ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಇದ್ದೇ ಇದೆ: ಜಗದೀಶ್‌ ಶೆಟ್ಟರ್‌

By Kannadaprabha NewsFirst Published Apr 1, 2023, 9:01 PM IST
Highlights

ಸಮೀಕ್ಷೆಗಳು ದಿನದಿಂದ ದಿನಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ. ಹೀಗೆ ಉಳಿಯುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು. 

ಬಾಗಲಕೋಟೆ (ಏ.01): ಸಮೀಕ್ಷೆಗಳು ದಿನದಿಂದ ದಿನಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ. ಹೀಗೆ ಉಳಿಯುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು. ನವನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯ ಸಂಕಲ್ಪ ಯಾತ್ರೆ ನಂತರ ಬಿಜೆಪಿಗೆ ಬಲ ಬಂದಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯ ಹವಾ ಹೆಚ್ಚಿದೆ. ಕಾಂಗ್ರೆಸ್‌ ಪಕ್ಷವು ಶಾಸಕರಿಗೆ ಕರೆ ಮಾಡಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಯಾರೂ ಇವರಿಗೆ ಬಲಿಯಾಗುವುದಿಲ್ಲ. ನಮ್ಮ ಪಕ್ಷವು ಒಗ್ಗಟ್ಟಿನಿಂದ ಕೂಡಿದೆ. ಕಾಂಗ್ರೆಸ್‌ ಪಕ್ಷ ಅವಸಾನದತ್ತ ಹೊರಟಿದೆ. ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್‌ ಧೂಳಿಪಟವಾಗಿದೆ. ಕಾಂಗ್ರೆಸ್‌ ಅಧಿ​ಕಾರಕ್ಕೇರಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ಇದು ಸಾಧ್ಯವಾಗುವುದಿಲ್ಲ ಎಂದರು.

ಸ್ವಂತ ಬಲದ ಮೇಲೆ ಪಕ್ಷ ಅಧಿ​ಕಾರಕ್ಕೆ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರಗೆ ಸೋಲಿನ ಭಯ ಶುರುವಾಗಿದ್ದು, ಬಿಜೆಪಿ ಯಾವ ಪಕ್ಷದೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಸ್ವಂತ ಬಲದ ಮೇಲೆ ಪಕ್ಷವು ಅ​ಧಿಕಾರಕ್ಕೆ ಬರುತ್ತದೆ. ವಿಜಯೇಂದ್ರ ವರುಣಾದಿಂದ ಕಣಕ್ಕೆ ಇಳಿಯುವುದು ಚರ್ಚೆ ನಡೆದಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ: ಸಿಎಂ ಬೊಮ್ಮಾಯಿ ವಿಶ್ವಾಸ

ಬಿಜೆಪಿಗೆ ಹಾನಿಯಿಲ್ಲ: ಬಂಜಾರ ಮತ್ತು ಭೋವಿ ಸಮುದಾಯದವರಿಗೆ ಒಳ ಮೀಸಲಾತಿಗೆ ವಿರೋಧ ವಿಚಾರಕ್ಕೆ ಸಂಬಂ​ಧಿಸಿದಂತೆ, ಒಳ ಮೀಸಲಾತಿ ಕುರಿತು ಕೇವಲ ವಿರೋಧ ಪಕ್ಷದವರು ಗೊಂದಲ ಸೃಷ್ಟಿಮಾಡುತ್ತಿದ್ದಾರೆ. ಬೇರೆ ಬೇರೆ ವರ್ಗಗಳು ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇತ್ತು. ಮುಖ್ಯಮಂತ್ರಿಗಳು ಗಟ್ಟಿನಿರ್ಧಾರ ಮಾಡಿ ಕ್ರಮ ಕೈಗೊಂಡಿದ್ದಾರೆ. ಸೂಕ್ತ ಮಾಹಿತಿ ಜೊತೆಗೆ ಸಮಾಲೋಚನೆ ಮಾಡಬೇಕು. ಬಿಜೆಪಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದರು. ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪುವ ವಿಚಾರವಾಗಿ ಮಾತನಾಡಿದ ಅವರು, ಪಕ್ಷದಲ್ಲಿ ಒಂದು ವ್ಯವಸ್ಥೆ ಇರುತ್ತದೆ. ಕೆಲವೊಬ್ಬರು ತಾವೇ ಟಿಕೆಟ್‌ ಬೇಡ ಎಂದು ಹೇಳುತ್ತಾರೆ. ಕೆಲವು ವರದಿ ಆಧರಿಸಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಪಕ್ಷದ ವರಿಷ್ಠರ ರಾಜಕೀಯ ಲೆಕ್ಕಾಚಾರಕ್ಕೆ ಬಿಟ್ಟವಿಚಾರವಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷದ ವಿರುದ್ಧ ಸ್ಪರ್ಧೆ ಇದ್ದೇ ಇದೆ: ಯಾವುದೇ ಪಕ್ಷವಿರಲಿ ಚುನಾವಣೆ ಎಂದ ಮೇಲೆ ಕಾಂಗ್ರೆಸ್‌ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಇದ್ದೇ ಇರುತ್ತದೆ. ಅದು ಸಿದ್ದರಾಮಯ್ಯ ಇರಬಹುದು, ಡಿ.ಕೆ.ಶಿವಕುಮಾರ ಇರಬಹುದು. ಅವರ ವಿರುದ್ಧವಾಗಲಿ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಲ್ಲೆಲ್ಲಿ ರಾಜ್ಯ ನಾಯಕರು ಸ್ಪರ್ಧೆ ಮಾಡಿರುತ್ತಾರೆ. ಅದು ಸಿದ್ದರಾಮಯ್ಯ ಇದ್ದರೂ ಸ​ರ್ಧೆ ಇರುತ್ತದೆ. ಆ ಸ್ಪರ್ಧೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚರ್ಚೆ ಇರುವುದು ಸಾಮಾನ್ಯ. ಆದರೆ ಆಯಾ ಕ್ಷೇತ್ರವಾರು ಗೆಲವಿಗೆ ನಮ್ಮ ಬಿಜೆಪಿಯೂ ಸ್ಪರ್ಧೆ ಮಾಡುತ್ತದೆ. ಬಿ.ವೈ.ವಿಜಯೆಂದ್ರ ಅವರ ಚುನಾವಣೆಯಲ್ಲಿ ಸ​ರ್ಧೆ ಮಾಡುವುದರ ಬಗ್ಗೆ ಪಕ್ಷದ ಹಿರಿಯರು ತೀರ್ಮಾನ ಮಾಡುತ್ತಾರೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಅಭಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.

ಈ ಸಲ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ: ಜಗದೀಶ್‌ ಶೆಟ್ಟರ್‌ ಅಭಿಮತ

ಮುಗಿದು ಹೋದ ಅಧ್ಯಾಯ: ಈಗಾಗಲೇ ದೇಶ, ರಾಜ್ಯದಲ್ಲಿ ಕಾಂಗ್ರೆಸ್‌ನದ್ದು ಮುಗಿದು ಹೋದ ಅಧ್ಯಾಯ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್‌ನ್ನು ದುರ್ಬಿನ ಹಿಡಿದುಕೊಂಡು ನೋಡುವಂತ ಪರಿಸ್ಥಿತಿ ಇದೆ. ಈಗಾಗಲೇ ಮೇಘಾಲಯ, ನಾಗಾಲ್ಯಾಂಡ್‌, ತ್ರಿಪುರಾದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಧೂಳಿಪಟವಾಗಿದೆ. ಅಲ್ಲಿ ಬಿಜೆಪಿ ಗೆಲವು ಸಾಧಿ​ಸಿ ತಳವೂರಿದೆ. ಆದ್ದರಿಂದ ಕಾಂಗ್ರೆಸ್‌ ರಾಷ್ಟ್ರದಲ್ಲಿ ಮುಳುಗುವ ಹಡಗಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಐಸಿಯುನಲ್ಲಿದೆ. ಅದನ್ನು ಬದುಕಿಸಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರು ಪ್ರಯತ್ನಿಸುತ್ತಿದ್ದಾರೆಂದು ಶಟ್ಟರ ತಿಳಿಸಿದರು.

click me!