
ಬೆಂಗಳೂರು, (ಮೇ.21): ಕೊರೋನಾ ಸೋಂಕಿತರು ಹೋಮ್ ಐಸೊಲೇಶನ್ನಲ್ಲಿ ಇರುವಂತೆ ಹೇಳಿದ್ದ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಹೋಮ್ ಐಸೊಲೇಶನ್ನಲ್ಲಿದ್ದ 778 ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು ಎಎಪಿ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷರಾದ ಬಿ.ಟಿ. ನಾಗಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಪರಿಣಾಮ ಆಸ್ಪತ್ರೆಗಳ ಮೇಲೆ ಒತ್ತಡ ಅಧಿಕವಾಗಿರುವ ಕಾರಣ ಸೋಂಕಿತರು ಹೋಮ್ ಐಸೊಲೇಶನ್ಗೆ ಒಳಗಾಗುವಂತೆ ಸರ್ಕಾರ ತಿಳಿಸಿತ್ತು. ಆದರೆ, ಮನೆ ಆರೈಕೆಯಲ್ಲಿದ್ದ ಕೊರೋನಾ ಸೋಂಕಿತರಿಗೆ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಪ್ರತಿ ದಿವಸ ಸೂಕ್ತ ವೈದ್ಯಕೀಯ ಉಪಚಾರಗಳು, ಸಹಾಯ , ಮಾರ್ಗದರ್ಶನ ಹಾಗೂ ಆರೈಕೆ ಇದ್ಯಾವುದೂ ಸಿಗದ ಕಾರಣದಿಂದ ಇದೇ ಮೇ ತಿಂಗಳ 18 ದಿವಸಗಳಲ್ಲಿ 778 ಮಂದಿ ಬೆಂಗಳೂರಿಗರು ಸಾವನ್ನಪ್ಪಿದ್ದಾರೆ ಎಂದರು.
ಸರ್ಕಾರದ ಬಳಿ 1000 ಅನಾಥ ಶವಗಳ ಅಸ್ಥಿ: ಸಚಿವ ಅಶೋಕ್
ಹೀಗಾಗಿ ಈ ಎಲ್ಲಾ ಸಾವುಗಳಿಗೆ ಸರ್ಕಾರ ನಡೆಸುವವರ ಸಂಪೂರ್ಣ ಬೇಜವಾಬ್ದಾರಿತನ, ನಿರ್ಲಕ್ಷ್ಯತನವೇ ನೇರ ಕಾರಣವಾಗಿದ್ದು ಇದು ಸರ್ಕಾರಿ ಪ್ರಾಯೋಜಿತ ಕಗ್ಗೊಲೆಗಳು ಎಂದು ಆರೋಪಿಸಿದರು.
ಸರ್ಕಾರವು ಸೋಂಕು ಪೀಡಿತರಿಗೆ ಬೆಡ್ ಗಳನ್ನು ಪೂರೈಸಲು ಅಸಹಾಯಕವಾಗಿ ಮನೆಗಳಲ್ಲಿಯೇ ಆರೈಕೆ ಪಡೆದುಕೊಳ್ಳಬೇಕೆಂದು ಹೇಳಿ ಕೇವಲ ಕೈ ತೊಳೆದುಕೊಂಡಿತೇ ಹೊರತು ಆ ರೋಗಿಗಳ ಸ್ಥಿತಿಗತಿ ಏನಾಗಿದೆ ಎಂಬ ಪರಿಶೀಲನೆಯನ್ನು ಮಾಡಲೇ ಇಲ್ಲ.ಹೋಮ್ ಐಸೊಲೇಷನ್ ಮಾರ್ಗದರ್ಶನ ಸೂತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೆ ಇಷ್ಟೆಲ್ಲ ಸಾವು ನೋವುಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯಕೀಯ ಸಲಹೆ ಉಪಚಾರಗಳು ಸಿಕ್ಕಿದ್ದಲ್ಲಿ ಈ ಸಾವುಗಳನ್ನು ತಡೆಯಬಹುದಾಗಿತ್ತು . ಅದನ್ನು ಬಿಟ್ಟು ಬಿಬಿಎಂಪಿ ಹಾಗೂ ಸರ್ಕಾರದ ಮಂತ್ರಿಗಳು ಬರೀ ಸುಳ್ಳುಗಳನ್ನೇ ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದೇ ಈ ಎಲ್ಲಾ ಸಾವುಗಳಿಗೆ ಕಾರಣ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.