
ಅರಸೀಕೆರೆ (ಹಾಸನ) (ಮಾ.06): ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ದುಡ್ಡಿರುವ ಕಾರಣಕ್ಕೆ ಸುಮ್ಮನೆ ಪಂಚರತ್ನ ಯಾತ್ರೆ ಅಂತ ಓಡಾಡುತ್ತಿದ್ದಾರೆ. ಅವರಿಗೆ ಮತ ನೀಡಿದರೆ ವೇಸ್ಟ್ ಆಗುತ್ತೆ, ಅದು ಬಿಜೆಪಿಗೆ ಹೋಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ತಾಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಭಾನುವಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಿ ಬಳಿಕ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಹಿಂದುಳಿದ, ದಲಿತರ, ಶೋಷಿತರ, ಅಲ್ಪಸಂಖ್ಯಾತರ ಪರ ಇಲ್ಲ. ಬಿಜೆಪಿಯವರು ಈವರೆಗೆ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಜೆಡಿಎಸ್ನವರು 123 ಸೀಟ್ ಗೆಲ್ತೇವೆ ಅಂತ ಹೇಳುತ್ತಿದ್ದಾರೆ.
ಅದು ಹೇಗಾಗುತ್ತೆ? ಜೆಡಿಎಸ್ನವರು ಗೆದ್ದೆತ್ತಿನ ಬಾಲ ಹಿಡಿಯೋರು. ನಾನು ಜೆಡಿಎಸ್ ಅಧ್ಯಕ್ಷ ಆಗಿದ್ದಾಗಲೇ 59 ಸೀಟ್ ಗೆದ್ದಿದ್ದು ಬಿಟ್ಟರೆ ಮತ್ತೆ ಅಷ್ಟುಸ್ಥಾನ ಪಡೆದೇ ಇಲ್ಲ ಎಂದರು. ರಾಜ್ಯದಲ್ಲಿರೋದು 40 ಪರ್ಸೆಂಟ್ ಸರ್ಕಾರ ಎಂದಾಗ ಬಸವರಾಜ ಬೊಮ್ಮಾಯಿ ಸಾಕ್ಷಿ ಕೇಳುತ್ತಿದ್ದರಲ್ವಾ? ಮಾಡಾಳು ವಿರೂಪಾಕ್ಷಪ್ಪ ಮಗನ ಕೇಸ್ಗಿಂತ ಸಾಕ್ಷಿ ಬೇಕಾ? ಬಿಜೆಪಿಯವರು ಒಂದೇ ಒಂದು ಕ್ಷಣ ನೀವು ಅಧಿಕಾರದಲ್ಲಿರಕೂಡದು. ರಾಜೀನಾಮೆ ನೀಡಿ ಹೋಗಿ, ಕೇವಲ ಮಗ ಮಾತ್ರ ಅಲ್ಲ ಮಾಡಾಳು ವಿರೂಪಾಕ್ಷ ಪ್ಪ ಅವರನ್ನೂ ಬಂಧಿಸಿ ಎಂದು ಒತ್ತಾಯಿಸಿದರು.
ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?: ಮಾಡಾಳು ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ
ಶಿವಲಿಂಗೇಗೌಡಗೆ ಟಿಕೆಟ್: ಶಿವಲಿಂಗೇಗೌಡರು ನನ್ನ ಹೊಗಳಿದ ಎನ್ನೋ ಒಂದೇ ಕಾರಣಕ್ಕೆ ಜೆಡಿಎಸ್ನವರು ದೂರ ಮಾಡಿದರು. ನಾನು ನಿನಗೆ ಆಹ್ವಾನ ಕೊಡುತ್ತೇನೆ. ನಮ್ಮ ಪಕ್ಷಕ್ಕೆ ಬಂದು ಸೇರಿಕೋ ಅವರ ಜೊತೆ ನಾನು ಮಾತಾಡಿದ್ದೇನೆ. ಅವರು ನನ್ನ ಜತೆಗೆ ಬರಲು ಒಪ್ಪಿಕೊಂಡಿದ್ದಾರೆ. ಅವರಿಗೆ ಕೊಡೋ ಒಂದೊಂದು ಓಟೂ ಕೂಡ ನನಗೆ ಕೊಟ್ಟಂತೆ. ಅರಸೀಕೆರೆ ಕ್ಷೇತ್ರದಿಂದ ಶಿವಲಿಂಗೇಗೌಡರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿದರು. ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿದ್ದು ನಾನು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಲ್ಲ. ಎತ್ತಿನಹೊಳೆ ಯೋಜನೆಯನ್ನೇ ಕುಮಾರಸ್ವಾಮಿ ವಿರೋಧಿಸಿದರು. ಯೋಜನೆ ಉದ್ಘಾಟನೆಗೆ ಕೂಡ ಕುಮಾರಸ್ವಾಮಿ ಬರಲಿಲ್ಲ. ಶಿವಲಿಂಗೇಗೌಡ ಅವರನ್ನೂ ಹೋಗದಂತೆ ಹೇಳಿದರು. ಆದರೂ ಶಿವಲಿಂಗೇಗೌಡ ಬಂದಿದ್ದರು ಎಂದರು.
ಬಿಜೆಪಿಯವರು ನುಡಿದಂತೆ ನಡೆಯಲ್ಲ. ನಾವು ಬಸವಣ್ಣನ ನಾಡಿನಿಂದ ಯಾತ್ರೆ ಆರಂಭಿಸಿದ್ದೇವೆ. ಭ್ರಷ್ಟ, ಬಿಜೆಪಿ, ಅವಕಾಶವಾದಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆಲ್ಲಿಸಿ. ಸೋಲಿನ ಭಯದಿಂದ ಇವರು ಜಿಪಂ, ತಾಪಂ ಚುನಾವಣೆಯನ್ನೂ ಮಾಡಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ. ಬಿಜೆಪಿಯವರು ಮಾಡಿದ್ರಾ? ಯಡಿಯೂರಪ್ಪ ಅವರು ನಾನು ರೈತನ ಮಗ ಅಂತಾರೆ. ಹಾಗಿದ್ದರೆ ನಾವ್ಯಾರಪ್ಪ? ಬಿಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ ಎಂದು ಕಿಡಿಕಾರಿದರು.
ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ
ಬಿಜೆಪಿಯವರು ಜನರಿಗೆ ದೇಶಭಕ್ತಿ ಬಗ್ಗೆ ಪಾಠ ಹೇಳೋಕೆ ಶುರು ಮಾಡಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪುಂಖಾನು ಪುಂಖವಾಗಿ ದೇಶಪ್ರೇಮದ ಬಗ್ಗೆ ಮಾತಾಡುತ್ತಾರೆ. ಆದರೆ ಬಿಜೆಪಿ ಆರೆಸ್ಸೆಸ್ನವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರಲ್ಲಿ ಯಾರಾದರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಹೆಡಗೆವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಹೋರಾಟ ಮಾಡಿದ್ದಾರಾ? ಹಾಗಿದ್ದರೆ ಅವರು ಯಾಕೆ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ? ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.