ ಸರ್ಕಾರ ಖಾಸಗಿ ವಿಮಾ ಕಂಪನಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರಕ್ಕೆ ಸುಳ್ಳು ವರದಿ ನೀಡಿದೆ. ಶೀಘ್ರವೇ ಸಮರ್ಪಕ ವರದಿ ನೀಡದಿದ್ದರೆ, ರಾಜ್ಯಾದ್ಯಂತ ಬಿಜೆಪಿ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.