ಸಂಸದರಿಗೆ ಟಿಕೆಟ್‌: ಗೊಂದಲ ಇತ್ಯರ್ಥಕ್ಕೆ ಸದಾನಂದಗೌಡ ಆಗ್ರಹ

By Kannadaprabha NewsFirst Published Jun 7, 2023, 6:02 AM IST
Highlights

ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಾಲಿ ಸಂಸದರಿಗೆ ಟಿಕೆಟ್‌ ನೀಡುವ ಬಗ್ಗೆ ಉದ್ಭವಿಸಿರುವ ಗೊಂದಲ ಮತ್ತು ಅನುಮಾನಗಳಿಗೆ ಪಕ್ಷದ ವರಿಷ್ಠರು ತೆರೆ ಎಳೆಯಬೇಕು ಎಂದು ಬಿಜೆಪಿ ಸಂಸದರೂ ಆಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಒತ್ತಾಯಿಸಿದ್ದಾರೆ. 
 

ಬೆಂಗಳೂರು (ಜೂ.07): ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಾಲಿ ಸಂಸದರಿಗೆ ಟಿಕೆಟ್‌ ನೀಡುವ ಬಗ್ಗೆ ಉದ್ಭವಿಸಿರುವ ಗೊಂದಲ ಮತ್ತು ಅನುಮಾನಗಳಿಗೆ ಪಕ್ಷದ ವರಿಷ್ಠರು ತೆರೆ ಎಳೆಯಬೇಕು ಎಂದು ಬಿಜೆಪಿ ಸಂಸದರೂ ಆಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಒತ್ತಾಯಿಸಿದ್ದಾರೆ. ಪಕ್ಷದ ಹಿರಿಯರ ಸೂಚನೆಯಂತೆ ಈ ಷಡ್ಯಂತ್ರ ನಡೆಯುತ್ತಿದೆಯೇ ಎಂದೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಸೋಲಿನ ಸಂದರ್ಭದಲ್ಲಿ ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. 

ಗೌರವದಿಂದ ಜನಪ್ರತಿನಿಧಿಯಾಗಿ ಕೆಲಸ ಮಾಡುವವರನ್ನು ಅವನು ಜನಪ್ರತಿನಿಧಿಯಾಗಿರುವುದಕ್ಕೆ ನಾಲಾಯಕ್ಕು, ಆತ ಆಯೋಗ್ಯ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವುದು ಬಹಳ ಬೇಸರದ ಸಂಗತಿ ಎಂದರು. ಯಾಕಾಗಿ ಈ ರೀತಿ ಮಾಡುತ್ತಾರೆ ಅಂತ ಗೊತ್ತಿಲ್ಲ. ಬಿಜೆಪಿಯನ್ನು ರಾಜ್ಯದಲ್ಲಿ ಪೂರ್ತಿ ಮುಗಿಸಬೇಕೆನ್ನುವ ಹುನ್ನಾರವೋ ಗೊತ್ತಿಲ್ಲ. ಹಿಂದೆ ಯಾರಿದ್ದಾರೆ ಎನ್ನುವ ಮಾಹಿತಿಯೂ ಇಲ್ಲ. ರಾಜ್ಯದ 13 ಜನ ಹಾಲಿ ಸಂಸದರಿಗೆ ಟಿಕೆಟ್‌ ಇಲ್ಲ, ಕೆಲವರು ಮುದುಕರಾಗಿದ್ದಾರೆ, ಕೆಲವರು ಅನಾರೋಗ್ಯಪೀಡಿತರು ಇತ್ಯಾದಿ ಹಣೆಪಟ್ಟಿಯನ್ನು ಕಟ್ಟಿಅವರ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯ ಅಂತ ನಾನು ಭಾವಿಸುತ್ತೇನೆ. 

ಬಾಡಿಗೆ ಮನೆಗಳಿಗೂ ಉಚಿತ ವಿದ್ಯುತ್‌: ಗೊಂದಲಕ್ಕೆ ತೆರೆ ಎಳೆದ ಸಿದ್ದು, ಇಂಧನ ಸಚಿವ ಜಾರ್ಜ್‌

ಈ ಎಂಪಿಗಳು ಮನೆಯಿಂದ ಹೊರಡದಂತಾಗುತ್ತಿದೆ. ಇದೇ ಪ್ರಶ್ನೆಗಳು ಹಾಗೂ ಹಿಂದಿನಿಂದ ನೂರಾರು ಮಾತುಗಳು ಮುಂದಿನ ಒಂದು ವರ್ಷದ ಕಾಲ ಕರ್ತವ್ಯ ನಿರ್ವಹಣೆ ಮಾಡಲಾರದಷ್ಟುಅಸಹಾಯಕತೆಗೆ ತಳ್ಳುತ್ತವೆ ಎಂದು ಹೇಳಿದರು. ಈ ಎಲ್ಲ ಸಂಸದರು ಗೌರವಾನ್ವಿತರು, ಸಜ್ಜನರು. ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಹಲವಾರು ಬಾರಿ ಗೆದ್ದವರು. ಘಟಾನುಘಟಿಗಳನ್ನು ಸೋಲಿಸಿದವರು. ಮುಂದೆಯೂ ರಾಜಕಾರಣದ ಎಲ್ಲಾ ಸವಾಲುಗಳನ್ನು ಎದುರಿಸಬಲ್ಲವರು. ಈ ಮಹನೀಯರ ತೇಜೋವಧೆ ಮಾಡುವಂತಹ ಪ್ರವೃತ್ತಿ ಸರ್ವಥಾ ಸಾಧುವಲ್ಲ.

ನಿಮ್ಮ ಪಕ್ಷದವರೇ ಇದರ ಹಿಂದಿದ್ದಾರೆ ಅಂತ ಕೂಡ ಜನ ಮಾತನಾಡುತ್ತಾರೆ. ಯಾವ ಕಡೆಯಿಂದ ಬೀಸಿದ ಗಾಳಿಗೆ ಈ ತರಗೆಲೆಗಳು ಅಲ್ಲಾಡುತ್ತವೆಯೋ ಗೊತ್ತಿಲ್ಲ. ಇದು ಪಕ್ಷವನ್ನು ಅಧಃಪತನಕ್ಕೆ ತಳ್ಳುವಂತಹ ಷಡ್ಯಂತ್ರ ಅಂತ ನಾನು ಭಾವಿಸುತ್ತೇನೆ. ನನ್ನ ಪಕ್ಷದ ಹಿರಿಯರಲ್ಲಿ ವಿನಂತಿಸುತ್ತೇನೆ- ತಕ್ಷಣ ಇದರ ಬಗ್ಗೆ ಗಮನಹರಿಸಿ ಇನ್ನಷ್ಟುಪಕ್ಷಕ್ಕೆ ಹಾನಿ ಆಗುವುದನ್ನು ನಿಲ್ಲಿಸಬೇಕು ಎಂದರು. ಇವತ್ತು ನಾನು ಸಂತೃಪ್ತ ರಾಜಕಾರಣಿ. ನನ್ನ ತೇಜೋವಧೆಗೆ ಈ ಹಿಂದೆಯೂ ಮೂರು ಬಾರಿ ಪ್ರಯತ್ನಿಸಲಾಗಿದೆ. ಆದರೆ ನಮ್ಮ ಬೆನ್ನ ಹಿಂದೆ ನಮ್ಮವರೇ ಇದ್ದಾರೆ ಅಂತ ಅನುಮಾನ ಮೂಡಿದೆ. 

ಜನರ ಆಶೋತ್ತರಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ: ಸಿಎಂ ಸಿದ್ದರಾಮಯ್ಯ

ನಮ್ಮ ಪಕ್ಷವನ್ನು ಸಂಪೂರ್ಣ ನೆಲಸಮ ಮಾಡುವ ಈ ಪ್ರಯತ್ನ ಅತ್ಯಂತ ಕೀಳುಮಟ್ಟದ್ದು. 13 ಜನ ಸಂಸದರು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದು ಪಕ್ಷದ ಆಯ್ಕೆಯಲ್ಲವೇ? ಅವರು ಈಗ ಪಕ್ಷದ ಸಂಸದರಲ್ಲವೇ? ಪಕ್ಷದ ಹಿರಿಯರ ಸೂಚನೆಯಂತೆ ಈ ಷಡ್ಯಂತ್ರ ನಡೆಯುತ್ತಿದೆಯೇ? ವರಿಷ್ಠರ ಮೌನ ಕಾರ್ಯಕರ್ತರನ್ನು ನಿಷ್ಕಿ್ರಯ ಮಾಡುತ್ತಿಲ್ಲವೇ? ಪಕ್ಷದ ಆಂತರಿಕ ಕದನದ ಪರಿಣಾಮವೇ? ಇದರ ಹಿಂದಿರುವ ವ್ಯಕ್ತಿಗಳು ಯಾರು? ಈ ಎಲ್ಲಾ ಸಂಶಯಕ್ಕೆ ತಕ್ಷಣ ತೆರೆ ಎಳೆದು ಕಾರ್ಯಕರ್ತರ ಮನೋಧೈರ್ಯವನ್ನು ಹೆಚ್ಚಿಸುವ ಪ್ರಯತ್ನ ಆಗದಿದ್ದಲ್ಲಿ ಪಕ್ಷದ ಮೇಲೆ ಇನ್ನಷ್ಟುಗಂಭೀರ ಪರಿಣಾಮಗಳಾಗಬಹುದು ಎಂಬುದು ನಿಶ್ಚಯ ಎಂದು ಸದಾನಂದಗೌಡ ಎಚ್ಚರಿಸಿದರು.

click me!