ಧಮ್‌ ಇದ್ರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ: ಖಂಡ್ರೆಗೆ ಖೂಬಾ ಸವಾಲ್‌

By Govindaraj SFirst Published Dec 17, 2022, 10:56 PM IST
Highlights

ನಿಮಗೆ ಧಮ್‌ ಇದ್ರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳ ಮೇಲೆ ಅವಲಂಭಿತರಾಗದೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬನ್ನಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಶಾಸಕ ಈಶ್ವರ ಖಂಡ್ರೆಗೆ ಸವಾಲೆಸೆದರು. 

ಬೀದರ್‌ (ಡಿ.17): ನಿಮಗೆ ಧಮ್‌ ಇದ್ರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳ ಮೇಲೆ ಅವಲಂಭಿತರಾಗದೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬನ್ನಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಶಾಸಕ ಈಶ್ವರ ಖಂಡ್ರೆಗೆ ಸವಾಲೆಸೆದರು. ಭಾಲ್ಕಿಯಲ್ಲಿ ಬಿಜೆಪಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ 1989ರಲ್ಲಿ ನಿಮ್ಮ ಸಹೋದರ ವಿಜಯಕುಮಾರ ಖಂಡ್ರೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಂತೆ ಗೆದ್ದು ಬನ್ನಿ ನೋಡೋಣ, ಅಷ್ಟಕ್ಕೂ ನೀವು ಸ್ವತಂತ್ರವಾಗಿ ಕಣಕ್ಕಿಳಿದಿದ್ದೆಯಾದಲ್ಲಿ ಅತ್ಯಂತ ಹೀನಾಯವಾಗಿ ಸೋಲುತ್ತೀರಾ ಎಂದು ಭವಿಷ್ಯ ನುಡಿದರು.

ಪ್ರತಿ ಬೂತ್‌ನಲ್ಲಿಯೂ ನಮ್ಮ ಪೊಲೀಸರು, ಕಾರ್ಯಕರ್ತರಿರ್ತಾರೆ: ಸೋಲುವ ಭೀತಿಯಲ್ಲಿ 26ಸಾವಿರ ಜನರಿಗೆ ಸುಳ್ಳು ವಸತಿ ಮಂಜೂರಿ ಪತ್ರ ನೀಡಿ ಗೆಲುವು ಸಾಧಿಸಿದ್ದ ಈಶ್ವರ ಖಂಡ್ರೆಗೆ ಈ ಬಾರಿ ಯಾವುದೇ ಸುಳ್ಳು ಹೇಳುವ ಅವಕಾಶವಿಲ್ಲ ಅಷ್ಟೇ ಅಲ್ಲ ಪ್ರತಿ ಬೂತ್‌ನಲ್ಲಿ ನಮ್ಮ ಪೊಲೀಸರು, ಕಾರ್ಯಕರ್ತರು ಇರ್ತಾರೆ ಎಂದು ಎಚ್ಚರಿಸಿದರು. ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದು, ಮತದಾರರಿಗೆ ಸುಳ್ಳು ಹೇಳಿ ಮೋಸ ಮಾಡಿರುವ ಈಶ್ವರ ಖಂಡ್ರೆಗೆ 2023ರ ಚುನಾವಣೆಯಲ್ಲಿ ಸೋಲುಣಿಸುವ ಗುರಿಯನ್ನು ಕ್ಷೇತ್ರದ ಜನ ಹೊಂದಬೇಕು. ಇಂಥ ಅಹಂಕಾರಿಯನ್ನು ರಾಜಕೀಯವಾಗಿ ಮುಗಿಸಬೇಕು. ಈಶ್ವರ ಖಂಡ್ರೆಗೆ ಸೋಲಿಸಿದ 2 ವರ್ಷಗಳ ಒಳಗಾಗಿ 25ಸಾವಿರ ಮನೆ ಮಂಜೂರಿ ಗ್ಯಾರಂಟಿ ಎಂದು ಹೇಳಿದರು.

25 ವಿಧಾನಸಭಾ ಕ್ಷೇತ್ರದಲ್ಲೂ ಮತದಾರ ಪಟ್ಟಿ ಬಗ್ಗೆ ವಿಶೇಷ ಪರಿಶೀಲನೆ: ತುಷಾರ್‌ ಗಿರಿನಾಥ್‌

ಬಡ ರೈತರನ್ನು, ವಿಧವೆಯರನ್ನು ಮನೆಯಂಗಳಕ್ಕೆ ಕರೆಸೋ ಖಂಡ್ರೆ: ಬಡ ರೈತರನ್ನು, ವಿಧವೆಯರನ್ನು ಮನೆಯಂಗಳಕ್ಕೆ ಕರೆಸಿ ಸರ್ಕಾರದ ಯೋಜನೆಯ ಚೆಕ್‌ ಕೊಡ್ತೀರಾ ಇದ್ಯಾವ ನ್ಯಾಯ?, ಇದು ಜನಪ್ರತಿನಿಧಿಯ ಧರ್ಮವಾ? ಸರ್ಕಾರದ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ಹಂಚುವಾಗ ಸಾರ್ವಜನಿಕ ಸಭೆ ನಡೆಸಿ ನಮ್ಮಂಥವರನ್ನು ಕರೆಸಿ ಕೊಡಿ ಎಂದು ಸವಾಲೆಸೆದರು.

ಹಕ್ಕುಚ್ಯುತಿಗೆ ಹೆದರೋಲ್ಲ, ನಾವು ಬಡವರ ಪರವಾಗಿದ್ದೇವೆ: ಸುಳ್ಳು ಆರೋಪ ನಾವೆಂದೂ ಮಾಡಿಲ್ಲ, ನೀವು ನಿರ್ಲಜ್ಜರಿದ್ದೀರಿ ನಾವು ಬಡವರ ಪರ ನಿಲ್ಲುವವರಾಗಿದ್ದು, ನಮ್ಮ ಮೇಲೆ ಯಾವುದೇ ರೀತಿಯ ಮಾನ ನಷ್ಟಮೊಕದ್ದಮೆಯಾದರೂ ಹೂಡಲಿ, ಹಕ್ಕು ಚ್ಯುತಿಯಾದರೂ ಮಾಡಲಿ, ನಾವು ಹೆದರೊಲ್ಲ ಎಂದು ಖಂಡ್ರೆ ವಿರುದ್ಧ ಭಗವಂತ ಖೂಬಾ ಆರೋಪಿಸಿದರು.

ಮಾರ್ಚ್‌ನಲ್ಲಿ ಹಿಂದುಳಿದ ವರ್ಗಗಳ ಕಾಂಗ್ರೆಸ್‌ ಸಮಾವೇಶ: ಮಧು ಬಂಗಾರಪ್ಪ

ಕೇಂದ್ರ ಸರ್ಕಾರದಿಂದ ಭಾಲ್ಕಿ ತಾಲೂಕಿಗೆ ರು.150 ಕೋಟಿ: ಬರುವ ದಿನಗಳಲ್ಲಿ ಭಾಲ್ಕಿ ತಾಲೂಕಿನಲ್ಲಿ ಬಾಂದಾರ ಸೇತುವೆಗಳ ನಿರ್ಮಾಣ, ಕೆರೆಗಳ ದುರಸ್ಥಿ, ಬಾಂದಾರ ದುರಸ್ಥಿಗಾಗಿ 150ಕೋಟಿ ರು.ಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರಿ ಮಾಡಿಸುತ್ತೇನೆ ಎಂದ ಅವರು ಇನ್ನೂ ದೊಡ್ಡ ದೊಡ್ಡ ಗ್ರಾಮಗಳಿಗೆ ರು.78ಕೋಟಿ ವೆಚ್ಚದ ಜೆಜೆಎಂ ಯೋಜನೆಯಡಿ ಕಾಮಗಾರಿ ಮಂಜೂರಾಗಿ ಟೆಂಡರ್‌ ಆಗಿದ್ದು, ನಾನಿಲ್ಲದೆ ಪೂಜೆ ಹೇಗೆ ಮಾಡ್ತೀರಿ ನೋಡ್ತೇನೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಪ್ರಭಾರಿ ಈಶ್ವರಸಿಂಗ್‌ ಠಾಕೂರ್‌, ಬಸವಕಲ್ಯಾಣ ಶಾಸಕ ಶರಣು ಸಲಗರ, ಮರಾಠಾ ನಿಗಮದ ಅಧ್ಯಕ್ಷ ಎಂಜಿ ಮೂಳೆ, ಪಂಡಿತ ಸುರಾಳೆ, ಮುಖಂಡರಾದ ಸಿದ್ರಾಮ್‌, ಶಿವರಾಜ ಗಂದಗೆ, ಬಾಬುರಾವ್‌ ಕಾರಬಾರಿ ಸೇರಿದಂತೆ ಮತ್ತಿತರರು ಇದ್ದರು.

click me!