ಕಾಂಗ್ರೆಸ್‌ನಲ್ಲಿ ಜಾತಿ ಆಧಾರಿತ ಸಿಎಂ ಆಯ್ಕೆ ಇಲ್ಲ: ಡಾ.ಜಿ.ಪರಮೇಶ್ವರ್‌

By Govindaraj SFirst Published Dec 19, 2022, 10:59 PM IST
Highlights

ಜಾತಿ ಆಧಾರಿತ ಮುಖ್ಯಮಂತ್ರಿ ಆಯ್ಕೆಯನ್ನು ಕಾಂಗ್ರೆಸ್‌ ಪಕ್ಷದಲ್ಲಿ ಎಂದೂ ಮಾಡುವುದಿಲ್ಲ. ಆ ಸಂದರ್ಭದಲ್ಲಿ ಯಾರು ಸಮರ್ಥರು ಅನ್ನುವುದನ್ನು ನೋಡಿ ಪಕ್ಷ ತೀರ್ಮಾನಿಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು. 

ಬಾಗಲಕೋಟೆ (ಡಿ.19): ಜಾತಿ ಆಧಾರಿತ ಮುಖ್ಯಮಂತ್ರಿ ಆಯ್ಕೆಯನ್ನು ಕಾಂಗ್ರೆಸ್‌ ಪಕ್ಷದಲ್ಲಿ ಎಂದೂ ಮಾಡುವುದಿಲ್ಲ. ಆ ಸಂದರ್ಭದಲ್ಲಿ ಯಾರು ಸಮರ್ಥರು ಅನ್ನುವುದನ್ನು ನೋಡಿ ಪಕ್ಷ ತೀರ್ಮಾನಿಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಲ್ಲಿ ಮೊದಲಿನಿಂದಲೂ ಮುಖ್ಯಮಂತ್ರಿಗಳ ಆಯ್ಕೆಗೆ ಸಂಪ್ರದಾಯ ಮತ್ತು ಪದ್ಧತಿ ಇದೆ. ಪಕ್ಷ ಅದನ್ನು ಪಾಲಿಸಿಕೊಂಡು ಬರಲಿದ್ದು, ಎಂದೂ ಯಾವ ರಾಜ್ಯದಲ್ಲಿಯೂ ಜಾತಿ ಆಧಾರಿತವಾಗಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ. 

ಕೆಲವರು ಹೋದಲ್ಲೆಲ್ಲಾ ಆಯಾ ಸಮುದಾಯದ ನಾಯಕರೇ ಮುಖ್ಯಮಂತ್ರಿ ಆಗಲಿ ಎನ್ನುತ್ತಾರೆ. ಅದನ್ನು ನಾವು ಮನ್ನಿಸಲು ಸಾಧ್ಯವಿಲ್ಲ ಎಂದರು. ಪಕ್ಷದಲ್ಲಿ ಟಿಕೆಟ್‌ ಘೋಷಣೆಯನ್ನು ಯಾರೂ ಮಾಡುತ್ತಿಲ್ಲ. ಬದಲಾಗಿ ಸಿದ್ದರಾಮಯ್ಯ ಸೇರಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಭ್ಯರ್ಥಿ ಕುರಿತು ಅಭಿಮಾನದ ಮಾತುಗಳನ್ನು ಆಡಿದಾಗ ಮತ್ತು ಪ್ರಸ್ತುತ ಶಾಸಕರಿರುವ ಸಂದರ್ಭದಲ್ಲಿ ನೋಡುವ ಮಾತುಗಳನ್ನು ಆಡಿರುತ್ತಾರೆ. ಆದರೆ, ಪಕ್ಷದ ಕೇಂದ್ರ ಚುನಾವಣಾ ಸಮಿತಿ ತೀರ್ಮಾನವೇ ಅಂತಿಮ ಎಂದರು. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. 

ಅದೃಷ್ಟವಿದ್ದರೆ ಮುಂದಿನ ಸಲ ಸಿಎಂ ಆಗುವೆ: ಡಾ.ಜಿ.ಪರಮೇಶ್ವರ್‌

ಆಡಳಿತ ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕರದ 40 ಪರ್ಸೆಂಟೇಜ್‌ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದರೂ ಅವರು ಮೌನವಾಗಿದ್ದಾರೆ ಎಂದು ದೂರಿದರು. ವಿಧಾನಸೌಧದಲ್ಲಿ ಸಾವರ್ಕರ್‌ ಅವರ ಭಾವಚಿತ್ರದ ಅನಾವರಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಿ.ಪರಮೇಶ್ವರ, ವಿವಾದಗಳನ್ನು ಹುಟ್ಟುಹಾಕುವುದು ಬಿಜೆಪಿ ಸ್ವಭಾವ. ಸದನ ಎಲ್ಲ ಪಕ್ಷಗಳಿಗೂ, ಎಲ್ಲ ಜನ ಸಮುದಾಯಕ್ಕೆ ಸೇರಿದ್ದು ಎಂದು ತಿಳಿದಿದ್ದರೂ ಸಹ ಏಕಾಏಕಿ ತೀರ್ಮಾನ ತೆಗೆದುಕೊಂಡು ವಿವಾದ ಹುಟ್ಟುಹಾಕಿದ್ದಾರೆ ಎಂದರು.

ಕಾಂಗ್ರೆಸ್‌ ಹೇಳಿಕೆಗಳನ್ನು ಬೇರೆ ರೀತಿ ಅರ್ಥೈಸುತ್ತೆ ಬಿಜೆಪಿ: ಡಿಕೆಶಿ ಅವರು ಹೇಳಿರುವ ಕುಕ್ಕರ್‌ಬಾಂಬ್‌ ವಿಷಯವನ್ನು ಬೇರೆ ರೀತಿಗೆ ಅರ್ಥೈಸಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿಕೆಶಿ ಅವರು ಉಗ್ರರನ್ನು ಅಮಾಯಕ ಅಂತ ಹೇಳಿಲ್ಲ. ಅವರು ಹೇಳಿರುವ ಅರ್ಥವೇ ಬೇರೆಯಾಗಿದೆ. ಆದರೆ, ಬಿಜೆಪಿ ಅವರು ಟ್ವಿಸ್ಟ್‌ ಮಾಡಿ ಹೇಳುತ್ತಿದ್ದಾರೆ. ಉಗ್ರರಿಗೆ ಸಪೋರ್ಟ್‌ ಮಾಡ್ತಿದ್ದಾರೆ. ಉಗ್ರರಿಗೆ ಕಾಂಗ್ರೆಸ್‌ ಸಪೋರ್ಟ್‌ ಮಾಡುತ್ತಿದೆ ಎಂದು ಹೇಳುವ ಬಿಜೆಪಿಗೆ ಇದೆಲ್ಲಾ ಚುನಾವಣೆ ಸಂದರ್ಭದಲ್ಲಿ ಅವರ ಸ್ಟ್ರ್ಯಾಟಜಿ. ಬಿಜೆಪಿ ಸ್ಟ್ರ್ಯಾಟಜಿ ಏನೆಂದರೆ, ನಾವು ಹೇಳಿದ್ದನ್ನು ಜನರಿಗೆ ಬೇರೆ ರೀತಿ ತಿಳಿಸುವುದೇ ಅವರ ಜಾಯಮಾನ. ಇದು ನಮಗೇನೂ ಹೊಸದಲ್ಲ. ಬಹಳ ಹಿಂದೆಯೂ ನಾವು ಇದನ್ನು ನೋಡಿದ್ದೇವೆ. ನಮ್ಮ ಹೇಳಿಕೆಯನ್ನೇ ಬೇರೆ ರೀತಿಯಲ್ಲಿ ಅರ್ಥೈಸುವ ಹಾಗೆ ಜನಕ್ಕೆ ಹೇಳುತ್ತಾರೆ. ಅದು ಅವರ ಸ್ಟ್ರ್ಯಾಟಜಿಯಾಗಿದೆ. ಅದರಿಂದ ನಮಗೇನೂ ತೊಂದರೆ ಇಲ್ಲ. ನಾವು ಕೌಂಟರ್‌ ಕೊಡುತ್ತೇವೆ ಎಂದರು.

ನಮ್ಮ ಮುಂದಿರುವ ಸವಾಲಿನ ಬಗ್ಗೆ ಪರಂಗೆ ಗೊತ್ತಿದೆ: ಡಿಕೆಶಿ

ಪ್ರಧಾನಿ ಮಧ್ಯ ಪ್ರವೇಶಿಸಲಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು. ದೇಶದಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಾಗಿದೆ. ಗಡಿಗಳಲ್ಲಿ ಆಯಾ ಭಾಷೆಗಳಲ್ಲಿ ಕೆಲವರು ಮಾತನಾಡುತ್ತಾರೆ. ಹಾಗಂತ ಅದು ಪ್ರಚೋದನೆ ಆಗಬಾರದು. ಹೀಗಾಗಿ, ಪ್ರಧಾನಿ ಮಧ್ಯಪ್ರವೇಶಿಸುವುದು ಅಗತ್ಯವಿದೆ ಎಂದು ಹೇಳಿದರು.

click me!