ಮೋದಿ ಹ್ಯಾಟ್ರಿಕ್ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ: ಸಂಸದ ಮುನಿಸ್ವಾಮಿ ಭವಿಷ್ಯ

By Kannadaprabha NewsFirst Published Dec 29, 2023, 8:11 PM IST
Highlights

ಪ್ರಧಾನಿ ಮೋದಿ ಕಳೆದ ಹತ್ತು ವರ್ಷಗಳಿಂದ ದೇಶದ ಜನರ ಒಳಿತಿಗಾಗಿ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಕಾರ‍್ಯಕರ್ತರು ಜನಸಾಮಾನ್ಯರಿಗೆ ಅರಿವು ಮೂಡಿಸದಿದ್ದರೆ ಕೆಲ ರಾಜಕಾರಣಿಗಳು ಅದನ್ನು ದುರ್ಬಳಕೆ ಮಾಡಿಕೊಂಡು ಮತ್ತಷ್ಟು ಶ್ರೀಮಂತರಾಗುತ್ತಾರೆಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಬಂಗಾರಪೇಟೆ (ಡಿ.29): ಪ್ರಧಾನಿ ಮೋದಿ ಕಳೆದ ಹತ್ತು ವರ್ಷಗಳಿಂದ ದೇಶದ ಜನರ ಒಳಿತಿಗಾಗಿ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಕಾರ‍್ಯಕರ್ತರು ಜನಸಾಮಾನ್ಯರಿಗೆ ಅರಿವು ಮೂಡಿಸದಿದ್ದರೆ ಕೆಲ ರಾಜಕಾರಣಿಗಳು ಅದನ್ನು ದುರ್ಬಳಕೆ ಮಾಡಿಕೊಂಡು ಮತ್ತಷ್ಟು ಶ್ರೀಮಂತರಾಗುತ್ತಾರೆಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು. ಅವರು ತಾಲೂಕಿನ ಕಾಮಸಮುದ್ರ ಮತ್ತು ದೋಣಿಮಡಗು ಗ್ರಾಮ ಪಂಚಾಯ್ತಿಗಳಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಹತ್ತು ವರ್ಷಗಳಿಂದ ಪ್ರಧಾನಿಯಾಗಿ ಮೋದಿ ಇಡೀ ವಿಶ್ವವೇ ಮೆಚ್ಚುವಂತ ಕೆಲಸಗಳನ್ನು ಮಾಡಿದ್ದಾರೆ ಎಂದರು.

ದೇಶ ಕಾಯುವ ಕೆಲಸ: ಆದರೆ ನಮ್ಮ ದೇಶದೊಳಗಿನ ಕೆಲವರು ಅವರನ್ನು ವಿರೋಧಿಸುತ್ತಿರುವುದರಲ್ಲಿ ಅರ್ಥವಿಲ್ಲ. ಎಂಥ ಕ್ಲಿಷ್ಟಕರ ಸಮಯದಲ್ಲಿಯೂ ವಿಚಲಿತರಾಗದೆ ದೇಶ ಕಾಯುವ ಕೆಲಸ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ಸ್ವದೇಶಿ ಔಷಧಿ ಕಂಡು ಹಿಡಿದು ದೇಶದ ಜನರನ್ನು ರಕ್ಷಣೆ ಮಾಡಿದ್ದಲ್ಲದೆ, ಬೇರೆ ದೇಶಗಳಿಗೂ ಉಚಿತವಾಗಿ ಔಷಧಿಗಳನ್ನು ನೀಡಿ ಆದರ್ಶ ಪ್ರಧಾನಿಯಾದರು. ಹತ್ತು ವರ್ಷಗಳ ಆಡಳಿತದಲ್ಲಿ ಎಲ್ಲಾ ವರ್ಗದ ಜನರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಯೋಜನೆಗಳನ್ನು ರೂಪಿಸಿದ್ದಾರೆ, ಇದರ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸಲು ವಿಕಸಿತ ಸಂಕಲ್ಪ ಯಾತ್ರೆ ಬಂದರೆ ಈ ಕಾರ‍್ಯಕ್ರಮಕ್ಕೆ ಯಾರೂ ಹೋಗದಂತೆ ಕೆಲವರು ತಡೆಯುವ ಹುನ್ನಾರ ಮಾಡಿದ್ದಾರೆ, ಜನರು ಯಾರಿಗೂ ಹೆದರದೆ ದೇಶಕ್ಕಾಗಿ ಮತ್ತೊಮ್ಮೆ ಮೋದಿಯಲರನ್ನು ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು.

Latest Videos

ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಬಿಜೆಪಿಯನ್ನು ಗೆಲ್ಲಿಸಿ: ಸಂಸದ ಮುನಿಸ್ವಾಮಿ

ಮೋದಿ ಹ್ಯಾಟ್ರಿಕ್‌: ಮೋದಿ ಹ್ಯಾಟ್ರಿಕ್ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು. ಪ್ರಧಾನಿ ಮೋದಿ ಬಡತನದಿಂದ ಬಂದವರು ಅವರಿಗೆ ಬಡವರ ಕಷ್ಟ ಸ್ಪಷ್ಟವಾಗಿ ಅರಿವಿದೆ, ಅದರ ಫಲವಾಗಿಯೇ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಆಯುಷ್ಮಾನ್ ಭಾರತ್ ಯೋಜನೆ ತಂದರು, ಕೊರೋನಾ ಸಮಯದಲ್ಲಿ ಎರಡು ವರ್ಷ ಉಚಿತವಾಗಿ ಪ್ರತಿಯೊಬ್ಬರಿಗೂ ೧೦ಕೆಜಿ ಅಕ್ಕಿ ನೀಡಿದರು, ಈಗಲೂ ಉಚಿತವಾಗಿ ೫ ಕೆಜಿ ಕೊಡುತ್ತಿದ್ದಾರೆ, ಆದರೆ ಹತ್ತು ಕೆಜಿ ಅಕ್ಕಿ ಉಚಿತವಾಗಿ ಕೊಡುವುದಾಗಿ ಅಧಿಕಾರಕ್ಕೆ ಬಂದವರು ವಂಚಿಸಿದಂತಲ್ಲ ಮೋದಿ ಯೋಜನೆಗಳು, ಮನೆ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಜಿಲ್ಲೆಗೆ ೧೮೮೦ ಕೋಟಿ ರು. ಬಿಡುಗಡೆ ಮಾಡಿದ್ದಾರೆ ಎಂದು ಸಂಸದರು ವಿವರಿಸಿದರು.

ಸಿಎಂ ಸಿದ್ದರಾಮಯ್ಯ ಕೆಡಿಪಿ ಸಭೆ ಮ್ಯಾಚ್ ಫಿಕ್ಸಿಂಗ್: ಸಂಸದ ಮುನಿಸ್ವಾಮಿ

ರೈಲು ನಿಲ್ದಾಣ ಮೇಲ್ದರ್ಜೆಗೆ: ಪಟ್ಟಣದ ರೈಲ್ವೆ ಸ್ಟೇಷನ್ ಮೇಲ್ದರ್ಜೆಗೆ ೭೦ ಕೋಟಿ ರು. ಮಂಜೂರಾಗಿದೆ, ಕಾಮಸಮುದ್ರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ ನಡೆಯುತ್ತಿದೆ. ಪಕ್ಷದ ಕಾರ‍್ಯಕರ್ತರು ಕೇಂದ್ರ ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಿಳಿಯುವಂತೆ ಮಾಡಿ ಮತ್ತೆ ಮೋದಿಯವರನ್ನು ಪ್ರಧಾನಿಯಾಗಿ ಮಾಡಲು ಶ್ರಮಿಸಬೇಕೆಂದು ಹೇಳಿದರು. ಸಭೆಯಲ್ಲಿ ಕೆ. ಚಂದ್ರಾರೆಡ್ಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ. ಮಹೇಶ್, ಪುರಸಭೆ ಸದಸ್ಯ ಕಪಾಲಿಶಂಕರ್, ಹೊಸರಾಯಪ್ಪ, ಜೆಸಿಬಿ ನಾರಾಯಣಪ್ಪ, ಮಾರ್ಕಂಡೇಗೌಡ, ಬತ್ತಲಹಳ್ಳಿ ಮಂಜುನಾಥ್, ತಿಪ್ಪಾರೆಡ್ಡಿ, ಭೂ ಬ್ಯಾಂಕಿನ ನಿರ್ದೇಶಕ ಶಶಿಧರರೆಡ್ಡಿ, ವೆಂಕಟೇಶ್ ಮತ್ತಿತರರು ಇದ್ದರು.

click me!