
ರಾಮು ಅರಕೇರಿ
ಸಂಡೂರು(ಫೆ.22): ಫೆ. 23ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾರ್ವಜನಿಕ ಸಮಾವೇಶಕ್ಕಾಗಿ ಸಂಡೂರಿನ ಎಸ್ಆರ್ಎಸ್ ಗ್ರೌಂಡ್ನಲ್ಲಿ ಸಿದ್ಧತೆ ಕಾರ್ಯ ಭರದಿಂದ ಸಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇತಿಹಾಸದಲ್ಲಿ ಈ ವರೆಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಈ ಬಾರಿ ಶತಾಯ ಗತಾಯ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ ಅಮಿತ್ ಶಾ ಅವರು ವಿಜಯಕಹಳೆಯನ್ನು ಇಲ್ಲಿಂದಲೇ ಆರಂಭಿಸುವ ಉದ್ದೇಶದಿಂದ ಸಂಡೂರಿಗೆ ಆಗಮಿಸಲಿದ್ದಾರೆ ಎಂಬುದು ಪಕ್ಷದ ಮುಖಂಡರ ತರ್ಕ. ಈ ಸಭೆಯಲ್ಲಿಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಇದಕ್ಕಾಗಿ ಎಸ್ಆರ್ಎಸ್ ಗ್ರೌಂಡ್ನಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ.
ಅಮಿತ್ ಶಾ ಅವರು ಫೆ. 23ರಂದು ಹುಬ್ಬಳ್ಳಿಯಿಂದ 1.30ಕ್ಕೆ ಸಂಡೂರಿಗೆ ಬರಲಿದ್ದಾರೆ. ಅಂದು ಮಧ್ಯಾಹ್ನ 2ರಿಂದ 3.30ರ ವರೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶ್ರೀರಾಮುಲು ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ರಾಜ್ಯದ ಮುಖಂಡರು ಭಾಗವಹಿಸಲಿದ್ದಾರೆ. ಬಳಿಕ ಶಿವಪುರ ಪ್ಯಾಲೇಸ್ನಲ್ಲಿ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಕೋರ್ ಕಮಿಟಿ ಸಭೆ ನಡೆಯಲಿದೆ.
ಕುಟುಂಬ ಕದನ: ಬಳ್ಳಾರಿ ನಗರ ಕ್ಷೇತ್ರದಲ್ಲಿ ರೆಡ್ಡಿ ಕುಟುಂಬದ ಜಿದ್ದಾಜಿದ್ದಿ?
ಟಿಕೆಟ್ ಕುರಿತು ಹೈಕಮಾಂಡ್ನಲ್ಲಿ ಚರ್ಚೆ
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಕಾರ್ತಿಕೇಯ ಘೋರ್ಪಡೆಯವರ ಹಿಡಿತವಿದೆ. ಘೋರ್ಪಡೆಯವರು ಯಾರನ್ನು ಸೂಚಿಸುತ್ತಾರೊ ಅವರೇ ಕ್ಯಾಂಡಿಡೇಟ್ ಎನ್ನುವಂತೆ ಬಿಂಬಿಸಲಾಗಿತ್ತು. ಅಲ್ಲದೆ ಕಾರ್ತಿಕ್ ಘೋರ್ಪಡೆಯವರು ಅಮಿತ್ ಶಾ ಅವರೊಂದಿಗೆ ಉತ್ತಮ್ಮ ಬಾಂಧವ್ಯ ಹೊಂದಿದ್ದಾರೆ .ಅವರೇ ಟಿಕೆಟ್ ನಿರ್ಧರಿಸುತ್ತಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲ, ಕಾರ್ಯಕರ್ತರೂ ಮಾತನಾಡುತ್ತಿದ್ದರು. ಆದರೆ ಇದೀಗ ಕಾರ್ತಿಕೇಯ ಘೋರ್ಪಡೆಯವರ ನಿಲುವು ತುಸು ಸಡಿಲಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸ್ಥಳೀಯ ಆಕಾಂಕ್ಷಿಗಳು ಸುಮಾರು 15ರಿಂದ 20 ಜನ ಅರ್ಜಿಗಳನ್ನು ನೀಡಿದ್ದಾರೆ. ಅವರೆಲ್ಲ ಉತ್ಸುಕರಾಗಿದ್ದಾರೆ. ಕೆಲವರು ಚುನಾವಣಾ ವೆಚ್ಚವನ್ನು ಭರಿಸುವಷ್ಟುಸಮರ್ಥರಲ್ಲ. ಅಲ್ಲದೆ ಪಕ್ಷದ ಮುಖಂಡರೊಂದಿಗೆ ಹೈಕಮಾಂಡ್ನಲ್ಲಿ ಚರ್ಚಿಸಿ ಟಿಕೆಟ್ ನೀಡುವ ಕುರಿತು ಚಿಂತಿಸುತ್ತೇವೆ ಎಂದಿದ್ದಾರೆ.
ಇದರೊಂದಿಗೆ ಸ್ಥಳೀಯರನ್ನೇ ಅಭ್ಯರ್ಥಿಯಾಗಿಸುವೆ ಎನ್ನುವ ಅವರ ನಿಲುವನ್ನು ಕೊಂಚ ಸಡಿಲಿಕೆ ಮಾಡಿದ್ದಾರೆ. ಒಂದೆಡೆ ಶ್ರೀರಾಮುಲು ಕೂಡಾ ಇತ್ತೀಚೆಗೆ ಸಂಡೂರು ಕ್ಷೇತ್ರದತ್ತ ಒಲವು ತೋರುತ್ತಿದ್ದು, ಶ್ರೀರಾಮುಲು ಆಗಮನದ ಹಿನ್ನೆಲೆ ಶ್ರೀರಾಮುಲು ಗೆಲುವಿಗೆ ಪೂರಕವಾಗಿ ಈ ಬೃಹತ್ ಸಮಾವೇಶ ಆಯೋಜನೆಯಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.