Union Budget 2023 ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ, ಉತ್ತಮ ಬಜೆಟ್ ಎಂದ ಯಡಿಯೂರಪ್ಪ!

By Suvarna NewsFirst Published Feb 1, 2023, 6:35 PM IST
Highlights

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ಗೆ ರಾಜ್ಯದ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ಇದು ಅತ್ಯುತ್ತಮ ಬಜೆಟ್ ಎಂದರೆ, ಇದು ಕನ್ನಡಿಗರಿಗೆ ಮಹಾ ಮೋಸದ ಬಜೆಟ್ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬಜೆಟ್ ಕುರಿತು ನಾಯಕರ ಪ್ರತಿಕ್ರಿಯೆ ಇಲ್ಲಿದೆ.
 

ಬೆಂಗಳೂರು(ಫೆ.01): ಕೇಂದ್ರ ಬಿಜೆಪಿ ಮಹತ್ವದ ಬಜೆಟ್ ಮಂಡಿಸಿದೆ. ಆರ್ಥಿಕ ಹಿಂಜರಿತ, ಕೋವಿಡ್ ಸಂಕಷ್ಟದಿಂದ ಹೊರಬಂದು ಮೈಕೊಡವಿ ನಿಂತಿರುವ ಭಾರತದ ಅಭಿವೃದ್ಧಿ ವೇಗ ಹೆಚ್ಚಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ವಿಪಕ್ಷ ನಾಯಕರು ಇದು ಪೊಳ್ಳು ಬಜೆಟ್ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ದೇಶವಾಸಿಗಳ, ಇತರ ದೇಶಗಳ ನಿರೀಕ್ಷೆಯನ್ನು ನೀರಿ, ಜಗತ್ತೆ ಮೆಚ್ಚುವ ಆಯವ್ಯಯವನ್ನು ನೀಡಿದ್ದಾರೆ. ದೇಶದಲ್ಲಿ ಹಿಂದೆಂದೂ ಕೆಂಡಿರದ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ರಸ್ತೆ, ರೈಲು ಮಾರ್ಗ, ವಿಮಾನ ನಿಲ್ದಾಣ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಇದೇ ವೇಳೆ ಕರ್ನಾಟಕಕ್ಕೆ ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಂಡಿದೆ. ಭದ್ರಾ ಮೆಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ನೀಡಿದೆ. ಇದರ ಜೊತೆಗೆ ಕರ್ನಾಟಕ ಬರಪೀಡಿತ ಪ್ರದೇಶಗಳಿಗೆ ವಿಶೇಷ ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

ಕೃಷಿಗೆ ಒತ್ತು, ಹಸಿರು ಕ್ರಾಂತಿಗೆ ಒತ್ತು ನೀಡಿರುವುದ ಸರ್ಕಾರದ ದೂರದೃಷ್ಟಿಯ ಚಿಂತನೆಯಾಗಿದೆ. ಈ ಬಾರಿ ಬಜೆಟ್ ಸರ್ವವ್ಯಾಪ್ತಿ ಹಾಗೂ ಸರ್ವಸ್ಪರ್ಶಿಯಾಗಿದೆ. ಕೋವಿಡ್‌ನಿಂದ ಎದುರಾದ ಆರ್ಥಿಕ ಸಂಕಷ್ಟವನ್ನು ಮೆಟ್ಟಿನಿಂತು ಸದೃಢ ಭಾರತವನ್ನು ನಿರ್ಮಿಸುವಲ್ಲಿ ಹಾಗೂ ಆರ್ಥಿಕ ಹಿಂಜರಿತವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಕರ್ನಾಟಕಕ್ಕೆ ಮೋಸದ ಬಜೆಟ್, ಪ್ರಿಯಾಂಕ್ ಖರ್ಗೆ
ಈ ಬಜೆಟ್‌ನಲ್ಲಿ ಕನ್ನಡಿಗರಿಗೆ ಮಹಾ ಮೋಸವಾಗಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದು ಚುನಾವಣೆ ಬಜೆಟ್ ಅಲ್ಲಾ, ಜನಸಾಮಾನ್ಯರ ಬಜೆಟ್ ಕೂಡ ಅಲ್ಲ ಎಂದಿದ್ದಾರೆ. 25 ಎಂಪಿಗಳು ಕರ್ನಾಟಕದಿಂದ ಆಯ್ಕೆಯಾದರೂ ಕರ್ನಾಟಕಕ್ಕೆ ದಕ್ಕಿದ್ದೇನು? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಭರವಸೆಯ ಬಜೆಟ್, ರೈತರ ಶ್ರೇಯೋಭಿವೃದ್ಧಿಗೆ ಪೂರಕ: ಸಚಿವ ಅಶ್ವತ್ಥನಾರಾಯಣ
ಕೇಂದ್ರದ ಬಜೆಟ್ ಭರವಸೆದಾಯಕವಾಗಿ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ರೈತರ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ.

'ಪರಿವರ್ತನೆಯ ಬಜೆಟ್, ಮಧ್ಯಮವರ್ಗಕ್ಕೆ ಬೂಸ್ಟರ್ ಬಜೆಟ್: ನಳಿನ್ ಕುಮಾರ್ ಕಟೀಲ್
ನಿರ್ಮಲಾ ಸೀತಾರಾಮನ್ ಅತ್ಯುತ್ತಮ ಹಾಗೂ ಪರಿವರ್ತನೆಯ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಸೇರದಂತೆ ಹಲವು ಕೂಡುಗೆ ಮೂಲಕ ಬೂಸ್ಟರ್ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ದೇಶಕ್ಕೆ ಶೂನ್ಯ ಕೊಡುಗೆ, ಸುರ್ಜೇವಾಲ
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಿಂದ ದೇಶಕ್ಕೆ ಶೂನ್ಯ ಕೊಡುಗೆ ನೀಡಿದೆ. ಸುಳ್ಳು ಅಂಕಿ ಅಂಶಗಳನ್ನು ಬಜೆಟ್‌ನಲ್ಲಿ ಸೇರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.  

click me!