
ಬೆಂಗಳೂರು (ಜೂ.26): ರಾಜ್ಯದ 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ನೆಲಮಂಗಲದ ಕ್ಷೇಮವನದಲ್ಲಿ ಏರ್ಪಸಿರುವ ಮೂರು ದಿನಗಳ ತರಬೇತಿ ಶಿಬಿರವನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ತೀವ್ರ ವಿರೋಧದ ಬೆನ್ನಲ್ಲೇ ಶಿಬಿರದ ಆಮಂತ್ರಣ ಪತ್ರದಿಂದ ಆರ್ಚ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಹಾಗೂ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರಿಬ್ಬರ ಹೆಸರನ್ನು ಕೈ ಬಿಡಲಾಗಿದೆ.
ಉಪನ್ಯಾಸಕರಾಗಿ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ ಎಂಬ ಕಾರಣಕ್ಕೆ ಶಿಬಿರದ ಬಗ್ಗೆ ತೀವ್ರ ಪರ-ವಿರೋಧ ಚರ್ಚೆ ವ್ಯಕ್ತವಾಗಿತ್ತು. ಹೀಗಾಗಿ ಈ ಇಬ್ಬರನ್ನು ಕೈ ಬಿಟ್ಟಿದ್ದು ಉಳಿದಂತೆ ರಾಜ್ಯಸಭೆ ಸದಸ್ಯರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಬ್ರಹ್ಮಕುಮಾರಿಸ್ ಸಂಸ್ಥೆಯಿಂದ ಬಿ.ಕೆ. ವೀಣಾ ಮತ್ತು ಬಿ.ಕೆ. ಭುವನೇಶ್ವರಿ, ಜಮಾತೆ ಇಸ್ಲಾಮಿ ಹಿಂದ್ನ ಮಹಮ್ಮದ್ ಕುಂಇ ಅವರ ಹೆಸರುಗಳನ್ನು ಮುಂದುವರೆಸಲಾಗಿದೆ.
ಬಿಬಿಎಂಪಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹೆಚ್ಚಳಕ್ಕೆ ತಜ್ಞರಿಗೆ ಮೊರೆ
ಚಟುವಟಿಕೆಯ ವೇಳಾಪಟ್ಟಿ: ಸೋಮವಾರ ಬೆಳಗ್ಗೆ 6 ರಿಂದ 9.30ಗಂಟೆವರೆಗೆ ದೈಹಿಕ ಆರೋಗ್ಯಕ್ಕಾಗಿ ಚಟುವಟಿಕೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಚಿವ ಎಚ್.ಕೆ. ಪಾಟೀಲ್ ಅವರಿಂದ ‘ಸದನದಲ್ಲಿ ಸದಸ್ಯರ ಭಾಗವಹಿಸುವಿಕೆ, ಕೌಶಲ್ಯವನ್ನು ವೃದ್ಧಿಸಿಕೊಳ್ಳುವುದು, ಅಧಿವೇಶನದ ವಿವರ, ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ’ ಬಗ್ಗೆ ಉಪನ್ಯಾಸ ಇರಲಿದೆ.
ಬಳಿಕ ಕೃಷ್ಣ ಬೈರೇಗೌಡ ಅವರಿಂದ ‘ಸದನದಲ್ಲಿ ಸದಸ್ಯರ ಭಾಗವಹಿಸುವಿಕೆಯ ಕೌಶಲ್ಯ ವೃದ್ಧಿ’ ಹಾಗೂ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅವರಿಂದ ‘ರಾಜ್ಯಪಾಲರ ಭಾಷಣ ಹಾಗೂ ಆಯವ್ಯಯ ಭಾಷಣ ಪ್ರಕ್ರಿಯೆ’ ಕುರಿತು ಉಪನ್ಯಾಸ ಇರಲಿದೆ. ಸಂಜೆ 6 ರಿಂದ 7 ಗಂಟೆವರೆಗೆ ಬ್ರಹ್ಮಕುಮಾರಿಸ್ ಸಂಸ್ಥೆಯ ಬಿ.ಕೆ. ವೀಣಾ ಮತ್ತು ಬಿ.ಕೆ. ಭುವನೇಶ್ವರಿ ಅವರಿಂದ ಹಿತವಚನ, ರಾತ್ರಿ 7 ರಿಂದ 8 ಗಂಟೆವರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಂವಾದ ನಡೆಯಲಿದೆ.
ನಾಳೆಯ ವೇಳಾಪಟ್ಟಿ: ಬೆಳಗ್ಗೆ 10 ರಿಂದ 11.30ರವರೆಗೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ‘ಶಾಸನ ರಚನೆ ಪ್ರಕ್ರಿಯೆ, ಭಾಗವಹಿಸುವಿಕೆ’ ಬಗ್ಗೆ, ಬಳಿಕ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರಿಂದ ‘ಶಾಸಕರ ಕರ್ತವ್ಯ, ಹಕ್ಕುಬಾಧ್ಯತೆಗಳು’ ಕುರಿತು ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 2.15 ರಿಂದ ಮಾಜಿ ಸಂಸದ ಹಾಗೂ ಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಅವರಿಂದ ‘ಸದಸ್ಯರು ಅಳವಡಿಸಿಕೊಳ್ಳಬೇಕಾದ ನೀತಿ ನಿಯಮ, ಜನಮೆಚ್ಚುವ ಶಾಸಕರಾಗುವುದು ಹೇಗೆ?’ ಎಂಬ ಬಗ್ಗೆ ಹಾಗೂ ಸಂಜೆ 4 ಗಂಟೆಗೆ ‘ಸಾಮರಸ್ಯ ಸಮಾಜ, ಅಭಿವೃದ್ಧಿ ಕರ್ನಾಟಕ, ಬಲಿಷ್ಠ ಭಾರತ ನಿರ್ಮಾಣದಲ್ಲಿ ಶಾಸಕರ ಪಾತ್ರ’ ಎಂಬ ವಿಷಯದ ಬಗ್ಗೆ ಡಾ.ವೀರೇಂದ್ರ ಹೆಗ್ಗಡೆ ಅವರಿಂದ ಉಪನ್ಯಾಸ ಇರಲಿದೆ. ಸಂಜೆ 6.30 ರಿಂದ 8 ಗಂಟೆವರೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂವಾದ ನಡೆಯಲಿದ್ದು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಧಮ್ ಇದ್ರೆ 15 ಕೆ.ಜಿ. ಅಕ್ಕಿ ಕೊಡಿ: ಸಿದ್ದುಗೆ ಸವಾಲ್ ಹಾಕಿದ ಮಾಜಿ ಸಿಎಂ ಬೊಮ್ಮಾಯಿ
ನಾಡಿದ್ದು ಏನೇನು?: ಬೆಳಗ್ಗೆ 10 ಗಂಟೆಯಿಂದ ‘ವಿಧಾನಮಂಡಲದ ಸಮಿತಿಗಳ’ ಕುರಿತು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ, ‘ಜನಪ್ರತಿನಿಧಿ ಹಾಗೂ ಜನರ ನಡುವಿನ ಸಂಬಂಧ, ಬಾಂಧವ್ಯ ವೃದ್ಧಿ’ ಕುರಿತು ಮಹಮ್ಮದ್ ಕುಂಇ, ಮಧ್ಯಾಹ್ನ 2.15ರವರೆಗೆ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಅವರಿಂದ ‘ಶಾಸನಸಭೆಯಲ್ಲಿ ಕರ್ತವ್ಯ ಹಾಸ್ಯಭರಿತ ನಿರ್ವಹಣೆ’ ಕುರಿತು ಉಪನ್ಯಾಸ ನಡೆಯಲಿದೆ. ಸಂಜೆ 5.30ಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜತೆ ಸಂವಾದ ನಡೆಯಲಿದ್ದು ಬಳಿಕ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.