ಲಿಂಗಾಯತರ ಕುರಿತು ಕಾಂಗ್ರೆಸ್‌ ಅಪಪ್ರಚಾರ: ಕೇಂದ್ರ ಸಚಿವ ಭಗವಂತ ಖೂಬಾ

By Kannadaprabha NewsFirst Published Apr 23, 2023, 10:30 PM IST
Highlights

ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಳಗಳಲ್ಲಿ ಬಿಜೆಪಿಯ ಲಿಂಗಾಯತ ಅಭ್ಯರ್ಥಿಗಳಿದ್ದಾರೆ, ಶೆಟ್ಟರ್‌, ಸವದಿ ಕಾಂಗ್ರೆಸ್‌ಗೆ, ರಾಜ್ಯದ ಬಿಜೆಪಿಗೆ ಕಿಂಚಿತ್ತೂ ಪರಿಣಾಮವಾಗಲ್ಲ, ಬಿಜೆಪಿ 68 ವೀರಶೈವ ಲಿಂಗಾಯತ ಅಭ್ಯರ್ಥಿಗಳು, ಕಾಂಗ್ರೆಸ್‌ನಲ್ಲಿ 47 ಮಾತ್ರ, ಅಧಿಕಾರಕ್ಕಾಗಿ ರಾಜಸ್ಥಾನ, ಹಿಮಾಚಲದಲ್ಲೂ ಕಾಂಗ್ರೆಸ್‌ ಸುಳ್ಳು ಗ್ಯಾರಂಟಿ ನೀಡಿದೆ: ಭಗವಂತ ಖೂಬಾ 

ಬೀದರ್‌(ಏ.23):  ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಳಗಳಲ್ಲಿ ಬಿಜೆಪಿಯ ಲಿಂಗಾಯತ ಅಭ್ಯರ್ಥಿಗಳಿದ್ದಾರೆ. ಅದಾಗ್ಯೂ ಕಾಂಗ್ರೆಸ್‌ ಹತಾಶ ಭಾವನೆಯಿಂದ, ರಾಜಕೀಯ ಸ್ವಾರ್ಥಕ್ಕಾಗಿ ಅಪಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.

ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಸ್ವಾರ್ಥಕ್ಕಾಗಿ ವೀರಶೈವ ಲಿಂಗಾಯತರ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ ಇದು ಖಂಡನೀಯ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನೇಕ ಲಾಭವನ್ನು ಪಡೆದು ಇದೀಗ ಕಾಂಗ್ರೆಸ್ಸಿನ ತತ್ವ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್‌ನಲ್ಲಿ ಸೇರಿ ಅಪಾರ ಬಿಜೆಪಿ ಕಾರ್ಯಕರ್ತರ ಕ್ರೋಧಕ್ಕೆ ಕಾರಣರಾದರು. ಈ ಇಬ್ಬರು ನಾಯಕರು ತಮ್ಮ ರಾಜಕೀಯ ಸ್ವಾರ್ಥ ಹಾಗೂ ಲಾಭಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರು. ಇದರಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ವಿಪರೀತ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೀದರ್‌ನಲ್ಲಿ ಕಮಲ ಅರಳಿಸಲು ರಣತಂತ್ರ: 6 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಶಾ

ಬಿಜೆಪಿಯಲ್ಲಿ 68 ವೀರಶೈವ ಲಿಂಗಾಯತ ಅಭ್ಯರ್ಥಿಗಳು, ಕಾಂಗ್ರೆಸ್‌ನಲ್ಲಿ 47 ಮಾತ್ರ:

ಇದೇ ಬಂಡವಾಳವನ್ನಾಗಿಸಿಕೊಂಡ ಕಾಂಗ್ರೆಸ್‌ನವರು ತಮ್ಮ ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತರಿಗೆ ಬಿಜೆಪಿಯಲ್ಲಿ ಅಪಮಾನ ಮಾಡಲಾಗುತ್ತಿದೆ. ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಕಾಂಗ್ರೆಸ್‌ನ ವರಿಷ್ಠ ನಾಯಕರಾದ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ನ ಹೈಕಮಾಂಡ್‌ಗೆ ವಿಧಾನಸಭಾ ಚುನಾವಣೆಗಾಗಿ ಕನಿಷ್ಠ 70 ಸೀಟ್‌ಗಳನನಾದರೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಕೇವಲ 47 ವೀರಶೈವ ಲಿಂಗಾಯತರಿಗೆ ಟಿಕೇಟ್‌ನ್ನು ನೀಡಲಾಗಿದೆ. ಬಿಜೆಪಿಯಲ್ಲಿ 68 ಸ್ಥಾನವನ್ನು ವೀರಶೈವ ಲಿಂಗಾಯತ ಅಭ್ಯರ್ಥಿಗೆ ನೀಡಲಾಗಿದೆ ಎಂದು ಹೇಳಿದರು.

2018ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್‌ನಿಂದ ವೀರಶೈವ ಲಿಂಗಾಯತರನ್ನು ಒಡೆಯುವ ಹುನ್ನಾರವನ್ನು ಮಾಡಲಾಗಿತ್ತು. ಆದರೆ, ಮತದಾರರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ. ಈಗಲೂ ಕೂಡ ಕಾಂಗ್ರೆಸ್ಸಿನವರು ವೀರಶೈವ ಲಿಂಗಾಯತರ ಬಗ್ಗೆ ಅಪಪ್ರಚಾರ ಮಾಡಿ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡಲಾಗುತ್ತಿದೆ. ಆದರೆ, ಮತದಾರರು ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಎಚ್ಚರಿಸಿದರು.

ವಿಧಾನಪರಿಷತ್‌ ಸದಸ್ಯ ರಘುನಾಥರಾವ್‌Ü ಮಲ್ಕಾಪೂರೆ ಮಾತನಾಡಿ, ಕಾಂಗ್ರೆಸ್‌ನವರ ಗ್ಯಾರಂಟಿ ಕಾರ್ಡ್‌ನ ಮುಖಾಂತರ ಜನರಿಗೆ ಭಿನ್ನ ಯೋಜನೆ ಜಾರಿ ಮಾಡುವ ಅಶ್ವಾಸನೆ ನೀಡುತ್ತಿದ್ದಾರೆ. ಜನರು ಈ ಆಶ್ವಾಸನೆಗೆ ನಂಬಬಾರದು. ಕಾಂಗ್ರೆಸ್‌ನವರು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ಇದೇ ತರಹದ ಯೋಜನೆಯ ಆಮಿಷ ತೋರಿಸಿ ಚುನಾವಣೆ ನಂತರ ಅಧಿಕಾರ ಗಿಟ್ಟಿಸಿಕೊಂಡು ಜನರಿಗೆ ಕೈಕೊಟ್ಟಿರುವ ಉದಾಹರಣೆ ಇದೆ. ಹಾಗಾಗಿ ಜನರು ಬಿಜೆಪಿಯ ಅಭಿವೃದ್ಧಿ ಪರ ಸರ್ಕಾರಕ್ಕೆ ಮತವನ್ನು ನೀಡಿ ಸ್ಪಷ್ಟಬಹುಮತದಿಂದ ಆರಿಸಬೇಕೆಂದು ಮನವಿ ಮಾಡಿದರು.

ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್‌ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸೋಮನಾಥ ಪಾಟೀಲ್‌, ರಾಷ್ಟ್ರೀಯ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜೈಕುಮಾರ ಕಾಂಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಗಾದಗಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ ಟೊಣ್ಣೆ, ಬೀದರ್‌ ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ, ಬಿಡಿಎ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ವಕ್ತಾರರಾದ ಶಿವಪುತ್ರ ವೈದ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!