ಮಕ್ಕಳ ಮೊಟ್ಟೆಕದ್ದವರೇ ಈಗ ಸಿದ್ದರಾಮಯ್ಯಗೆ ಎಸೆದಿದ್ದಾರೆ; ಶಿವರಾಜ ತಂಗಡಗಿ

By Kannadaprabha NewsFirst Published Aug 20, 2022, 12:20 PM IST
Highlights

ಮಕ್ಕಳಿಗೆ ನೀಡಬೇಕಾದ ಮೊಟ್ಟೆ ಕದ್ದವರೇ ಈಗ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಲೇವಡಿ ಮಾಡಿದ್ದಾರೆ.

ಕೊಪ್ಪಳ (ಆ.20) : ಮಕ್ಕಳಿಗೆ ನೀಡಬೇಕಾದ ಮೊಟ್ಟೆಕದ್ದವರೇ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎಸೆದಿದ್ದಾರೆ. ಆದರೆ, ಬ್ರಿಟಿಷರ ಗುಂಡಿಗೆ ಹೆದರದ ನಾವು ಮೊಟ್ಟೆಗೆ ಹೆದರುತ್ತೇವಾ? ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಪ್ರಶ್ನಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟೆಲ್ಲಾ ರಾದ್ಧಾಂತವಾಗಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ಮೀನಮೇಷ ಮಾಡುತ್ತಿದೆ. ಆದರೆ, ಪರಿಣಾಮ ನೆಟ್ಟಗೆ ಇರುವುದಿಲ್ಲ. ಮೊಟ್ಟೆಎಸೆಯುವುದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಪ್ರತಿಯಾಗಿ ಕಲ್ಲು ಎಸೆದರೆ ಏನು ಗತಿ ಎಂದು ಎಚ್ಚರಿಕೆ ನೀಡಿದರು.

ಮಹಾತ್ಮ ಗಾಂಧಿಯವರನ್ನು ಕೊಂದವರು ನನ್ನನ್ನ ಬಿಡ್ತಾರಾ? ಸಿದ್ದರಾಮಯ್ಯ ಆತಂಕ!

ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರು ಛೀಮಾರಿ ಹಾಕುತ್ತಿದ್ದಾರೆ. ಕಾಂಗ್ರೆಸ್‌(Congress) ಪರ ಒಲವು ಹೆಚ್ಚುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ. ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಬಿಜೆಪಿಯನ್ನು ಮನೆಗೆ ಕಳುಹಿಸಲು ಜನ ತುದಿಗಾಲ ಮೇಲೆ ನಿಂತಿದ್ದಾರೆ. ಮರಳಿ ಕಲ್ಲು ಎಸೆಯುವುದು ದೊಡ್ಡದಲ್ಲ. ಆದರೆ, ಹಾಗೆ ಮಾಡಬಾರದೆಂದು ಸುಮ್ಮನಿದ್ದೇವೆ ಎಂದರು.

ಕೂಡಲೇ ಈ ರೀತಿ ಮಾಡಿದ ಗೂಂಡಾಗಳನ್ನು ಒಳಗೆ ಹಾಕಿ. ಇಲ್ಲದಿದ್ದರೆ ಬಿಜೆಪಿಯವರಿಗೆ ತತ್ತಿ(ಮೊಟ್ಟೆ) ಎಸೆಯುತ್ತೇವೆ. ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಲು ಹೋದವರ ಮೇಲೆ ಈ ರೀತಿ ಮಾಡುವುದೇ? ಅಷ್ಟಕ್ಕೂ ಜನರಿಗೆ ನ್ಯಾಯ ಕೊಡಿಸಲು ಹೋದ ಸಿದ್ದರಾಮಯ್ಯನವರ ಮೇಲೆ ಮೊಟ್ಟೆಎಸೆಯುತ್ತಾರೆ ಎಂದರೆ ಏನರ್ಥ? ಇದನ್ನು ತಡೆಯಬೇಕಾದ ರಾಜ್ಯ ಸರ್ಕಾರ ಸುಮ್ಮನಿದೆ. ಆಡಳಿತ ನಡೆಸುವುದು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದರು.

ಯಡಿಯೂರಪ್ಪ(B.S.Yadiyurappa) ಅವರು ಒಳ್ಳೆಯವರು. ಆದರೆ, ಅವರ ಮಾತನ್ನು ಬಿಜೆಪಿಯವರು ಕೇಳುತ್ತಿಲ್ಲ. ಬಿಜೆಪಿಯವರು ಗೋಡ್ಸೆ(Godse)ಯನ್ನು ಪೂಜೆ ಮಾಡುವವರು. ಬಿಜೆಪಿ(BJP)ಯವರಿಗೆ ದೇಶಾದ್ಯಂತ ಗೋಬ್ಯಾಕ್‌ ಎನ್ನುವ ಕಾಲ ದೂರವಿಲ್ಲ. ಬಿಜೆಪಿ ಗೂಂಡಾಗಳಿಗೆ, ಅಪ್ಪಚ್ಚುರಂಜನ್‌ಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು. ಕನಕಗಿರಿ ತಾಲೂಕಿನ ಹುಲಿಹೈದರ್‌(Huli heidar) ಗ್ರಾಮದಲ್ಲಿ ಶಾಂತಿ ನೆಲೆಸಬೇಕು. ನಿಷೇಧಾಜ್ಞೆ ಹಿಂಪಡೆದು ಜನರು ಸಹಜ ಜೀವನ ನಡೆಸುವುದಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಶಿವರಾಜ ತಂಗಡಗಿ ಮನವಿ ಮಾಡಿದರು.

ಟೈರ್‌ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದ ಕಾಂಗ್ರೆಸ್ ಕಾರ್ಯಕರ್ತರು; ಪೊಲೀಸರಿಗೂ ಡೋಂಟ್ ಕೇರ್!

ನಾವು ಕಲ್ಲು ಹೊಡೆಯಬಲ್ಲೆವು: ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯವರು 50- 60 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಅದಕ್ಕಾಗಿ ಭ್ರಮನಿರಸನಗೊಂಡು ಹೀಗೆ ಮಾಡುತ್ತಿದ್ದಾರೆ. ಮೊಟ್ಟೆಎಸೆದವರ ಮೇಲೆ ನಮಗೇನು ಕಲ್ಲು ಹೊಡೆಯಲು (ಎಸೆಯಲು) ಬರುವುದಿಲ್ಲವೇ ? ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದರು. ಮೊಟ್ಟೆಎಸೆದ ಪ್ರಕರಣವನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿದೆ. ಸಿದ್ದರಾಮಯ್ಯ ಅವರಿಗೆ ಮೊಟ್ಟೆಎಸೆದಿರುವುದನ್ನು ವಿರೋಧಿಸಿ ಆ. 26ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಅಪ್ಪಚ್ಚುರಂಜನ್‌(Appachhu Ranjan) ಬಚ್ಚಾ ಇದ್ದಂತೆ. ಸಿದ್ದರಾಮಯ್ಯ(Siddaramaiah)ನವರ ಕುರಿತು ಏನು ಮಾತನಾಡುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ ಜನಾರ್ದನರೆಡ್ಡಿ ಅವರು ಗಡಿಪಾರು ಆಗಿರುವುದು ಗೊತ್ತಿಲ್ಲವೇ? ಈ ಅಪ್ಪಚ್ಚುರಂಜನ್‌ ಯಾವ ಲೆಕ್ಕ ಎಂದರು. ಸಿದ್ದರಾಮಯ್ಯ ಅವರು ಸಾವರ್ಕರ್‌ ಅವರ ಇತಿಹಾಸ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ರಾಜಕೀಯ ನಾಯಕರಿಗೆ ಈ ರೀತಿ ಅಗೌರವ ಮಾಡಬಾರದು. ಕೆ.ಎಸ್‌. ಈಶ್ವರಪ್ಪ ಸೇರಿ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಜಿಲ್ಲಾ ವಕ್ತಾರ ರವಿ ಕುರುಗೋಡ ಇದ್ದರು.

click me!