ಜೆಡಿಎಸ್‌ನ ಇಬ್ಬರು ಶಾಸಕರು ಕಾಂಗ್ರೆಸ್‌ಗೆ?: ಶಾಸಕ ಕೊತ್ತೂರು ಮಂಜುನಾಥ್

By Kannadaprabha NewsFirst Published Feb 10, 2024, 11:01 AM IST
Highlights

ಜೆಡಿಎಸ್ ಶಾಸಕರಾದ ಸಮೃದ್ಧಿ ಮಂಜುನಾಥ್ (ಮುಳಬಾಗಿಲು) ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ (ಶ್ರೀನಿವಾಸಪುರ) ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಈ ಸಂಬಂಧ ಪಕ್ಷದ ಹಿರಿಯ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. 
 

ಕೋಲಾರ (ಫೆ.10): ಜೆಡಿಎಸ್ ಶಾಸಕರಾದ ಸಮೃದ್ಧಿ ಮಂಜುನಾಥ್ (ಮುಳಬಾಗಿಲು) ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ (ಶ್ರೀನಿವಾಸಪುರ) ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಈ ಸಂಬಂಧ ಪಕ್ಷದ ಹಿರಿಯ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಇಬ್ಬರನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಕರೆದುಕೊಂಡು ಹೋಗಿ ಮಾತನಾಡಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ ಒಳ್ಳೆಯದು ಎಂದರು. ಶ್ರೀನಿವಾಸಪುರ ಕ್ಷೇತ್ರದ ಉಪಚುನಾವಣೆ ನಡೆದರೆ ವೆಂಕಟಶಿವಾರೆಡ್ಡಿ ಅವರಿಗೆ ಸೂಚಕರಾಗಿ ರಮೇಶ್ ಕುಮಾರ್ ಸಹಿ ಹಾಕಲಿದ್ದಾರೆ. ಮುಳಬಾಗಿಲಿನಲ್ಲಿ ನಾನು ಸಮೃದ್ಧಿ ಮಂಜುನಾಥ್ ಅವರಿಗೆ ಸೂಚಕನಾಗುತ್ತೇನೆ ಎಂದು ಕೊತ್ತೂರು ಮಂಜುನಾಥ್ ತಿಳಿಸಿದರು.

ಪಕ್ಷ ಬಿಡೋಲ್ಲ: ತಾವು ಮತ್ತು ಶಾಸಕ ಸಮೃದ್ಧಿ ಮಂಜುನಾಥ್ ನಮ್ಮ ನಮ್ಮ ಕ್ಷೇತ್ರದ ಕೆಲಸಕ್ಕೆ ಸಿಎಂ ಹಾಗೂ ಡಿಕೆಶಿ ಭೇಟಿ ಮಾಡಿದ್ದು ನಿಜ, ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರ್ಪಡೆ ಕುರಿತು ಎಲ್ಲೂ ನಾವು ಚರ್ಚೆ ಮಾಡಿಲ್ಲ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಸ್ಪಷ್ಟಪಡಿಸಿದರು. ಜೆಡಿಎಸ್ ಶಾಸಕರಾದ ವೆಂಕಟಶಿವಾರೆಡ್ಡಿ ಹಾಗೂ ಸಮೃದ್ದಿ ಮಂಜುನಾಥ್ ಕಾಂಗ್ರೆಸ್ ಸೇರುತ್ತಾರೆ ಅಂತ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಕುರಿತು ಇಬ್ಬರೂ ಜೆಡಿಎಸ್ ಶಾಸಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕ್ಷೇತ್ರದ ಕೆಲಸಗಳ ಬಗ್ಗೆ ಸಚಿವ ಕೆ.ಎಚ್.ಮುನಿಯಪ್ಪ ಸಹ ಸ್ಪಂದಿಸುತ್ತಿದ್ದು, ನಾವು ಜೆಡಿಎಸ್‌ನಲ್ಲಿ ನೆಮ್ಮದಿಯಾಗಿದ್ದೇವೆ, ದೇವರಾಣೆ ಪಕ್ಷ ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಅಭಿವೃದ್ಧಿ ವಿಚಾರವಾಗಿ ನಾವು ಸಿಎಂ ಭೇಟಿ ಮಾಡಿದ್ದು ನಿಜ, ನಮಗೆ ಜೆಡಿಎಸ್ ಬಿಡುವ ಕರ್ಮ ಬಂದಿಲ್ಲ, ಕಾಂಗ್ರೆಸ್ ಶಾಸಕರ ಹೇಳಿಕೆಗಳಿಗೆ ನಾನು ಸ್ವಾಗತ ಮಾಡುತ್ತೇವಾದರೂ ಜೆಡಿಎಸ್ ತೊರೆಯುವ ಅನಿವಾರ್ಯತೆ ನಮಗಿಲ್ಲ ಎಂದರು. ಜನರು ೫ ವರ್ಷಕ್ಕೆ ಆಯ್ಕೆ ಮಾಡಿದ್ದು ನಮಗೂ ರಮೇಶ್ ಕುಮಾರ್‌ಗೂ ಅಷ್ಟೊಂದು ವಿಶ್ವಾಸವಿಲ್ಲ, ನಮ್ಮ ಮನೆ ಬಿಟ್ಟು ಕಾಂಗ್ರೆಸ್ ಸೇರುವ ಅನಿವಾರ್ಯತೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಗುಜರಾತ್‌ ಸಿಎಂ ಆಗಿದ್ದಾಗ ಮೋದಿ ಮಾಡಿದ್ದ ಟ್ವೀಟ್‌ ನೆನಪಿಸಿ ಸಿದ್ದರಾಮಯ್ಯ ಕಿಡಿ

ಅನುದಾನ ಕೇಳಿದ್ದು ತಪ್ಪೇ: ಶಾಸಕ ಸಮೃದ್ಧಿ ಮಂಜುನಾಥ್‌ ಮಾತನಾಡಿ, ಸಿಎಂರನ್ನು ಅನುದಾನ ಕೇಳೋಕೆ ಭೇಟಿ ಮಾಡೋದು ತಪ್ಪು ಅನ್ನುವುದಾದರೆ ಸಿದ್ದರಾಮಯ್ಯ ಅವರು ಹೇಳಲಿ, ಜೆಡಿಎಸ್ "ಬಿ" ಫಾರಂ ನೀಡಿ ನನ್ನ ಗೆಲ್ಲಿಸಿದೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರೋದು ಸತ್ಯಕ್ಕೆ ದೂರವಾದ ವಿಚಾರ ಎಂದು ಮುಳಬಾಗಿಲಿನ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸ್ಪಷ್ಪಪಡಿಸಿದರು. ಮಾಜಿ ಶಾಸಕ ರಮೇಶ್ ಕುಮಾರ್ ಸೋತು ತೋಟದಲ್ಲಿ ಕುಳಿತು ಈ ಸ್ಕೆಚ್ ಹಾಕಿದ್ದಾರೆ, ಜನರಿಗೆ ತಪ್ಪು ಸಂದೇಶ ಹೊರಡಿಸೋದು ತಪ್ಪು, ಜೆಡಿಎಸ್‌ನಿಂದ ಎಂಪಿ ಸ್ಪರ್ಧೆಗೆ ಆಫರ್ ಇದ್ದರೂ ನಾನಿನ್ನೂ ಫೈನಲ್ ಮಾಡಿಲ್ಲ, ನಾನು ಪಕ್ಷ ಬಿಡುವ ತೀರ್ಮಾನ ಮಾಡಿಲ್ಲ, ಕಷ್ಟ ಸುಖ ಏನೇ ಇದ್ದರೂ ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಕೊತ್ತೂರು ಮಂಜುನಾಥ್ ಹೇಳಿಕೆ ಹಿಂದೆ ಯಾರು ಇದ್ದಾರೆ ಅಂತ ಗೊತ್ತಾಗಬೇಕಿದೆ ಎಂದರು. ಸಿಎಂ ಹಾಗೂ ಡಿಕೆಶಿ ಸಹ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ನನಗೆ ಆಹ್ವಾನ ನೀಡಿದ್ದಾರೆ, ಜನ ೩೦ ಸಾವಿರ ಮತಗಳಿಂದ ತಮ್ಮನ್ನು ಗೆಲ್ಲಿಸಿರುವಾಗ ಬೇರೆ ಪಕ್ಷಕ್ಕೆ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

click me!